
ವಿಜಯಪುರ (ದೇವನಹಳ್ಳಿ): ಚಳಿಗಾಲದ ಸಮೃದ್ಧ ಬೆಳೆಯುವ ನಾಟಿ ಹಸಿ ಅವರೆ, ತೊಗರಿಕಾಯಿ ಜತೆಯಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆವರೆ, ತೊಗರಿಕಾಯಿಗೆ ಉತ್ತಮ ಬೆಲೆ ಇರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಕೆಲ ದಿನಗಳ ಹಿಂದೆ ಪಟ್ಟಣದ ರಸ್ತೆ ಬದಿಗಳಲ್ಲಿ ಅಪರೂಪಕ್ಕೆ ಕಾಣಿಸುತ್ತಿದ್ದ ಅವರೆ, ತೊಗರಿ ಕಾಯಿ ಮಳಿಗೆಗಳು ಈಗ ನಾಯಿಕೊಡೆಯಂತೆ ತಲೆತ್ತಿವೆ. ಎಲ್ಲೆಡೆ ರಾಶಿ, ರಾಶಿ ಅವರೆ, ತೊಗರಿಕಾಯಿ ಕಾಣುತ್ತಿವೆ. ಮಾರಾಟದ ಭರಾಟೆಯೂ ಅಷ್ಟೇ ಜೋರಾಗಿದೆ.
ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಅವರೆ, ತೊಗರಿಕಾಯಿ ಮಾರುಕಟ್ಟೆಗೆ ಬಂದಿಲ್ಲ. ಹೀಗಾಗಿ ಸಹಜವಾಗಿ ಬೆಲೆ ಏರಿಕೆ ಕಂಡು ಬಂದರೂ ಗ್ರಾಹಕರು ಖರೀದಿಸಲು ಮುಗಿಬಿದ್ದಿದ್ದಾರೆ.
ಈ ಮೊದಲು ರಾಗಿ ಹೊಲಗಳಲ್ಲಿ ಸಾಂಪ್ರದಾಯಿಕವಾಗಿ ಏಳೆಂಟು ಅಡಿ ಸಾಲಿನಲ್ಲಿ ಅವರೆ ಬಿತ್ತನೆ ಮಾಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ರೈತರು ಇದನ್ನು ಕೈ ಬಿಟ್ಟಿರುವ ಪರಿಣಾಮ ರಾಗಿ ಹೊಲಗಳಲ್ಲಿ ಆವರೆ ಬಿತ್ತನೆಯಲ್ಲಿ ಪ್ರಮಾಣದಲ್ಲಿ ಕುಸಿತಗೊಂಡಿದೆ.
ರಾಗಿ ಕಟಾವು ಮಾಡಲು ಕೂಲಿ ಕಾರ್ಮಿಕರ ಅಭಾವದಿಂದ ಇತ್ತೀಚಿನ ವರ್ಷಗಳಲ್ಲಿ ರೈತರು ಕಟಾವಿಗೆ ಯಂತ್ರಗಳ ಮೊರೆ ಹೋಗಿದ್ದಾರೆ. ಯಂತ್ರಗಳಿಂದ ಕಟಾವು ಆಗುವುದರಿಂದ ಹೊಲಗಳಲ್ಲಿ ಅವರೆ ಬಿತ್ತನೆ ಮಾಡಿದರೂ ಪ್ರಯೋಜನವಿಲ್ಲ. ಅವರೆ ಬೆಳೆಯುಲ್ಲಿ ಆಸಕ್ತಿ ಹೊಂದಿರುವ ರೈತರು ಪ್ರತ್ಯೇಕವಾಗಿ ಆವರೆ ಬಿತ್ತನೆ ಮಾಡುತ್ತಿದ್ದಾರೆ.
ಸದ್ಯ ಮಾರುಕಟ್ಟೆಯಲ್ಲಿ ಬಂದಷ್ಟು ವೇಗಕ್ಕಿಂತ ಬೇಗನೇ ಅವರೆ, ತೊಗರಿಕಾಯಿ ಖಾಲಿಯಾಗುತ್ತಿದೆ. ಒಂದು ಕೆ.ಜಿ ತೊಗರಿಕಾಯಿ ₹40 ರಿಂದ ₹50 ಮತ್ತು ಅವರೆ ₹60 ಇದೆ. ಕೆಲವು ಕಡೆಗಳಲ್ಲಿ ತಾಜಾ ಕಾಯಿ ₹60 ರಿಂದ ₹70 ವರೆಗೆ ಮಾರಾಟವಾಗುತ್ತಿದೆ. ಗ್ರಾಹಕರು ದರದಲ್ಲಿ ಎಷ್ಟೇ ಚೌಕಾಸಿ ಮಾಡಿದರೂ ವ್ಯಾಪಾರಸ್ಥರು ಮಣಿಯುತ್ತಿಲ್ಲ.
ಈಗ ಧನುರ್ ಮಾಸವಾದ ಕಾರಣ ಅನೇಕರು ಮಾಂಸಾಹಾರ ಸೇವಿಸುವುದಿಲ್ಲ. ಹೀಗಾಗಿ ಅವರೆ, ತೊಗರಿಯಲ್ಲಿ ಸಾರು ಮಾಡುತ್ತಾರೆ. ಅಲ್ಲದೇ ವಿವಿಧ ಭಕ್ಷ್ಯ ತಯಾರಿಸಲು ಬಳಕೆ ಮಾಡುವುದರಿಂದ ಅವರೆ ಮತ್ತು ತೊಗರಿಕಾಯಿಗೆ ಹೆಚ್ಚು ಬೇಡಿಕೆ ಬಂದಿದೆ.
ಕಳೆದ ವಾರ ಮೋಡಕವಿದ ವಾತಾವರಣ ಕಂಡು ಬಂತು. ಈಗ ಚುಮು ಚುಮು ಚಳಿ ಹೆಚ್ಚಾಗಿದೆ. ತರಕಾರಿ, ಸೊಪ್ಪು ಖರೀದಿಸುತ್ತಿದ್ದ ಗ್ರಾಹಕರು ಈಗ ಅವರೆ, ತೊಗರಿಕಾಯಿ ಖರೀದಿಸಲು ಮುಂದಾಗಿದ್ದಾರೆ. ಹಾಗಾಗಿ ಮಾರುಕಟ್ಟೆಯಲ್ಲಿ ಅವರೆ, ತೊಗರಿಕಾಯಿಗೆ ಬೇಡಿಕೆ ಹೆಚ್ಚಾಗಿದ್ದು, ಉತ್ತಮ ಬೆಲೆ ಬಂದಿದೆ ಎಂದು ಆವರೆಕಾಯಿ ವ್ಯಾಪಾರಿ ಮಹೇಶ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.