ಆನೇಕಲ್: ಕುಗ್ರಾಮ ಜನರಿಗೆ ಆರೋಗ್ಯದ ಸಮಸ್ಯೆ ಉಂಟಾದರೆ ಆಂಬುಲೆನ್ಸ್ ಸೌಲಭ್ಯ ಪಡೆಯಬೇಕಾದರೆ ಪರದಾಡಬೇಕಾಗಿತ್ತು. ಇದರಿಂದ ಹಲವು ಮಂದಿ ತೀವ್ರ ತೊಂದರೆಗೆ ಸಿಲುಕಿದ ಉದಾಹರಣೆಗಳಿವೆ. ಆದರೆ, ಆಂಬುಲೆನ್ಸ್ ಪರ್ಯಾಯವಾಗಿ ಬೈಕ್ ಆಂಬುಲೆನ್ಸ್ ಸೇವೆ ತಾಲ್ಲೂಕಿನ ಇಂಡ್ಲವಾಡಿ ಗ್ರಾಮ ಪಂಚಾಯಿತಿಯಲ್ಲಿ ಸಿಎಸ್ಆರ್ ನೆರವಿನಿಂದ ಆರಂಭಿಸಲಾಗಿದ್ದು, ಜನರಿಗೆ ವರದಾನವಾಗಿದೆ.
ತಾಲ್ಲೂಕಿನ ಚೂಡಹಳ್ಳಿ ಕಾಡಂಚಿನ ಗ್ರಾಮಕ್ಕೆ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲ. ಕಾಡಾನೆಗಳ ಭಯದಲ್ಲೇ ಬದುಕಬೇಕಾದ ಪರಿಸ್ಥಿತಿಯಿದೆ. ಬನ್ನೇರು
ಘಟ್ಟ ರಾಷ್ಟ್ರೀಯ ಅರಣ್ಯ ವ್ಯಾಪ್ತಿಯ ಮೂಲಕ ಗ್ರಾಮ ತಲುಪಬೇಕಾಗಿದೆ. ಅರಣ್ಯ ಕಾಯ್ದೆ ಪ್ರಕಾರ ರಸ್ತೆ ಡಾಂಬರೀಕರಣ ಮಾಡಲು ಅವಕಾಶ ದೊರೆಯುತ್ತಿಲ್ಲ. ಹಾಗಾಗಿ ಸುಮಾರು ಆರು ಕಿ.ಮೀ. ದೂರ ಕಾಡು ದಾರಿಯಲ್ಲಿ ಸಾಗಬೇಕಾಗಿದೆ. ಈ ಗ್ರಾಮಗಳಲ್ಲಿ ಯಾವುದೇ ವ್ಯಕ್ತಿಗೆ ಆರೋಗ್ಯ ಸಮಸ್ಯೆ ಉಂಟಾದರೆ ಆಂಬುಲೆನ್ಸ್ಗೆ ಕರೆ ಮಾಡಿದರೂ ಬರುವುದು ಅತ್ಯಂತ ಪ್ರಯಾಸ. ಕೊರೊನಾ ಸಂದರ್ಭದಲ್ಲಿ ಹಲವು ಮಂದಿ ಉಸಿರಾಟದ ಸಮಸ್ಯೆಗೆ ಸಿಲುಕಿದಾಗ ಆಂಬುಲೆನ್ಸ್ ಸೌಲಭ್ಯ ಪಡೆಯುವುದೇ ಹರಸಾಹಸವಾಗಿತ್ತು.
ಇಂಡ್ಲವಾಡಿ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಡಾ.ವೈಷ್ಣವಿ ಕೆಎಎಸ್ ಅಧಿಕಾರಿ
ಯಾಗಿ ಆಯ್ಕೆಯಾಗಿ ಕೊರೊನಾ ನಿರ್ವಹಣೆ ವಿಶೇಷ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಭಾಗದ ಸಮಸ್ಯೆಯ ಬಗ್ಗೆ ಅರಿವಿದ್ದ ಡಾ.ವೈಷ್ಣವಿ ಅವರು ಜರೋದ ಕಂಪನಿ ಸಂಪರ್ಕಿಸಿ ಸಿಎಸ್ಆರ್ ನಿಧಿಯಿಂದ ಸೂರ್ಯ ಪ್ರತಿಷ್ಠಾನದ ಮೂಲಕ ₹2.5ಲಕ್ಷ ವೆಚ್ಚದಲ್ಲಿ ಬೈಕ್ ಆಂಬುಲೆನ್ಸ್ನ್ನು ರೂಪಿಸಿ ಗ್ರಾಮಕ್ಕೆ ನೀಡಿದ್ದಾರೆ.
ರಸ್ತೆಯಿಲ್ಲದ ಹಳ್ಳಿ ಜನರಿಗೆ ತುರ್ತು ಆರೋಗ್ಯ ಸೇವೆ ಲಭ್ಯವಾಗಲಿ ಎಂಬ ಉದ್ದೇಶದಿಂದ ಗರ್ಭಿಣಿಯರು ಮತ್ತು ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಬೈಕ್ ಆಂಬುಲೆನ್ಸ್ ವರದಾನವಾಗಿದೆ ಎನ್ನುತ್ತಾರೆ ಡಾ.ವೈಷ್ಣವಿ.
ರಾಯಲ್ ಎನ್ಫೀಲ್ಡ್ ಬೈಕ್ನ್ನು ಒಬ್ಬ ರೋಗಿ ಮಲಗಲು ಅನುಕೂಲವಾಗುವ ರೀತಿಯಲ್ಲಿ ಡೋಲಿ ಮಾದರಿಯಲ್ಲಿ ಜೋಡಿಸಲಾಗಿದೆ. ಸೈರನ್ ವ್ಯವಸ್ಥೆ, ಆಕ್ಸಿಜನ್ ಸೌಲಭ್ಯವಿದೆ. ಈ ಬೈಕ್ ಇಂಡ್ಲವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದು ಕುಗ್ರಾಮಗಳಿಗೆ ಕರೆ ಮಾಡಿದ ಕೇವಲ 15-20 ನಿಮಿಷಗಳಲ್ಲಿ ತಲುಪುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.