ಆನೇಕಲ್: ಗಂಡ–ಹೆಂಡತಿ ಜಗಳಕ್ಕೆ ಅತ್ತೆಯೇ ಕಾರಣವೆಂದು ಅಳಿಯನೊಬ್ಬ ಅತ್ತೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಆನೇಕಲ್ ನಿವಾಸಿ ರುಕ್ಮಿಣಿ ಗಾಯಗೊಂಡವರು. ಈಕೆಯ ಅಳಿಯ ವೇಣುಗೋಪಾಲ್ ಬಂಧಿತ.
ರುಕ್ಮಿಣಿ ಅವರ ಪುತ್ರಿ ನಂದಿನಿ ಅವರು ವೇಣುಗೋಪಾಲ್ ಅವರನ್ನು ಪ್ರೀತಿಸಿ ಪೋಷಕರನ್ನು ಒಪ್ಪಿಸಿ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದರು. ಕಳೆದ ಒಂದು ತಿಂಗಳಿನಿಂದ ಗಂಡ ಹೆಂಡತಿಯ ನಡುವೆ ಜಗಳವಾಗಿತ್ತು. ಇದರಿಂದ ನಂದಿನಿ ತನ್ನ ತವರು ಮನೆ ಸೇರಿದ್ದರು.
ಗಂಡ ಹೆಂಡತಿಯ ಜಗಳಕ್ಕೆ ಅತ್ತೆ ರುಕ್ಮಿಣಿ ಕಾರಣ ಎಂದು ವೇಣುಗೋಪಾಲ್ ಆಗಾಗ್ಗೆ ಜಗಳ ಮಾಡುತ್ತಿದ್ದ. ಶನಿವಾರ ದೇವಾಲಯಕ್ಕೆ ತೆರಳುತ್ತಿದ್ದ ಅತ್ತೆ ರುಕ್ಮಿಣಿ ಅವರನ್ನು ಅಳಿಯ ವೇಣುಗೋಪಾಲ್ ಹಿಂಬಾಲಿಸಿ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಮಚ್ಚಿನಿಂದ ಮುಖದ ಭಾಗಕ್ಕೆ ಹಲ್ಲೆ ನಡೆಸಿದ್ದರಿಂದ ರುಕ್ಮಿಣಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಸ್ಥಳೀಯರು ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿಕೊದ್ದಾರೆ.
ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.