ವಿಜಯಪುರ: ‘ಮೈತ್ರಿ ಸರ್ಕಾರ ರೈತರ ಸಾಲ ಮನ್ನಾ ಮಾಡಿರುವುದಾಗಿ ಘೋಷಣೆ ಮಾಡಿತ್ತು. ಮುಖ್ಯಮಂತ್ರಿ ಕಚೇರಿಯಲ್ಲಿ ಅಂಚೆ ಮೂಲಕ ರೈತರ ಬೆಳೆ ಸಾಲಮನ್ನಾ ಯೋಜನೆಯಡಿ ಸಾಲ ಮನ್ನಾ ಮಾಡಲಾಗಿದೆ ಎಂದು ಪತ್ರ ಕಳುಹಿಸಿದ್ದಾರೆ. ಆದರೂ ಬ್ಯಾಂಕಿನಿಂದ ನೊಟೀಸ್ ಜಾರಿ ಮಾಡುತ್ತಲೇ ಇದ್ದಾರೆ’ ಎಂದು ರೈತ ಮುನಿರಾಜು ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರ ಬಳಿ ಅಳಲು ತೋಡಿಕೊಂಡರು.
ಇಲ್ಲಿನ ಮಾರುತಿ ನಗರದ ರೈತ ಸಿ.ಮುನಿರಾಜು, ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬೆಳೆಸಾಲ ₹ 2 ಲಕ್ಷ ಪಡೆದು ಟೊಮೆಟೊ ಬೆಳೆದಿದ್ದೆ. ಮೂರು ಬೆಳೆಗಳೂ ನಷ್ಟವಾಯಿತು. ಬೆಳೆ ಉತ್ತಮವಾಗಿ ಆದಾಗ ಬೆಲೆ ಸಿಗಲಿಲ್ಲ. ಬೆಲೆ ಇದ್ದಾಗ ಬೆಳೆ ಸರಿಯಾಗಿ ಆಗಲಿಲ್ಲ. ಸುಮಾರು ₹ 80 ಸಾವಿರದಷ್ಟು ಬಡ್ಡಿ ಕಟ್ಟಿದ್ದೇನೆ. ಈಗ ₹ 70 ಸಾವಿರ ಬಡ್ಡಿ ಸೇರಿಸಿ ಸಾಲ ಕಟ್ಟುವಂತೆ ನೊಟೀಸ್ ಕಳುಹಿಸುತ್ತಲೇ ಇದ್ದಾರೆ’ ಎಂದು ಶಾಸಕರೆದುರು ಆತಂಕ ವ್ಯಕ್ತಪಡಿಸಿದರು.
‘ಬ್ಯಾಂಕ್ನವರೆ ಸಾಲ ಮನ್ನಾ ಆಗಿದೆ ಎಂದು ಬ್ಯಾಂಕ್ಗೆ ಕರೆಸಿಕೊಂಡು ದಾಖಲೆಗಳೆಲ್ಲ ತೆಗೆದುಕೊಂಡರು. ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಡುಗಡೆ ಪತ್ರವನ್ನೂ ಕಳುಹಿಸಿಕೊಟ್ಟಿದ್ದರು. ಇದರಿಂದ ನಾನು ಧೈರ್ಯವಾಗಿದ್ದೆ. ಈಗ ಋಣ ಸಮಾಧಾನ ಯೋಜನೆ 2019-20 (ಅನುತ್ಪಾದಕ ಆಸ್ತಿ ಮತ್ತು ಎ.ಯು.ಸಿ.ಎ ಕಂತು) ಏಕಕಾಲದಲ್ಲಿ ಒಂದೇ ಬಾರಿಗೆ ಇತ್ಯರ್ಥಗೊಳಿಸುವಿಕೆ ಯೋಜನೆ ಡಿ.31 ಕ್ಕೆ ಕೊನೆಗೊಳ್ಳಲಿದ್ದು, ಅಷ್ಟರೊಳಗೆ ತೀರುವಳಿ ಮಾಡಿ ಎಂದು ನೋಟಿಸ್ ಕಳುಹಿಸುತ್ತಿರುವುದರಿಂದ ಆತಂಕ ಶುರುವಾಗಿದೆ. ಯಾವುದರಲ್ಲಿ ಸಾಲ ತೀರಿಸಲಿ. ಏನಾದರು ಮಾಡಿ, ನನ್ನನ್ನು ಸಾಲದಿಂದ ಮುಕ್ತನನ್ನಾಗಿಸಿ’ ಎಂದು ನೋವು ತೋಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.