ADVERTISEMENT

ದೇವನಹಳ್ಳಿ: ವಿಮಾನದಲ್ಲಿ ಸಿಗರೇಟ್‌ ಸೇದಿದ ಯುವತಿ ಪೊಲೀಸರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 4:27 IST
Last Updated 9 ಮಾರ್ಚ್ 2023, 4:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾರ್ಚ್‌ 5ರಂದು ಕೋಲ್ಕತ್ತದಿಂದ ಆಗಮಿಸಿದ್ದ ಇಂಡಿಗೊ ವಿಮಾನದ ಒಳಗಿನ ಶೌಚಾಲಯದಲ್ಲಿ ಧೂಮಪಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ 24 ವರ್ಷದ ಯುವತಿ ವಿರುದ್ಧ ದೂರು ದಾಖಲಾಗಿದೆ.

ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿ ಕೆ. ಶಂಕರ್‌ ನೀಡಿದ ದೂರಿನ ಅನ್ವಯ ಪ್ರಿಯಾಂಕ ಸಿ. ಎಂಬುವರನ್ನು ವಿಮಾನ ಬೆಂಗಳೂರಿಗೆ ಆಗಮಿಸಿದ ತಕ್ಷಣವೇ ಏರ್‌ಪೋರ್ಟ್‌ ಪೊಲೀಸರು ವಶಕ್ಕೆ ಪಡೆದು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಗೊಳಿಸಿದ್ದಾರೆ.

‌ಆರೋಪಿಯು ವಿಮಾನದ ಒಳಗಿನ ಶೌಚಾಲಯದಲ್ಲಿ ಸಿಗರೇಟ್‌ ಸೇವನೆ ಮಾಡುತ್ತಿರುವ ಬಗ್ಗೆ ಅನುಮಾನಗೊಂಡ ಸಿಬ್ಬಂದಿ ಬಾಗಿಲು ತೆರೆಯುವಂತೆ ತಾಕೀತು ಮಾಡಿದರು.

ADVERTISEMENT

ಬಾಗಿಲು ತೆರೆದೊಡನೆ ಸಿಗರೇಟ್‌ ತುಂಡು ಬಿದ್ದಿರುವುದನ್ನು ಗಮನಿಸಿ, ಯಾವುದೇ ಅಗ್ನಿ ಅವಘಡ ಸಂಭವಿಸದಂತೆ ಸಿಗರೇಟ್‌ ಮೇಲೆ ನೀರು ಹಾಕಿ ಬೆಂಕಿ ನಂದಿಸಿದ್ದಾರೆ.

ಕೋಲ್ಕತ್ತದಿಂದ ಬೆಂಗಳೂರಿಗೆ 2.5 ಗಂಟೆ ವಿಮಾನ ಸಂಚಾರದ ಅವಧಿಯಲ್ಲಿ ಬೆಂಗಳೂರು ತಲುಪುವ ಅರ್ಧಗಂಟೆಗೂ ಮುನ್ನ ಆರೋಪಿಯೂ ಸಿಗರೇಟ್‌ ಸೇವನೆ ಮಾಡಿದ್ದರು ಎನ್ನಲಾಗಿದೆ.

ಘಟನೆ ಬಗ್ಗೆ ವಿಮಾನದ ಕ್ಯಾಪ್ಟನ್‌ಗೆ ಮಾಹಿತಿ ನೀಡಿರುವ ಸಿಬ್ಬಂದಿಯು ವಿಮಾನವೂ ಬೆಂಗಳೂರು ತಲುಪುತ್ತಿದ್ದಂತೆಯೇ ಆರೋಪಿಯನ್ನು ಏರ್‌ಪೋರ್ಟ್‌ ಪೊಲೀಸ್‌ ಠಾಣೆಗೆ ಕರೆದೊಯ್ದಿದ್ದಾರೆ. ಆಕೆ ವಿರುದ್ಧ ನಿರ್ಲಕ್ಷ್ಯತನದಿಂದ ಮಾನವ ಜೀವನಕ್ಕೆ ಅಪಾಯ ತರುವ ಹಾಗೂ ಸುರಕ್ಷತೆಗೆ ಧಕ್ಕೆ ತರುವ ವರ್ತನೆ ಆಧಾರದಲ್ಲಿ ಐಪಿಸಿ ಸೆಕ್ಷನ್‌ 336ರ ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.