ಆನೇಕಲ್: ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಹೋರಾಟ ಶತದಿನ ಪೂರೈಸಿದೆ. ಶುಕ್ರವಾರ ರೈತರು 101 ದಿನದ ಹೋರಾಟದಲ್ಲಿ ಭಾಗಿಯಾದರು.
ರೈತರು ಹೋರಾಟಕ್ಕೆ ಶತದಿನ ಪೂರೈಸಿದ ಹಿನ್ನೆಲೆಯಲ್ಲಿ ರೈತ ಗೀತೆಗಳನ್ನು ಹಾಡಲಾಯಿತು. ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿ ರೈತರು ಕಳೆದ 100 ದಿನಗಳಿಂದಲೂ ನಿರಂತರ ಅಹೋರಾತ್ರಿ ಹೋರಾಟ ನಡೆಸುತ್ತಿದ್ದಾರೆ. ರೈತರ ಹೋರಾಟದ ಹಿನ್ನೆಲೆಯಲ್ಲಿ ರೈತರು ಒಗ್ಗೂಡಿ ಉಳಿಯಲಿ ಉಳಿಯಲಿ ರೈತ ಭೂಮಿ ಉಳಿಯಲಿ, ಹಸಿರೇ ಉಸಿರು, ರೈತನೇ ಭೂಮಾಲೀಕ ಎಂದು ಘೋಷಣೆ ಕೂಗಿದರು.
ಆನೇಕಲ್ ತಾಲ್ಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಗೌರವ ಅಧ್ಯಕ್ಷ ವಿಶ್ವನಾಥರೆಡ್ಡಿ ಮಾತನಾಡಿ ರೈತರು 100 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಯಾವುದೇ ಉಪಯೋಗವಿಲ್ಲ. ರೈತರ ಧ್ವನಿ ಕೇಳುವವರೇ ಇಲ್ಲದಾಗಿದೆ. ಹಾಗಾಗಿ ರೈತರು ತಮ್ಮ ಹೋರಾಟವನ್ನು ಮುಂದುವರೆಸಬೇಕು. ಸರ್ಕಾರ ರೈತರ ಭೂಮಿಯನ್ನು ಕೈಗಾರಿಕೆಗೆ ಕೊಡುವುದನ್ನು ನಿಲ್ಲಿಸುವವರೆಗೂ ಹೋರಾಟ ಮುಂದುವರೆಯಲಿದೆ ಎಂದರು.
ಸಮಿತಿಯ ಚಿನ್ನಪ್ಪ ಚಿಕ್ಕಹಾಗಡೆ ಮಾತನಾಡಿ, ರೈತರು ತಮ್ಮ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಹೋರಾಟ ನಡೆಸುತ್ತಿದ್ದಾರೆ. ತಮ್ಮ ಭೂಮಿಗಾಗಿ 100 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ. ನೇಗಿಲು ಹಿಡಿಯುವ ಕೈಗಳು ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಭೂಮಿಯನ್ನು ಕೈಗಾರಿಕೆಗೆ ಯಾವುದೇ ಕಾರಣಕ್ಕೂ ನೀಡುವುದದಿಲ್ಲ. ಸರ್ಕಾರ ತಮ್ಮ ನಿರ್ಧಾರವನ್ನು ಬದಲಾಯಿಸಿಕೊಳ್ಳಬೇಕು ಎಂದರು.
ರೈತ ಮುಖಂಡರಾದ ನಾರಾಯಣರೆಡ್ಡಿ, ಗೋಪಾಲರೆಡ್ಡಿ, ಅಣ್ಣಯ್ಯರೆಡ್ಡಿ, ಶ್ರೀನಿವಾಸ ರೆಡ್ಡಿ, ಬಾಬು ಪ್ರಸಾದ್, ಮುನಿಯಲ್ಲಪ್ಪ, ಕಾಂತರಾಜು, ಪ್ರಭಾಕರ್, ಶ್ರೀರಾಮರೆಡ್ಡಿ, ಶಿವರಾಮರೆಡ್ಡಿ ಸುಬ್ಬಾರೆಡ್ಡಿ, ರಾಜಾರೆಡ್ಡಿ, ಪಾಪಯ್ಯ, ಲಕ್ಷ್ಮಯ್ಯ, ಮುನಿರೆಡ್ಡಿ, ವೆಂಕಟಸ್ವಾಮಿರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.