ADVERTISEMENT

ತುರಿಕೆಗೆ ಕಡ್ಡಿ ಬಳಸಿದ ಗಜರಾಜ: ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆಗಳ ಹೊಸ ವರ್ತನೆ

ವಿಡಿಯೊ ಸುದ್ದಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 20:17 IST
Last Updated 24 ಜುಲೈ 2020, 20:17 IST
ಆನೆ ಕಡ್ಡಿಯನ್ನು ಬಳಸಿ ತನ್ನ ಕಿವಿಯನ್ನು ಸ್ವಚ್ಛಗೊಳಿಸಿಕೊಳ್ಳುತ್ತಿರುವುದು
ಆನೆ ಕಡ್ಡಿಯನ್ನು ಬಳಸಿ ತನ್ನ ಕಿವಿಯನ್ನು ಸ್ವಚ್ಛಗೊಳಿಸಿಕೊಳ್ಳುತ್ತಿರುವುದು   

ಆನೇಕಲ್: ಮನುಷ್ಯನ ಹಲವು ನಡವಳಿಕೆಗಳಂತೆಯೇ ಆನೆಗಳು ವರ್ತಿಸುವುದನ್ನು ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆಗಳಲ್ಲಿ ಕಾಣಬಹುದು.

ಮನುಷ್ಯರು ಆಹಾರ ಸೇವನೆಯ ಸಂದರ್ಭದಲ್ಲಿ ಹಲ್ಲುಗಳಲ್ಲಿ ಆಹಾರ ಸಿಲುಕಿಕೊಂಡಾಗ ಕಡ್ಡಿಯನ್ನು ಬಳಸಿ ಆಹಾರವನ್ನು ಹಲ್ಲುಗಳ ಸಂಧಿಯಿಂದ ತೆಗೆಯುತ್ತಾರೆ. ಕಿವಿಯ ಕಲ್ಮಶ ತೆಗೆಯಲು ಅಥವಾ ಕೆರೆತ ಉಂಟಾದಾಗ ಕೈಯಿಂದ ಕೆರೆದುಕೊಳ್ಳುವುದು ಅಥವಾ ಬಡ್ಸ್‌ ಬಳಸಿ ಕಿವಿಯನ್ನು ಸ್ವಚ್ಛ ಮಾಡಿಕೊಳ್ಳುವುದನ್ನು ಮಾಡುವುದು ಸಾಮಾನ್ಯ. ಇದೇ ರೀತಿ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ ಆನೆ ಸುಂದರ‌ ತನ್ನ ಕಿವಿಗೆ ಕಡ್ಡಿಯನ್ನು ಬಳಸಿ ತನ್ನ ಕೆರೆತ ಮತ್ತಿತರ ಸಮಸ್ಯೆ ನಿವಾರಿಸಿಕೊಳ್ಳುತ್ತಿದೆ.

ದೇಹದ ಭಾಗಗಳಲ್ಲಿ ಕೆರೆತ ಉಂಟಾದಾಗ ಮರಗಳು ಮತ್ತು ಬಂಡೆಗಳ ಬಳಿ ಪ್ರಾಣಿಗಳು ತಮ್ಮ ದೇಹವನ್ನು ಉಜ್ಜಿಕೊಳ್ಳುತ್ತವೆ. ಮಹಾದೇಹಿ ಆನೆ ತನ್ನ ದೇಹದ ವಿವಿಧ ಭಾಗಗಳಿಗೆ ಸೊಂಡಿಲಿನ ಮೂಲಕ ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಆನೆಗಳು ಮರ, ಬಂಡೆಗಳಿಗೆ ಉಜ್ಜುವ ಮೂಲಕ ತಮ್ಮ ದೇಹದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪರಿಪಾಠವನ್ನು ಬೆಳೆಸಿಕೊಂಡಿದೆ. ಹಲ್ಲಿನಲ್ಲಿ ಆಹಾರ ಸಿಕ್ಕಿಕೊಂಡಾಗ ಮನುಷ್ಯರಂತೆಯೇ ಕಡ್ಡಿಯನ್ನು ಬಳಸಿ ಹಲ್ಲನ್ನು ಸ್ವಚ್ಛ ಮಾಡಿಕೊಳ್ಳುವುದನ್ನು ಗಮನಿಸಬಹುದಾಗಿದೆ.

ADVERTISEMENT

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ 23 ಏಷ್ಯನ್‌ ಆನೆಗಳ ಕುಟುಂಬವಿದೆ. ಸುಂದರ್‌, ಮೇನಕಾ ಮತ್ತಿತರ ಆನೆಗಳು ಇದೇ ರೀತಿ ವರ್ತನೆಯನ್ನು ತೋರುತ್ತವೆ. ಇವುಗಳ ವರ್ತನೆಯನ್ನು ಗಮನಿಸುವ ನಿಟ್ಟಿನಲ್ಲಿ ಸುಂದರ ಎಂಬ ಆನೆಯ ಪಾಲಕರಾದ ಮಣಿಕಂಠ ಮತ್ತು ಕುಮಾರ್‌ ಹಾಗೂ ಮೇನಕಾ ಆನೆಯ ಪಾಲಕರಾದ ದೇವರಾಜ್‌ ಮತ್ತು ಚೇತನ್‌ ಆನೆಗಳ ವರ್ತನೆಯನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ. ಉದ್ಯಾನದ ವೈದ್ಯ ಡಾ.ಉಮಾಶಂಕರ್‌, ಅಮಲಾ ಅವರ ಮಾರ್ಗದರ್ಶನದಲ್ಲಿ ಆನೆಗಳ ವರ್ತನೆಯನ್ನು ದಾಖಲೀಕರಣ ಮಾಡುವ ಕಾರ್ಯ ನಡೆದಿದೆ.

ಆನೆಗಳು ಕೆಲವೊಮ್ಮೆ ದೂಳಿನಲ್ಲಿ ಹೊರಳಾಡುತ್ತವೆ. ಇದರಿಂದ ಚರ್ಮ ಕ್ಕಂಟಿದ ಸೂಕ್ಷ್ಮಜೀವಿಗಳನ್ನು ನಾಶಪಡಿಸುತ್ತವೆ. ನಂತರ ಕೆರೆತ ನಿವಾರಿಸಲು ಮರ ಅಥವಾ ಬಂಡೆಗೆ ಉಜ್ಜುತ್ತವೆ ಎಂದು ಆನೆಗಳ ಮೇಲ್ವಿಚಾರಕ ಸುರೇಶ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.