ADVERTISEMENT

‘ರಾಗಿ ಕಣಜ’ದಲ್ಲಿ ಭರ್ಜರಿ ಫಸಲು: ಮನೆ ತುಂಬಿಸಿಕೊಳ್ಳುವ ಸಂಭ್ರಮದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 2:33 IST
Last Updated 12 ಡಿಸೆಂಬರ್ 2025, 2:33 IST
ಆನೇಕಲ್‌ ತಾಲ್ಲೂಕಿನ ಇಂಡ್ಲವಾಡಿಯಲ್ಲಿ ರೈತರು ರಾಗಿಗೆ ಪೂಜೆ ಮಾಡುತ್ತಿರುವುದು
ಆನೇಕಲ್‌ ತಾಲ್ಲೂಕಿನ ಇಂಡ್ಲವಾಡಿಯಲ್ಲಿ ರೈತರು ರಾಗಿಗೆ ಪೂಜೆ ಮಾಡುತ್ತಿರುವುದು   

ಆನೇಕಲ್: ಆರಂಭದಲ್ಲಿ ಮಳೆ ಕೊರತೆ–ಕಟಾವಿಗೆ ಬಂದಾಗ ಮಳೆ ಭೀತಿಯ ನಡುವೆಯೂ ರಾಗಿ ಉತ್ತಮ ಫಸಲು ನೀಡಿದ್ದು, ರಾಗಿಯ ಕಣಜ ಬ ಖ್ಯಾತಿಯ ಆನೇಕಲ್‌ನಲ್ಲಿ ಈ ಬಾರಿ ಭರ್ಜರಿ ಫಸಲು ಬಂದಿದೆ. ರಾಗಿ ಕಟಾವು ಮಾಡಿ ತಾಲ್ಲೂಕಿನ ರೈತರು ಸಂತಸದಿಂದ ರಾಗಿ ರಾಶಿಗೆ ಪೂಜೆ ಸಲ್ಲಿಸುತ್ತಿದ್ದಾರೆ.

ಆನೇಕಲ್‌ ತಾಲ್ಲೂಕಿನಾದ್ಯಂತ 2,375 ಹೆಕ್ಟೇರ್‌ನಲ್ಲಿ ರಾಗಿಯ ಬೆಳೆ ಬೆಳೆಯಲಾಗಿದ್ದು, ಭರ್ಜರಿ ಬೆಳೆ ರೈತರಲ್ಲಿ ಸಂತಸ ಮೂಡಿಸಿದೆ.

ರಾಗಿಯ ಕಣದಲ್ಲಿ ರಾಗಿಯ ರಾಶಿಗೆ ಕುಟುಂಬದವರೆಲ್ಲರೂ ಒಗ್ಗೂಡಿ ಪೂಜೆ ಸಲ್ಲಿಸಿ ವರ್ಷದ ಬೆಳೆಯನ್ನು ಮನೆ ತುಂಬಿಕೊಳ್ಳುವ ಸಂತಸ ಎಲ್ಲರಲ್ಲಿ ಮನೆ ಮಾಡಿತ್ತು. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತೆ ವರ್ಷವಿಡೀ ಬೆಳೆದ ಬೆಳೆ ವಿವಿಧ ಕಾರಣಗಳಿಂದ ಕೈತಪ್ಪಿ ಹೋಗುತ್ತಿತ್ತು. ಆದರೆ ಈ ವರ್ಷ ಆನೆಗಳ ಹಾವಳಿಯಿಲ್ಲ, ಮಳೆಯ ತೊಡಕಿಲ್ಲದೇ ಗ್ರಾಮಗಳ ಮನೆ ಮನೆಗಳ ಮುಂದೆ ರಾಗಿಯನ್ನು ಒಣಗಿಸುತ್ತಿರುವುದು, ಇಲ್ಲವೇ ಕಣದಲ್ಲಿ ರಾಶಿ ಮಾಡುತ್ತಿರುವುದು ಎಲ್ಲೆಡೆ ಕಂಡು ಬಂದಿದೆ.

ADVERTISEMENT

ಸುಮಾರು 20 ಎಕರೆ ಪ್ರದೇಶದಲ್ಲಿ ರಾಗಿ ಬೆಳೆಯನ್ನು ಬೆಳೆದಿದ್ದು 200 ಕ್ವಿಂಟಾಲ್‌ಗೂ ಹೆಚ್ಚು ರಾಗಿ ಫಸಲು ಬಂದಿದೆ. ಕೊಯ್ಲಿಗೆ ಬಂದ ಬೆಳೆ ಕೊಯ್ಯಲು ಕೂಲಿಯ ಕೆಲಸದವರು ಸಿಗುವುದು ಕಷ್ಟವಾಗಿದೆ. ಹಾಗಾಗಿ ಯಂತ್ರದ ಮೂಲಕ ಕೊಯ್ಲು ಮಾಡಲಾಗಿದೆ. ಒಂದು ಗಂಟೆಗೆ 3.5 ಸಾವಿರದಿಂದ ₹4 ಸಾವಿರ ಯಂತ್ರಕ್ಕೆ ಬಾಡಿಗೆ ನೀಡಬೇಕು. ಒಂದು ಎಕರೆ ಕೊಯ್ಯಲು ಎರಡು ಗಂಟೆ ಸಮಯ ತಗುಲುತ್ತದೆ ಎಂದು ಆನೇಕಲ್‌ ತಾಲ್ಲೂಕಿನ ಇಂಡ್ಲವಾಡಿಯ ರೈತರಾದದ ರೇಣುಕಪ್ರಸಾದ್, ದೇವರಾಜ್‌, ರುದ್ರೇಶ್‌, ಅವಿನಾಶ್‌ ತಿಳಿಸಿದರು.

ಆನೇಕಲ್‌ ತಾಲ್ಲೂಕಿನ ಆದೂರು ಬಳಿ ಯಂತ್ರದ ಮೂಲಕ ರಾಗಿ ಬೆಳೆಯನ್ನು ಕಟಾವು ಮಾಡುತ್ತಿರುವುದು

ಸವಾಲು ಗೆದ್ದ ಅನ್ನದಾತ

ರಾಗಿಯ ಬೆಳೆಯನ್ನು ಮಳೆಯಿಂದ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಕಳೆದ ಕೆಲ ದಿನಗಳಿಂದ ಮಳೆ ಹೆಚ್ಚಿತ್ತು. ಈ ನಡುವೆ ಭಾರಿ ಗಾಳಿಯಿಂದ ರಾಗಿಯ ಬೆಳೆಯು ನೆಲಕಚ್ಚಿತ್ತು. ರೈತರು ರಾಗಿಯನ್ನು ಬಿಸಿಲಿಗೆ ಹಾಕಿ ಕಾಟವು ಮಾಡಿ ರಾಗಿಯನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಇಂತಹ ಫಸಲೇ ಬಂದಿರಲಿಲ್ಲ. ಈ ಬಾರಿ ಉತ್ತಮ ರಾಗಿ ಫಸಲು ಬಂದಿದೆ ಎಂದು ರೈತ ಚಂದ್ರಶೇಖರ್‌ ತಿಳಿಸಿದರು. ರಾಗಿಯ ಕಾಲ ಬಂತೆಂದರೆ ಕಾಡಾನೆಗಳ ಕಾಟವೇ ಹೆಚ್ಚಿರುತ್ತದೆ. ಈ ನಡುವೆ ಈ ಬಾರಿ ಕಾಡಾನೆಗಳು ಕರ್ನಾಟಕದತ್ತ ಸುಳಿಯದೇ ತಮಿಳುನಾಡಿನ ಗಡಿಯಲ್ಲಿಯೇ ಓಡಾಡಿದ್ದರಿಂದ ಈ ಭಾಗದ ರೈತರು ರಾಗಿಯ ಬೆಳೆಗೆ ರಕ್ಷಣೆ ಸಿಕ್ಕಂತಾಯಿತು. ಆನೇಕಲ್‌ ಅರಣ್ಯ ಪ್ರದೇಶದ ಗಡಿಗಳಲ್ಲಿ ಕಾಡಾನೆಗಳು ನಿರಂತರವಾಗಿ ಓಡಾಡುತ್ತಿವೆ. ಈ ನಡುವೆ ರಾಗಿಯನ್ನು ಕಟಾವು ಮಾಡಿಕೊಂಡು ರಾಗಿಯನ್ನು ಬೆಳೆಯನ್ನು ರೈತರು ಮನೆಗೆ ಸಾಗಿಸಿದ್ದಾರೆ. ಇದರಿಂದಾಗಿ ರೈತರಲ್ಲಿ ಉತ್ಸಾಹ ಮನೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.