ವಿಜಯಪುರ: ‘ಇಲ್ಲಿನ ದೊಡ್ಡಸಾಗರಹಳ್ಳಿ ಗ್ರಾಮದ ಮಹಿಮಾ ಬೆಟ್ಟದಲ್ಲಿ ಕ್ಯಾಥೋಲಿಕ್ ಕ್ರೈಸ್ತ ಧರ್ಮಸಭೆಯ ವತಿಯಿಂದ ಅಮಲೋದ್ಭವಿ ಮಾತೆಯ ಮಹೋತ್ಸವಡಿ. 8ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ’ ಎಂದು ಸಂತ ಜೋಸೆಫರ ದೇವಾಲಯದ ಧರ್ಮಗುರು ತಿಳಿಸಿದ್ದಾರೆ.
‘ಹೋಬಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 7ರ ನಂದಿ ಬೆಟ್ಟದ ರಸ್ತೆ ಸಮೀಪದಲ್ಲಿರುವ ಬೆಟ್ಟದಲ್ಲಿ ಹಲವು ವರ್ಷಗಳಿಂದ ಕ್ರೈಸ್ತ ಧರ್ಮದ ವಿಧಿವಿಧಾನಗಳಂತೆ ಮಹೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಶಿಲುಬೆಯ ಹಾದಿ ಆಚರಣೆಯನ್ನು ಪ್ರತಿ ವರ್ಷ ಶುಭ ಶುಕ್ರವಾರದಂದು ನಡೆಸಲಾಗುತ್ತಿದೆ’ ಎಂದರು.
‘ಸ್ಥಳೀಯರ ಸಹಕಾರದಿಂದ ಶ್ರಮಪಟ್ಟು ಬೆಟ್ಟದಲ್ಲಿನ ಕಲ್ಲುಗಳನ್ನು ಒಡೆಸಿ, ಸಮತಟ್ಟು ಮಾಡಲಾಗಿದೆ. ಪ್ರತಿ ಭಾನುವಾರ ಆರಾಧನೆಯ ಜೊತೆಗೆ ಇಲ್ಲಿ 14 ಶಿಲುಬೆಯ ಕಲ್ಲುಗಳನ್ನು ನೆಟ್ಟು ಆಚರಣೆ ಮಾಡಲಾಗುತ್ತಿದೆ. ಇಲ್ಲಿಗೆ ಬಂದು ಪ್ರಾರ್ಥನೆ ಮಾಡುತ್ತಿರುವ ಭಕ್ತರು ಆಶೀರ್ವಾದ ಹೊಂದುತ್ತಿದ್ದಾರೆ. ಪ್ರತಿ ಭಾರಿ ನಡೆಯುವ ಆಚರಣೆಗಳಲ್ಲಿ ಸುತ್ತಲಿನ ಪ್ರದೇಶಗಳಿಂದ ಒಂದು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಾರೆ’ ಎಂದು ತಿಳಿಸಿದರು.
ಧರ್ಮಗುರು ಸ್ವಾಮಿ ಮ್ಯಾಥ್ಯೂ ಕೊಟ್ಟಾಯಿಲ್ ಮಾತನಾಡಿ, ‘ಆಚರಣೆಗಳು ಜನರಲ್ಲಿ ಸಾಮರಸ್ಯ ಮೂಡಿಸಿ, ಅವರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಬೇಕು. ಇಂತಹ ಪವಿತ್ರ ಕಾರ್ಯಗಳಲ್ಲಿ ಎಲ್ಲ ಧರ್ಮಿಯರೂ ಭಾಗವಹಿಸಬೇಕು. ಎಲ್ಲರೂ ಸಾಮರಸ್ಯದಿಂದ ಬದುಕು ಕಟ್ಟಿಕೊಳ್ಳುವಂತಹ ವ್ಯವಸ್ಥೆ ಉಂಟು ಮಾಡಬೇಕಿರುವ ಉದ್ದೇಶದಿಂದ ಇಂತಹ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.