ಆನೇಕಲ್: ತಾಲ್ಲೂಕಿನ ದೊಮ್ಮಸಂದ್ರ ಗ್ರಾಮದ ಶಾಲೆ ಮತ್ತು ಆಸ್ಪತ್ರೆಯ ಪಕ್ಕದಲ್ಲಿಯೇ ಕಸದ ರಾಶಿ ಬಿದ್ದಿದ್ದು ಗಬ್ಬು ನಾರುತ್ತಿದೆ.
ಸುತ್ತಮುತ್ತಲಿನ ಮನೆಗಳ ಕಸವನ್ನು ಇಲ್ಲಿ ಎಸೆಯಲಾಗಿದ್ದು ಗ್ರಾಮ ಪಂಚಾಯಿತಿಯು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳತೆ ಸ್ವಚ್ಛತೆಯೆಂಬುದು ಇಲ್ಲಿ ಕನಸಾಗಿದೆ.
ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತೆಗಾಗಿ ಆಂದೋಲನ ನಡೆಯುತ್ತಿದೆ. ಸ್ವಚ್ಛ ಗ್ರಾಮ ಪಂಚಾಯಿತಿ ಎಂಬುದು ಸರ್ಕಾರ ಆಶಯವಾಗಿದೆ. ಆದರೆ ದೊಮ್ಮಸಂದ್ರದಲ್ಲಿ ಕಸ ಎಸೆಯಬಾರದು ಎಂಬ ಗೋಡೆಬರಹ ಬರೆಯಲಾಗಿದೆ. ಆದರೆ ಗೋಡೆಯ ಮುಂದೆಯೇ ಕಸದ ರಾಶಿ ಬಿದ್ದಿದೆ. ಪ್ರತಿದಿನ ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು, ಕಾರ್ಮಿಕರು ಈ ಭಾಗದಲ್ಲಿ ಓಡಾಡುತ್ತಾರೆ. ರಸ್ತೆ ಪಕ್ಕದಲ್ಲಿಯೇ ಕಸ ರಾಶಿ ಬಿದ್ದಿರುವುದರಿಂದ ಗಬ್ಬುನಾರುತ್ತಿದೆ. ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಉಂಟಾಗಿದೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಧರ್ಮಸಾಗರ ವಿದ್ಯಾ ಸಂಸ್ಥೆ, ಮಧುಕಾಂತ ವಿದ್ಯಾ ಸಂಸ್ಥೆಗಳಿವೆ. ಈ ಶಾಲೆಗಳಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿದಿನ ಕಸದ ಪಕ್ಕದಲ್ಲಿಯೇ ನಡೆದು ಹೋಗಬೇಕಾದ ಪರಿಸ್ಥಿತಿಯಿದೆ. ಮತ್ತೊಂದು ಬದಿಯಲ್ಲಿ ಸರ್ಕಾರಿ ಆಸ್ಪತ್ರೆಯಿದೆ. ಈ ಭಾಗದಲ್ಲಿ ಕಸದ ರಾಶಿ ತುಂಬಿದೆ. ಕಸವನ್ನು ತೆರವುಗೊಳಿಸಬೇಕು ಎಂಬುದು ಸ್ಥಳೀಯರ ಹಾಗೂ ವಿದ್ಯಾರ್ಥಿಗಳ ಒತ್ತಾಸೆಯಾಗಿದೆ.
ದೊಮ್ಮಸಂದ್ರ ಜಗದೀಶ್ ಮಾತನಾಡಿ, ಕಸ ಎಸೆಯಬಾರದು ಎಂದು ಗೋಡೆ ಬರಹ ಬರೆಯಲಾಗಿದೆ. ಆದರೆ ಕಸ ಹಾಕದಂತೆ ತಡೆಯುವ ಕೆಲಸ ನಡೆದಿಲ್ಲ. ಹಾಗಾಗಿ ಕಸದ ರಾಶಿ ತುಂಬಿದೆ. ಶಾಲೆಯ ಪಕ್ಕದಲ್ಲಿಯೇ ಅಂಗಡಿಗಳು, ಮನೆಗಳ ಕಸವನ್ನು ಎಸೆಯುತ್ತಿದ್ದು ತಿಪ್ಪೆಗುಂಡಿಯಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.