ADVERTISEMENT

ರೈತ ಸೇವಾ ಸಂಘಕ್ಕೆ ಚುನಾವಣೆ: ಜೆಡಿಎಸ್ ಬೆಂಬಲಿತರ ಮೇಲುಗೈ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2011, 19:30 IST
Last Updated 22 ಮಾರ್ಚ್ 2011, 19:30 IST
ರೈತ ಸೇವಾ ಸಂಘಕ್ಕೆ ಚುನಾವಣೆ: ಜೆಡಿಎಸ್ ಬೆಂಬಲಿತರ ಮೇಲುಗೈ
ರೈತ ಸೇವಾ ಸಂಘಕ್ಕೆ ಚುನಾವಣೆ: ಜೆಡಿಎಸ್ ಬೆಂಬಲಿತರ ಮೇಲುಗೈ   

ವಿಜಯಪುರ: ಸಮೀಪದ ಚನ್ನರಾಯಪಟ್ಟಣ ಗ್ರಾಮದ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಯ 8 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.ಆ ಮೂಲಕ ಬಹಳ ವರ್ಷಗಳಿಂದ ಕಾಂಗ್ರೆಸ್ ಬೆಂಬಲಿಗರ ಹಿಡಿತದಲ್ಲಿದ್ದ ಸಂಘವು ಜೆಡಿಎಸ್ ತೆಕ್ಕೆಗೆ ಬಿದ್ದಿದೆ. 

ಸಾಲಗಾರರಲ್ಲದ ಕ್ಷೇತ್ರದ 5 ಸ್ಥಾನಗಳ ಪೈಕಿ 4ರಲ್ಲಿ ಜೆಡಿಎಸ್ ಬೆಂಬಲಿತರು, ಒಂದು ಸ್ಥಾನದಲ್ಲಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ. ಜೆಡಿಎಸ್ ಬೆಂಬಲಿತ ಸಿ.ಎಂ.ವಸಂತ, ವೈ.ಪಿಲ್ಳೇಗೌಡ, ನಾಗನಾಯ್ಕನಹಳ್ಳಿ ಪಿಳ್ಳೇಗೌಡ, ಸಿ.ಎಂ.ಲಕ್ಷ್ಮಣ ಮತ್ತು ಕಾಂಗ್ರೆಸ್ ಬೆಂಬಲಿತ ಎಸ್.ಅಶ್ವತ್ಥಪ್ಪ ಚುನಾಯಿತರಾಗಿದ್ದಾರೆ.

ಸಾಲಗಾರರ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಬಾಬು, ಜೆಡಿಎಸ್ ಬೆಂಬಲಿತ ಎಂ.ಕಾಂತ ನಾಗರಾಜು, ಎಸ್‌ಸಿ, ಎಸ್‌ಟಿ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಕಾಟಪ್ಪ ಆಯ್ಕೆಯಾಗಿದ್ದಾರೆ.
ಮಾಜಿ ಶಾಸಕ ಜಿ.ಚಂದ್ರಣ್ಣ ಅವರು ನೂತನ ಸದಸ್ಯರನ್ನು ಅಭಿನಂದಿಸಿ, ಶೀಘ್ರವೇ ಚನ್ನರಾಯಪಟ್ಟಣ, ಹಾರೋಹಳ್ಳಿ, ನಲ್ಲೂರು, ಕೋರಮಂಗಲ ಗ್ರಾ.ಪಂ.ಗಳಿಗೆ ಚುನಾವಣೆ ನಡೆಯಬೇಕಾಗಿದ್ದು, ಜೆಡಿಎಸ್‌ನ ಸಂಘಟನೆ ತಾಲ್ಲೂಕಿನಲ್ಲಿ ಬಲಿಷ್ಟಗೊಂಡಿದೆ. ಸಂಘಗಳಿಗೆ ಚುನಾಯಿತರಾದ ಸದಸ್ಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಸಂಘದ ಏಳಿಗೆಗೆ ಶ್ರಮಿಸಬೇಕು ಎಂದರು.

ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮುನಿಶಾಮಿಗೌಡ, ಕಿಮ್ಸ್ ಅಧ್ಯಕ್ಷ ಬಿ.ಮುನೇಗೌಡ, ಕೋಡಗುರ್ಕಿ ವೆಂಕಟೇಗೌಡ, ಪಿಳ್ಳಮುನಿಶಾಮಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶ್ರೀರಾಮಯ್ಯ, ಮಾಜಿ ಅದ್ಯಕ್ಷ ಕೆ.ವೀರಭದ್ರಯ್ಯ, ಬಮುಲ್ ಮಾಜಿ ನಿರ್ದೇಶಕ ಎನ್.ನಾರಾಯಣಸ್ವಾಮಿ, ತಾ.ಪಂ.ಅಧ್ಯಕ್ಷ ಬೀಡಿಗಾನಹಳ್ಳಿ ಶಿವಣ್ಣ, ಮಾಜಿ ಅಧ್ಯಕ್ಷ ಐ.ಎಸ್.ಆಂಜಿನಪ್ಪ, ಕೆ.ಸದಾಶಿವಯ್ಯ, ಟಿಎಪಿಎಂಎಸ್ ಅಧ್ಯಕ್ಷ ಇರಿಗೇನಹಳ್ಳಿ ಶ್ರೀನಿವಾಸ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.