ದೇವನಹಳ್ಳಿ: ಹಳೇ ಬಸ್ ನಿಲ್ದಾಣದಲ್ಲಿರುವ ಪುರಸಭೆ ಜಾಗದಲ್ಲಿ ಮಾರಾಟ ಮಳಿಗೆಯ ಬದಲು ನಿತ್ಯ ವಹಿವಾಟುದಾರರಿಗೆ ಜಗಲಿಕಟ್ಟೆ ಮಾದರಿಯಲ್ಲಿ ತೆರೆದ ಸಿಮೆಂಟ್ ಹಾಸುಗಳನ್ನು ನಿರ್ಮಾಣ ಮಾಡಲಾಗುವುದೆಂದು ನೂತನ ಎಪಿಎಂಸಿ ಅಧ್ಯಕ್ಷ ಕೆ.ವಿ. ಮಂಜುನಾಥ್ ತಿಳಿಸಿದರು.
ಇಲ್ಲಿನ ಕೊಡಗುರ್ಕಿ ಕತ್ತಿಮಾರಮ್ಮ ದೇವಾಲಯದಲ್ಲಿ ಅಧ್ಯಕ್ಷರಾಗಿ ಆಯ್ಕೆಗೊಂಡ ನಂತರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಜಿಲ್ಲೆಯ ನಾಲ್ಕು ತಾಲ್ಲೂಕು ಸೇರಿ ಈ ಹಿಂದೆ ಒಂದು ಎಪಿಎಂಸಿ ಕೇಂದ್ರವಿತ್ತು. ಪ್ರಸ್ತುತ ಹೊಸಕೋಟೆ ಪ್ರತ್ಯೇಕ ಎಪಿಎಂಸಿ ಹೊಂದಿದೆ. ನೆಲಮಂಗಲ, ದೇವನಹಳ್ಳಿ ಸೇರಿ ದೊಡ್ಡಬಳ್ಳಾಪುರ ತಾಲ್ಲೂಕು ಕೇಂದ್ರದಲ್ಲಿರುವ ಕಚೇರಿಯಲ್ಲಿ ಆಡಳಿತ ನಿರ್ವಹಣೆ ನಡೆಯುತ್ತಿದೆ. ಪ್ರಸ್ತುತ ಮಾರಾಟ ಮಳಿಗೆಗಳ ನಿರ್ಮಾಣಕ್ಕೆ ಒಂದು ಕೋಟಿ ಅನುದಾನ ಮೀಸಲಾಗಿದೆ. ದೇವನಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ನಿವೇಶನದ ಕೊರತೆಯಿಂದ ಮಾರಾಟ ಮಳಿಗೆ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ವಹಿವಾಟು ಹೆಚ್ಚು ಇರುವ ಕಡೆ ನಿರ್ಮಾಣ ಮಾಡಿದರೆ ಸೂಕ್ತ ಎಂದರು.
ಪುರಸಭೆ 78 ಮತ್ತು 172 ಅಡಿ ನಿವೇಶನ ನೀಡಲು ಒಪ್ಪಿದೆ. ಮೊದಲು ರಸ್ತೆ ಬದಿ ವ್ಯಾಪಾರಿಗಳಿಗೆ ಆದ್ಯತೆ ನೀಡಬೇಕು. ಪುರಸಭೆ ಅದರ ನಿರ್ವಹಣೆ ಮಾಡಬೇಕು. ಎಪಿಎಂಸಿಗೆ ಒಂದು ನಯಾಪೈಸೆ ಬೇಡ; ಅನುಕೂಲವಾದರೆ ಸಾಕು ಎಂದರು.
ಒಕ್ಕಲಿಗರ ಸಂಘ ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ, ಜೆಡಿಎಸ್ ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ ರವೀಂದ್ರ, ಟಿಎಪಿಎಂಸಿಎಸ್ ನಿರ್ದೇಶಕರಾದ ಮಂಡಿಬೆಲೆ ರಾಜಣ್ಣ, ಕೋಡಿ ಮಂಚೇನಹಳ್ಳಿ ನಾಗೇಶ್, ಕಾರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್, ಅಣ್ಣೇಶ್ವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯರ್ತಿಗಾನಹಳ್ಳಿ ಶಿವಣ್ಣ, ಪುರಸಭೆ ಸದಸ್ಯೆ ನರಸಿಂಹಮೂರ್ತಿ, ಎಂಪಿಸಿಎಸ್ ಅಧ್ಯಕ್ಷ ಮಹೇಶ್, ಜೆಡಿಎಸ್ ಯುವ ಘಟಕ ಅಧ್ಯಕ್ಷ ಭರತ್ ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ನರಗನಹಳ್ಳಿ ಶ್ರೀನಿವಾಸ್, ಮಾಹಿತಿ ತಂತ್ರಜ್ಞಾನ ಘಟಕ ಅಧ್ಯಕ್ಷ ಅನಿಲ್ ಯಾದವ್, ಮುಖಂಡ ಶ್ಯಾಮಣ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.