ದೊಡ್ಡಬಳ್ಳಾಪುರ: ಭಾರತ-ಚೀನಾ ಗಡಿಯ ಲಡಾಖ್ನ ಪೂರ್ವಭಾಗದಲ್ಲಿ ನಡೆದ ಹೋರಾಟದಲ್ಲಿ ಹುತಾತ್ಮರಾದ ಸಂತೋಷಬಾಬು, ಪಳನಿ, ಸಿಪಾಯಿ ಓಝಾ ಸೇರಿ 23 ಯೋಧರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಬಣದ ವತಿಯಿಂದ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ನಮನ ಸಲ್ಲಿಸಲಾಯಿತು.
ಯೋಧರ ತ್ಯಾಗ ಬಲಿದಾನವನ್ನು ಸ್ಮರಿಸಿದ ಕಾರ್ಯಕರ್ತರು, ಚೀನಾ ವರ್ತನೆಗೆ ಆಕ್ರೋಶ ವ್ಯಕ್ತಿಪಡಿಸಿ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಪ್ರತಿಕೃತಿ ದಹಿಸಿದರು. ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ, ಭಾರತದೊಂದಿಗೆ ಗಡಿ ತಗಾದೆ ತೆಗೆದಿರುವ ಚೀನಾಗೆ ನಮ್ಮ ಸೈನಿಕರು ದಿಟ್ಟ ಉತ್ತರ ನೀಡಿದ್ದಾರೆ. ಈ ಸಂದರ್ಭದಲ್ಲಿ ಯೋಧರು ಹುತಾತ್ಮರಾಗಿರುವುದು ದುರದೃಷ್ಟಕರ. ಯೋಧರ ಧೈರ್ಯ, ಸಾಹಸಗಳನ್ನು ಸದಾ ಸ್ಮರಿಸಬೇಕಿದೆ. ನೇಪಾಳಕ್ಕೂ ಚೀನಾ ಕುಮ್ಮಕ್ಕು ನೀಡುವ ಮೂಲಕ ದೇಶದ ಗಡಿ ವಿಚಾರದಲ್ಲಿ ತೊಂದರೆ ನೀಡುತ್ತಿದೆ ಎಂದರು.
ಭಾರತ ಸದಾ ಶಾಂತಿ ಬಯಸುವ ದೇಶವಾಗಿದೆ. ಆದರೆ, ಸೇನೆ ಸರ್ವ ಸನ್ನದವಾಗಿದ್ದು, ಅದು ಯಾರನ್ನೂ ಬಿಡುವುದಿಲ್ಲ. ಸಾರ್ವಭೌಮತ್ವ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎನ್ನುವ ಸಂದೇಶ ರವಾನಿಸಿರುವುದು ಹೆಮ್ಮೆಯ ವಿಚಾರ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧರ ಸಂಘದ ಅಧ್ಯಕ್ಷ ಆಂಜಿನಪ್ಪ,ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಎಚ್.ಎಸ್.ವೆಂಕಟೇಶ್,ಪ್ರಧಾನ ಕಾರ್ಯದರ್ಶಿ ಎಸ್.ಎಲ್.ಎನ್.ವೇಣು, ಗೌರವ ಅಧ್ಯಕ್ಷ ಪು.ಮಹೇಶ್, ತಾಲ್ಲೂಕು ಉಪಾಧ್ಯಕ್ಷ ಮಲ್ಲಾತ್ತಹಳ್ಳಿ ಆನಂದ್ಕುಮಾರ್, ಖಜಾಂಚಿ ಸೊಣ್ಣಮಾರನಹಳ್ಳಿ ಆನಂದ್, ಕಾರ್ಯದರ್ಶಿ ಜೋಗಹಳ್ಳಿ ಅಮ್ಮು,ಸಂಚಾಲಕ ಕೆ.ಆರ್.ಮಂಜುನಾಥ್, ನಗರ ಅಧ್ಯಕ್ಷ ಬಷೀರ್,ಮುಖಂಡರಾದ ಮುಕ್ಕೇನಹಳ್ಳಿರವಿ, ಹೇಮಂತ್ರಾಜು, ಮಾರುತಿ ಸೂರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.