ಹೊಸಕೋಟೆ: ಸರ್ಕಾರ ಪ್ರತಿ ದೀಪಾವಳಿಯಲ್ಲೂ ಪರಿಸರಕ್ಕೆ ಮಾರಕವಾದ ಪಟಾಕಿ ನಿಷೇದ್ಧ. ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ. ಇದು ಕಟ್ಟುನಿಟ್ಟಿನ ಆದೇಶ ಎಂದು ಪ್ರಚಾರ ಮಾಡುತ್ತದೆ. ಆದರೆ ಇದು ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ.
ಅತಿಯಾದ ಪಟಾಕಿ ಬಳಕೆಯಿಂದ ಪಕ್ಷಿ ಸಂಕುಲ ಹಾಗೂ ಸಾವಿರಾರು ಕಿ.ಮೀ. ವಲಸೆ ಬರುವ ಹಕ್ಕಿಗಳಿಗೆ ಕುತ್ತು ಎದುರಾಗಿದೆ. ಅದರಲ್ಲೂ ಅಳಿವಿನಂಚಿನಲ್ಲಿರುವ ಪಕ್ಷಿಗಳಿಗೆ ಮಾರಕವಾಗಿದೆ.
ದೀಪಾವಳಿ ಮಾತ್ರವಲ್ಲದೆ ಯಾವುದೇ ಕಾರ್ಯಕ್ರಮಗಳು ನಡೆದರೂ ಪಟಾಕಿ ಸಿಡಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆ ಯಾವ ನಿಯಮವು ಇರುವುದಿಲ್ಲ. ಅತಿಯಾದ ಶಬ್ದ ಹಾಗೂ ರಾಸಾಯನಿಕ ಹೊಗೆ ಸೊಸುವ ಪಟಾಕಿ ಹಚ್ಚಿ ಜನ ಕೇಕೆ ಹಾಕುತ್ತಾರೆ. ಇದರಿಂದ ಪಾರಾಗಲು ಮೂಕ ಪ್ರಾಣಿಗಳು ಪಡುವ ಮೂಕವೇದನೆ ಯಾರಿಗೂ ತಿಳಿಯದು.
ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಪರವಾನಗಿ
ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಈಗಾಗಲೇ ಎಲ್ಲಾ ಪಟಾಕಿ ಮಾರಾಟಗಾರೊಂದಿಗೆ ಸಭೆ ನಡೆಸಿ ಮುಂಜಾಗ್ರತಾ ಎಲ್ಲಾ ಕ್ರಮ ಕೈಗೊಳ್ಳಲು ಹಾಗೂ ಹಸಿರು ಪಟಾಕಿ ಮಾತ್ರ ಮಾರಾಟ ಮಾಡಬೇಕೆಂದು ನಿರ್ದೇಶನ ನೀಡಲಾಗಿದೆ. ಹಸಿರು ಪಟಾಕಿ ಮಾರಾಟ ಮಾಡುವವರು, ಸುರಕ್ಷಿತ ಕ್ರಮ ಪಾಲಿಸುವವರಿಗೆ ಮಾತ್ರ ಪರವಾನಗಿ ನೀಡಲಾಗುವುದು ಎಂದು ನಗರಭೆ ಪೌರಾಯುಕ್ತ ನೀಲಲೋಚನ ಪ್ರಭು ತಿಳಿಸಿದ್ದಾರೆ. ಚೆನ್ನ ಭೈರೇಗೌಡ ಕ್ರೀಡಾಂಗಣದಲ್ಲಿ ಪಟಾಕಿ ಮಾರಾಟ ಮಾಡಲು ಸ್ಥಳ ನಿಗದಿ ಮಾಡಲಾಗುವುದು. ಸುರಕ್ಷತೆ ಪರಿಶೀಲಿಸಲು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ನಗರಸಭೆಯಿಂದ ಜಂಟಿಯಾಗಿ ಪ್ರತಿ ದಿನ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.
ಮರೆಯಾದ ಹಕ್ಕಿಗಳ ಕಲರವ
ಸರ್ಕಾರ ಪಟಾಕಿ ತಯಾರಿಸುವ ಕಂಪನಿ ನಿಷೇಧಿಸುವುದನ್ನು ಬಿಟ್ಟು ಸುರಕ್ಷತಾ ಕ್ರಮ, ಹಸಿರು ಪಟಾಕಿ ಮಾತ್ರ ಬಳಿಸಿ ಎಂದು ಸೂಚಿಸಿದರೆ ಹೇಗೆ ?. ತಾಲ್ಲೂಕಿನಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಕಾರ್ಯಕ್ರಮ ನಡೆಯುತ್ತಲೇ ಇರುತ್ತೆ. ಆ ಸಂದರ್ಭದಲ್ಲಿ ಪಾಟಕಿ ಸಿಡಿಸುವುದೇ ಪದ್ಧತಿಯಾಗಿದೆ. ಇದರಿಂದ ತಾಲ್ಲೂಕಿಗೆ ಸಾವಿರಾರು ಮೈಲಿಗಳ ದೂರದಿಂದ ಬರುತ್ತಿದ್ದ ವಲಸೆ ಹಕ್ಕಿಗಳ ಸಂಖ್ಯೆ ಕಡಿಮೆ ಆಗುತ್ತಿದೆ.ಬಾಲಾಜಿ ರಘೋತ್ತಮ್, ಕೆರೆ ಸಂರಕ್ಷಣಾ ಹೋರಾಟಗಾರ
ಬೆದರಿದ ಪಕ್ಷಿ ಸಂಕುಲ
ಪಟಾಕಿ ತಯಾರಿಕಾ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಚರ್ಮ ಮತ್ತು ಕಣ್ಣು ಸಂಬಂಧಿ ಕಾಯಿಲೆ ಸಾಮಾನ್ಯವಾಗಿ ಬರುತ್ತದೆ. ಅಂತಹದ್ದರಲ್ಲಿ ರಾಸಾಯನಿಕ ಮಿಶ್ರಿತ ಪಟಾಕಿ ಸಿಡಿಸುವುದರಿಂದ ಮನುಷ್ಯನ ಜೀವಕ್ಕೆ ಅಷ್ಟೇ ಅಲ್ಲ ಪ್ರಾಣಿ ಪಕ್ಷಿಗಳಿಗೂ ಮಾರಕ ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ ಪಟಾಕಿ ಅಬ್ಬರ ತಗ್ಗಿಲ್ಲ. ಹೊಸಕೋಟೆಯ ಅಮಾನಿಕೆರೆಯಲ್ಲಿ ಒಂದರಲ್ಲೇ ಸುಮಾರು 200ಕ್ಕೂ ಹೆಚ್ಚು ಅಳಿವಿನಂಚಿನ ಪಕ್ಷಿ ಪ್ರಭೇದಗಳಿವೆ. ಸೈಬೀರಿಯಾ, ರಷ್ಯಾ ಭಾಗದಿಂದ ವಲಸೆ ಬರುವ ಪಕ್ಷಿಗಳ ಸಂತತಿಯು ಮಾರಕ ಪಟಾಕಿಗಳ ಶಬ್ದ ಮತ್ತು ರಾಸಾಯನಿಕ ಹೊಗಯಿಂದ ದಿನದಿಂದ ದಿನಕ್ಕೆ ಕ್ಷಿಸುತ್ತಿವೆ.ಸ್ವರೂಪ್ , ಪಕ್ಷಿ ವೀಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.