ADVERTISEMENT

ಆನೇಕಲ್ | ಸರಣಿ ಅಪಘಾತ: 10ಕ್ಕೂ ಹೆಚ್ಚು ವಾಹನ ಜಖಂ

ಬೈಕ್‌ಗೆ ಡಿಕ್ಕಿ ಹೊಡೆದ ಲಾರಿ ಚಾಲಕ, ಬೆನ್ನತ್ತಿದ್ದ ಸ್ಥಳೀಯರು; ಭಯದಲ್ಲಿ ದಾರಿಯೂದಕ್ಕೂ ಸಿಕ್ಕ ಸಿಕ್ಕ ವಾಹನಕ್ಕೆ ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 23:59 IST
Last Updated 21 ಡಿಸೆಂಬರ್ 2025, 23:59 IST
ಆನೇಕಲ್‌ ತಾಲ್ಲೂಕಿನ ಚಂದಾಪುರದಲ್ಲಿ ಸರಣಿ ಅಪಘಾತಕ್ಕೆ ಕಾರಣವಾದ ಲಾರಿ
ಆನೇಕಲ್‌ ತಾಲ್ಲೂಕಿನ ಚಂದಾಪುರದಲ್ಲಿ ಸರಣಿ ಅಪಘಾತಕ್ಕೆ ಕಾರಣವಾದ ಲಾರಿ   

ಆನೇಕಲ್: ಆನೇಕಲ್-ಚಂದಾಪುರ ರಸ್ತೆಯಲ್ಲಿ ಭಾನುವಾರ ಕೋಲ್ಕತ್ತಾದಿಂದ ಅತ್ತಿಬೆಲೆಗೆ ಸರಕು ತಂದಿದ್ದ ಕಂಟೇನರ್‌(ಲಾರಿ) ರಸ್ತೆಯಲ್ಲಿ ಸಿಕ್ಕಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಸರಣಿ ಅಪಘಾತದಲ್ಲಿ ಕಾರು, ದ್ವಿಚಕ್ರ ವಾಹನ ಸೇರಿದಂತೆ ಹತ್ತಕ್ಕೂ ಹೆಚ್ಚು ವಾಹನಗಳಿಗೆ ಜಖಂ ಆಗಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಮಹಿಳೆಯೊಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. 

ಡಿಕ್ಕಿ ಹೊಡೆದ ನಂತರ ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕ ಉತ್ತರ ಪ್ರದೇಶದ ಪ್ರೇಮ್‌ (35) ಎಂಬಾತನನ್ನು ಅಪಘಾತಕ್ಕೀಡಾದ  ಕಾರಿನ ಚಾಲಕರು ಮತ್ತು ಸಾರ್ವಜನಿಕರು 15 ಕಿ.ಮೀ ಬೆನ್ನಟ್ಟಿದ್ದಾರೆ. ಜನರು ಬೆನ್ನಟ್ಟಿರುವುದು ಗೊತ್ತಾಗಿ ಭಯದಲ್ಲಿ ಚಾಲಕ ಲಾರಿಯನ್ನು ಯರ್ರಾಬಿರ್ರಿಯಾಗಿ ಓಡಿಸಿದ್ದಾನೆ. ದಾರಿಯೂದಕ್ಕೂ ಸಿಕ್ಕ, ಸಿಕ್ಕ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾನೆ.

ಕೊನೆಗೆ ಜನರು ಆತನನ್ನು ಹಿಡಿದು ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಹಲ್ಲೆಯಲ್ಲಿ ಲಾರಿ ಚಾಲಕನಿಗೆ ತಲೆಗೆ ಗಾಯವಾಗಿದೆ. ಚಿಕಿತ್ಸೆಗಾಗಿ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ADVERTISEMENT

ಉತ್ತರ ಪ್ರದೇಶದ ಪ್ರೇಮ್ ಮತ್ತು ಇತರ ಮೂವರು ಕಂಟೇನರ್‌ನಲ್ಲಿ ಕೋಲ್ಕತ್ತಾದಿಂದ ಅತ್ತಿಬೆಲೆಗೆ ಸರಕು ತಂದಿದ್ದರು. ಬೆಸ್ತ ಮನಹಳ್ಳಿಯ ಬಳಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಸಂದರ್ಭದಲ್ಲಿ ಪ್ರೇಮನೊಂದಿಗೆ ಇದ್ದ ಇಬ್ಬರು ಡ್ರೈವರ್ ಮತ್ತು ಕ್ಲೀನರ್‌ಗಳು ಲಾರಿಯಿಂದ ಜಿಗಿದು ಪರಾರಿಯಾಗಿದ್ದಾರೆ. 

ಒಂದಾದ ನಂತರ ಒಂದು ಅಪಘಾತ: 

ಅತ್ತಿಬೆಲೆಯಿಂದ ಆನೇಕಲ್ ಕಡೆಗೆ ಬರುತ್ತಿದ್ದ ಲಾರಿ ಚಾಲಕ ಪ್ರೇಮ್, ಅತ್ತಿಬೆಲೆ– ಆನೇಕಲ್ ರಸ್ತೆಯ ಬೆಸ್ತಮಾನಹಳ್ಳಿ ಸಮೀಪ ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದ. ನಂತರ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆತನನ್ನು ಸ್ಥಳಿಯರು ಬೆನ್ನತ್ತಿದ್ದಾರೆ.

ಇದರಿಂದ ಭಯಗೊಂಡ ಚಾಲಕ ಲಾರಿಯನ್ನು ವೇಗವಾಗಿ ಓಡಿಸಿದ್ದಾರೆ. ತಪ್ಪಿಸಿಕೊಳ್ಳುವ ಭರದಲ್ಲಿ ಹಾಲ್ದೇನಳ್ಳಿಯ ರೈಲ್ವೆ ಗೇಟ್ ಬಳಿ ಆಟೊವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಆಟೊದಲ್ಲಿದ್ದ ಐವರು ಮಹಿಳೆಯರಿಗೆ ಗಾಯಗಳಾಗಿವೆ. ಚಾಲಕ ಅಲ್ಲಿಯೂ ಸಹ ಲಾರಿ ನಿಲ್ಲಿಸದೆ ವೇಗವಾಗಿ ಆನೇಕಲ್‌ನತ್ತ ತೆರಳಿದ್ದಾನೆ. ನಂತರ ಆನೇಕಲ್ ಪಟ್ಟಣದ ನ್ಯಾಯಾಲಯದ ಬಳಿ ಕಾರಿಗೆ ಡಿಕ್ಕಿ ಹೊಡೆದಿದ್ದು ಕಾರು ಸಂಪೂರ್ಣವಾಗಿ ಜಖಂ ಗೊಂಡಿದೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಅತ್ತಿಬೆಲೆ–ಆನೇಕಲ್ ರಸ್ತೆಯಿಂದ ರಾಘವೇಂದ್ರ ಭವನದ ಮೂಲಕ ಚಂದಾಪುರ ರಸ್ತೆಯಲ್ಲಿ ಚಾಲಕ ವೇಗವಾಗಿ ಲಾರಿ ಓಡಿಸಿಕೊಂಡು ಹೋಗಿದ್ದು ಚಂದಾಪುರ ಸೂರ್ಯ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ದ್ವಿಚಕ್ರ ವಾಹನ ಮತ್ತು ಒಂದು ಕಾರು ಸೇರಿದಂತೆ ಮೂರು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಮೂರು ವಾಹನ ಜಖಂಗೊಂಡಿವೆ.

ಒಟ್ಟಾರೆ ಒಂದೇ ತಾಸಿನಲ್ಲಿ ಅಂತರದಲ್ಲಿ ಹತ್ತಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿದೆ. ಘಟನೆಯಿಂದ ಆಕ್ರೋಶಗೊಂಡಿದ್ದ ಸಾರ್ವಜನಿಕರು ಲಾರಿಯನ್ನು 15 ಕಿ.ಮೀ. ಬೆನ್ನತ್ತಿ ಚಂದಾಪುರದಲ್ಲಿ ಲಾರಿ ಚಾಲಕನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ.  ಚಾಲಕನನ್ನು ಸೂರ್ಯ ಸಿಟಿ ಪೊಲೀಸರು ವಶಕ್ಕೆ ಪಡೆದಿದ್ದು, ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. 

ಸ್ಥಳಕ್ಕೆ ಎಎಸ್‌ಪಿ ವೆಂಕಟೇಶ್ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನೇಕಲ್ ಮತ್ತು ಸೂರ್ಯ ಸಿಟಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಲಾರಿ ಬೆನ್ನತಿದ್ದ ಸ್ಥಳೀಯರು
ಚಂದಾಪುರ ವೃತ್ತದಲ್ಲಿ ಲಾರಿ ಚಾಲಕನಿಗೆ ಗೂಸ
ಅಪಘಾತದಿಂದ ಜಖಂಗೊಂಡಿರುವ ಕಾರು

ಮದ್ಯ ಗಾಂಜಾ ಸೇವಿಸಿಲ್ಲಸರಣಿ ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಲಾರಿ ಚಾಲಕನ ತಪಾಸಣೆ ನಡೆಸಲಾಗಿದೆ. ಆತ ಮದ್ಯ ಇಲ್ಲವೇ ಮಾದಕ ವಸ್ತು ಸೇವಿಸಿರಲಿಲ್ಲ ಎಂದು ಪರೀಕ್ಷೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಾರಿ ಚಾಲಕ ಮೊದಲ ಅಪಘಾತದ ನಂತರ ಹೆದರಿ  ಲಾರಿಯನ್ನು ವೇಗವಾಗಿ ಓಡಿಸಿದ್ದರಿಂದ ಸರಣಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.