ADVERTISEMENT

ವಾಲ್ಮೀಕಿ ಭವನಕ್ಕೆ ₹ 1 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 6:10 IST
Last Updated 21 ಅಕ್ಟೋಬರ್ 2021, 6:10 IST
ದೇವನಹಳ್ಳಿ ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಪುಷ್ಪನಮನ ಸಲ್ಲಿಸಿದರು
ದೇವನಹಳ್ಳಿ ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಪುಷ್ಪನಮನ ಸಲ್ಲಿಸಿದರು   

ದೇವನಹಳ್ಳಿ: ‘ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣದ ಮೂಲಕ ರಾಮರಾಜ್ಯದ ಪರಿಕಲ್ಪನೆ ಕಾಣಲು ಸಾಧ್ಯ’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.

ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಅವರು ಮಾತನಾಡಿದರು.

ವಾಲ್ಮೀಕಿ ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲ. ಅವರು ದೇಶದ ಆಸ್ತಿ. ಅವರು ಕೊಟ್ಟಿರುವ ರಾಮಾಯಣ ಗ್ರಂಥದಲ್ಲಿನ ಅಂಶಗಳು ಮಾನವನ ಜೀವನಕ್ಕೆ ರಹದಾರಿಯಾಗಿವೆ ಎಂದರು.

ADVERTISEMENT

ರಾಮಾಯಣ, ಮಹಾಭಾರತ ಇಡೀ ವಿಶ್ವ ಕಂಡಂತಹ ಮಹಾನ್ ಗ್ರಂಥಗಳಾಗಿವೆ. ಜನರ ಬದುಕಿಗೆ ಪೂರಕವಾಗಿ ಸಂಸ್ಕೃತಿ ಮತ್ತು ಸಂಸ್ಕಾರ ಕಲಿಸುವ ನಿಟ್ಟಿನಲ್ಲಿ ಮುನ್ನುಡಿ ಬರೆದಿರುವುದು ಸಂತಸದ ವಿಷಯ ಎಂದು ಹೇಳಿದರು.

ಮಹಾನ್ ಪುರುಷರ ಆದರ್ಶಗಳನ್ನು ಪಾಲಿಸಬೇಕು. ವಾಲ್ಮೀಕಿ ಭವನ ಕಾಮಗಾರಿ ನನೆಗುದಿಗೆ ಬಿದ್ದಿದೆ. ₹ 1 ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ಕಾಮಗಾರಿ ಆರಂಭಗೊಳ್ಳುತ್ತಿದೆ. ಮುಂದಿನ ವರ್ಷ ವಾಲ್ಮೀಕಿ ಜಯಂತಿಯನ್ನು ಅಲ್ಲಿಯೇ ಆಚರಿಸಲಾಗುವುದು. ವಿಶ್ವಕ್ಕೆ ರಾಮಾಯಣದಂತಹ ಮಹಾನ್ ಗ್ರಂಥ ನೀಡಿದ ವಾಲ್ಮೀಕಿ ಮಾನವ ಕುಲಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.

ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್ ಮಾತನಾಡಿ, ವಾಲ್ಮೀಕಿಯು ರಾಮಾಯಣದಲ್ಲಿ ರಾಮನ ಜೀವನದ ವೃತ್ತಾಂತವನ್ನಷ್ಟೇ ಹೇಳಿಲ್ಲ. ರಾಜನೀತಿ, ಮಾನವೀಯ ಮೌಲ್ಯ, ಪ್ರಾಮಾಣಿಕತೆ, ಪರಿಶ್ರಮವನ್ನು ಸಮಾಜಕ್ಕೆ ಸಾರಿದ ಮಹಾನ್ ಮೇಧಾವಿ. ಅವರ ತತ್ವ, ಆದರ್ಶ, ಚಿಂತನೆಗಳು ಇಂದಿಗೂ ಜೀವಂತವಾಗಿವೆ ಎಂದರು.

ಜೆಡಿಎಸ್ ಎಸ್‌ಟಿ ಘಟಕದ ತಾಲ್ಲೂಕು ಅಧ್ಯಕ್ಷ ಯರ್ತಿಗಾನಹಳ್ಳಿ ಶಿವಣ್ಣ ಮಾತನಾಡಿ, ಮನುಕುಲಕ್ಕೆ ವಾಲ್ಮೀಕಿ ಅವರ ರಾಮಾಯಣ ಕೃತಿ ಉತ್ತಮ ಕೊಡುಗೆ ನೀಡಿದೆ. ಮಹನೀಯರ ಉತ್ತಮ ವಿಚಾರಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು. ನುಡಿದಂತೆ ನಡೆಯುವುದು ವಾಲ್ಮೀಕಿ ರಾಮಾಯಣದಿಂದ ತಿಳಿದುಬರುತ್ತದೆ ಎಂದು ಹೇಳಿದರು.

ಪುರಸಭಾ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ನಳಿನಾಕ್ಷಿ, ತಾಲ್ಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ನಾಗೇಶ್ ಬಾಬು, ಪ್ರಧಾನ ಕಾರ್ಯದರ್ಶಿ ಆವತಿ ರಾಮಚಂದ್ರ, ಜಿಲ್ಲಾ ಜೆಡಿಎಸ್ ಎಸ್‌ಟಿ ಘಟಕದ ಅಧ್ಯಕ್ಷ ನಾಗರಾಜ್, ಮಾಜಿ ಪುರಸಭಾ ಅಧ್ಯಕ್ಷ ಮೂರ್ತಿ, ಕಾರಹಳ್ಳಿ ಶ್ರೀನಿವಾಸ್, ಲಕ್ಷ್ಮೀನಾರಾಯಣ (ಲಚ್ಚಿ), ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಅನಂತಕುಮಾರಿ, ಮಾಳಿಗೇನಹಳ್ಳಿ ಎಂಪಿಸಿಎಸ್ ಮಾಜಿ ಅಧ್ಯಕ್ಷ ವೆಂಕಟೇಶ್ ಮೂರ್ತಿ, ಮುಖಂಡರಾದ ಶಾಮಣ್ಣ, ಸೂರ್ಯಕಲಾ ಮೂರ್ತಿ, ಮಾಚಪ್ಪ, ಲಕ್ಷ್ಮೀಕಾಂತ್, ಎಸ್. ಗುರಪ್ಪ ಹಾಗೂ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.