ADVERTISEMENT

ಈಗಿರುವ ಕೈ ನಾಯಕರು ಗುಂಡಿಗೆ ಎದೆಯೊಡ್ಡಿಲ್ಲ: ಎ. ನಾರಾಯಣಸ್ವಾಮಿ

ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಟೀಕೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 4:24 IST
Last Updated 10 ಆಗಸ್ಟ್ 2022, 4:24 IST
ಸಚಿವ ಎ. ನಾರಾಯಣಸ್ವಾಮಿ
ಸಚಿವ ಎ. ನಾರಾಯಣಸ್ವಾಮಿ   

ಆನೇಕಲ್:‘ಸಿದ್ದರಾಮಯ್ಯ ಅವರಾಗಲಿ ಅಥವಾ ಸಿದ್ದರಾಮಯ್ಯ ಅವರ ವಂಶಸ್ಥರಾಗಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ಈಗಿರುವ ಕಾಂಗ್ರೆಸ್‌ನವರು ಬ್ರಿಟಿಷರ ಗುಂಡಿಗೆ ಎದೆಯೊಡ್ಡಿ ಹೋರಾಟ ಮಾಡಿಲ್ಲ. ತಾವು ಸ್ವಾತಂತ್ರ್ಯ ಹೋರಾಟದ ಭವಿಷ್ಯದ ಪೀಳಿಗೆ ಎಂಬ ಮುದ್ರೆ ಹಾಕಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದುಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಟೀಕಿಸಿದರು.

ತಾಲ್ಲೂಕಿನ ಸರ್ಜಾಪುರದಲ್ಲಿ ಮಂಗಳವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಆನೇಕಲ್‌ ಅಭಿವೃದ್ಧಿಗೆ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಯಾವುದೇ ತಾರತಮ್ಯ ಮಾಡದೆ ಹಣ ಬಿಡುಗಡೆ ಮಾಡಿದ್ದಾರೆ. ಎಷ್ಟು ಹಣ ಬಿಡುಗಡೆ ಮಾಡಿದೆ ಎಂಬ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಬೇಕು. ಕಳಪೆ ಕಾಮಗಾರಿ ಬಗ್ಗೆ ತನಿಖೆ ಮಾಡುವಂತೆ ಸರ್ಕಾರಕ್ಕೆ ಪತ್ರ ನೀಡಲಾಗಿದೆ. ಇದರ ವರದಿ ಬಂದ ನಂತರ ನೈಜತೆಯು ಜನರಿಗೆ ತಿಳಿಯುತ್ತದೆ ಎಂದರು.

ADVERTISEMENT

‘ಆನೇಕಲ್‌ನಲ್ಲಿ ಪಕ್ಷವು ಯಾರಿಗೆ ಟಿಕೆಟ್‌ ನೀಡಿದರೂ ಪ್ರಾಮಾಣಿಕವಾಗಿ ಕೆಲಸ ಮಾಡಿ ಅಭ್ಯರ್ಥಿಯನ್ನು ಗೆಲ್ಲಿಸುವುದು ನಮ್ಮ ಜವಾಬ್ದಾರಿ. ನನಗೆ ಅಥವಾ ನನ್ನ ಕುಟುಂಬದವರಿಗೆ ಟಿಕೆಟ್‌ ಸಿಗಬೇಕು ಎಂಬ ಕುಟುಂಬ ರಾಜಕಾರಣ ನಮ್ಮದಲ್ಲ. ನಮ್ಮದು ತತ್ವ, ಸಿದ್ಧಾಂತದ ರಾಜಕಾರಣ. ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿರುವ ಏಕೈಕ ಪಕ್ಷ ಬಿಜೆಪಿಯಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.