ADVERTISEMENT

ಗಡಿ ಭಾಗದಲ್ಲಿ ಕನ್ನಡ ಕಾಪಾಡಲು ಸಲಹೆ

ಕನ್ನಡ ಭವನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 3:44 IST
Last Updated 3 ಸೆಪ್ಟೆಂಬರ್ 2021, 3:44 IST
ಆನೇಕಲ್ ತಾಲ್ಲೂಕಿನ ಮರಸೂರಿನಲ್ಲಿ ಕನ್ನಡ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ‘ಪ್ರಕೃತಿ ಮಿತ್ರ’ ಎಂಬ ಪುಸ್ತಕವನ್ನು ಶಾಸಕ ಬಿ. ಶಿವಣ್ಣ ಮತ್ತು ಜಿಲ್ಲಾಧಿಕಾರಿ ಜೆ. ಮಂಜುನಾಥ್ ಬಿಡುಗಡೆಗೊಳಿಸಿದರು
ಆನೇಕಲ್ ತಾಲ್ಲೂಕಿನ ಮರಸೂರಿನಲ್ಲಿ ಕನ್ನಡ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ‘ಪ್ರಕೃತಿ ಮಿತ್ರ’ ಎಂಬ ಪುಸ್ತಕವನ್ನು ಶಾಸಕ ಬಿ. ಶಿವಣ್ಣ ಮತ್ತು ಜಿಲ್ಲಾಧಿಕಾರಿ ಜೆ. ಮಂಜುನಾಥ್ ಬಿಡುಗಡೆಗೊಳಿಸಿದರು   

ಆನೇಕಲ್:ಗಡಿ ಭಾಗದಲ್ಲಿ ಕನ್ನಡ ಭಾಷೆಯನ್ನು ಜತನದಿಂದ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಕನ್ನಡ ಕಾರ್ಯಕ್ರಮಗಳ ಮೂಲಕ ಕನ್ನಡದ ಕಂಪನ್ನು ಪಸರಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್‌ ತಿಳಿಸಿದರು.

ತಾಲ್ಲೂಕಿನ ಮರಸೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಿರ್ಮಿಸಿರುವ ಕನ್ನಡ ಭವನ ಉದ್ಘಾಟಿಸಿ ಅವರು ಮಾತನಾಡಿದರು.

ಆನೇಕಲ್‌ ತಾಲ್ಲೂಕು ಗಡಿ ಭಾಗವಾಗಿದೆ. ಆದರೆ ವಿಭಿನ್ನ ಸಂಸ್ಕೃತಿ, ಸಾಹಿತ್ಯ, ಪರಂಪರೆ ಈ ಭಾಗದಲ್ಲಿದೆ. ಕನ್ನಡ, ತೆಲುಗು, ತಮಿಳು ಭಾಷೆಗಳ ಸಾಮರಸ್ಯವಿದೆ. ಬನ್ನೇರುಘಟ್ಟ ಅರಣ್ಯ ಪ್ರದೇಶ, ಮುತ್ಯಾಲಮಡುವು ಪ್ರವಾಸಿಧಾಮವಿದೆ. ಜನಪದ ಕಲೆಗಳು ಸಮೃದ್ಧವಾಗಿವೆ. ಕನ್ನಡ ಭವನದ ಮೂಲಕ ಕವಿಗೋಷ್ಠಿ, ವಿಚಾರ ಸಂಕಿರಣ ಸೇರಿದಂತೆ ಕನ್ನಡ ಪರ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಬೇಕು ಎಂದರು.

ADVERTISEMENT

ಶಾಸಕ ಬಿ. ಶಿವಣ್ಣ ಮಾತನಾಡಿ, ತಾಲ್ಲೂಕಿನಲ್ಲಿ ಮೊದಲ ಕನ್ನಡ ಭವನ ಇದಾಗಿದೆ. 2017ರಲ್ಲಿ ಭೂಮಿಪೂಜೆ ನೆರವೇರಿಸಲಾಗಿತ್ತು. ಸುಸಜ್ಜಿತವಾದ ಕನ್ನಡ ಭವನವು ದಾನಿಗಳ ಸಹಕಾರದಿಂದ ನಿರ್ಮಾಣವಾಗಿದೆ. ಕನ್ನಡ ಭವನದಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಭವನ ನಿರ್ಮಾಣಕ್ಕೆ ಸಾರ್ಥಕತೆ ನೀಡಬೇಕು ಎಂದು ಸಲಹೆ ನೀಡಿದರು.

ಆಡಳಿತದ ಎಲ್ಲಾ ಹಂತಗಳಲ್ಲೂ ಕನ್ನಡ ಭಾಷೆ ಬಳಕೆಯಾಗಬೇಕು. ಸಾಹಿತ್ಯ ಚಟುವಟಿಕೆಗಳು ಹೆಚ್ಚು ಹೆಚ್ಚು ಮಾಡುವ ಮೂಲಕ ನಾಡು, ನುಡಿಯ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದರು.

ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ್, ಸಾಹಿತಿ ಬೈರಮಂಗಲ ರಾಮೇಗೌಡ, ತಹಶೀಲ್ದಾರ್‌ ಪಿ. ದಿನೇಶ್, ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಿತಾ, ಉಪಾಧ್ಯಕ್ಷ ವೆಂಕಟಸ್ವಾಮಿ ರೆಡ್ಡಿ, ಮುಖಂಡರಾದ ಪುರುಷೋತ್ತಮ ರೆಡ್ಡಿ, ಪ್ರಭಾಕರರೆಡ್ಡಿ, ಬಂಡಾಪುರ ರಾಮಚಂದ್ರ, ಚಿನ್ನಪ್ಪ ವೈ. ಚಿಕ್ಕಹಾಗಡೆ, ರಾಮಕೃಷ್ಣಾರೆಡ್ಡಿ, ಕೆ.ಎಸ್. ನಟರಾಜ್, ನಾಗವೇಣಿ, ಕನ್ನಡತಿ ಭಾಗೀರಥಿ, ಮಾಯಸಂದ್ರ ನಾಗರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.