ದೇವನಹಳ್ಳಿ: ‘ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ₹ 49.52 ಲಕ್ಷ ಮೌಲ್ಯದ 619 ಕೆ.ಜಿ. ರಕ್ತಚಂದನವನ್ನು ವಶಪಡಿಸಿಕೊಂಡು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಭೀಮಾ ಶಂಕರ್ ಗುಳೇದ್ ತಿಳಿಸಿದರು.
‘ಹೊಸಕೋಟೆ ಮತ್ತು ಸೂಲಿಬೆಲೆ ವ್ಯಾಪ್ತಿಯಲ್ಲಿನ ಹೆದ್ದಾರಿ ರಸ್ತೆ ಹೊರತುಪಡಿಸಿ ಸಂಪರ್ಕ ಕಲ್ಪಿಸುವ ಇತರ ರಸ್ತೆಗಳ ಮೂಲಕ ರಕ್ತಚಂದನ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸ್ಥಳೀಯ ಪೊಲೀಸ್ ಠಾಣೆ ಅಧಿಕಾರಿಗಳಿಗೆ ವಿಷಯ ತಿಳಿಸಲಾಗಿತ್ತು. ದೇವನಹಳ್ಳಿ ಉಪವಿಭಾಗದ ಸಹಾಯಕ ಪೊಲೀಸ್ ಅಯುಕ್ತ ಪಿ.ಟಿ.ಸುಬ್ರಮಣ್ಯ ನೇತೃತ್ವದಲ್ಲಿ ದೇವನಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಸಿದ್ದರಾಜು, ಸಬ್ ಇನ್ಸ್ಪೆಕ್ಟರ್ ನಾಗರಾಜು, ಸಿಬ್ಬಂದಿ ಶ್ರೀನಿವಾಸ್ ರಾವ್, ವಿಜಯ ಕುಮಾರ್ ನಾಯಕ್, ತೈಯಬಹೊಂಗಲ, ಪಾಂಡುರಂಗ ಅವರಿದ್ದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಾರ್ಯಾಚರಣೆ ತಂಡಕ್ಕೆ ₹ 10 ಸಾವಿರ ಬಹುಮಾನ ಘೋಷಿಸಲಾಗಿದೆ’ ಎಂದು ಹೇಳಿದರು.
‘ದೇವನಹಳ್ಳಿ ನಗರದ ಸೌತೇಗೌಡನಹಳ್ಳಿಯ ಸಮೀವುಲ್ಲಾ, ರವಿಚಂದ್ರ, ದಾದಾಪೀರ್ ಹಾಗೂ ಕೊಸಕೋಟೆ ರಾಮ್ಪುರದ ನೌಷದ್ ಬಂಧಿತ ಆರೋಪಿಗಳು. 5ನೇ ಆರೋಪಿ ವಿನೋದ್ ತಲೆಮರಿಸಿಕೊಂಡಿದ್ದಾನೆ. 25 ರಕ್ತಚಂದನದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಅವರು ತಿಳಿಸಿದರು.
ಎಸಿಪಿ ಸುಬ್ರಮಣ್ಯ, ಪಿಐ ಸಿದ್ದರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.