ADVERTISEMENT

‘ಮಧ್ಯಂತರ ಚುನಾವಣೆ ಬಂದರೆ ಬಿಜೆಪಿಗೆ ಗೆಲುವು’

ಹೊಸಕೋಟೆ: ಸದಸ್ಯತ್ವ ಅಭಿಯಾನ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 15:26 IST
Last Updated 5 ಜುಲೈ 2019, 15:26 IST
ಹೊಸಕೋಟೆಯಲ್ಲಿ ಸದಸ್ಯತ್ವ ಅಭಿಯಾನದ ತಯಾರಿ ಸಭೆಯನ್ನು ರಾಜ್ಯ ಯುವಮೋರ್ಚ ಪ್ರಧಾನ ಕಾರ್ಯದರ್ಶಿ ಶರತ್ ಬಚ್ಚೇಗೌಡ, ಲೋಕಸಭಾ ಕ್ಷೇತ್ರದ ಸಹಾ ಪ್ರಭಾರಿ ಸಚ್ಚಿಧಾನಂದ ಮೂರ್ತಿ, ಜಿಲ್ಲಾ ಅದ್ಯಕ್ಷರಾದ ರಾಜಣ್ಣ ಮುಂತಾದವರು ಭಾಗವಹಿಸಿದ್ದರು.
ಹೊಸಕೋಟೆಯಲ್ಲಿ ಸದಸ್ಯತ್ವ ಅಭಿಯಾನದ ತಯಾರಿ ಸಭೆಯನ್ನು ರಾಜ್ಯ ಯುವಮೋರ್ಚ ಪ್ರಧಾನ ಕಾರ್ಯದರ್ಶಿ ಶರತ್ ಬಚ್ಚೇಗೌಡ, ಲೋಕಸಭಾ ಕ್ಷೇತ್ರದ ಸಹಾ ಪ್ರಭಾರಿ ಸಚ್ಚಿಧಾನಂದ ಮೂರ್ತಿ, ಜಿಲ್ಲಾ ಅದ್ಯಕ್ಷರಾದ ರಾಜಣ್ಣ ಮುಂತಾದವರು ಭಾಗವಹಿಸಿದ್ದರು.   

ಹೊಸಕೋಟೆ: ಬಿಜೆಪಿಯು ಕಾರ್ಯಕರ್ತರ ಆಧಾರದಲ್ಲಿ ಪಕ್ಷವನ್ನು ಸಂಘಟಿಸುತ್ತದೆ. ಅಲ್ಲಿಂದ ಪಕ್ಷದ ಸಂಘಟನೆ ಮಾಡುವುದು ಸದಸ್ಯತ್ವ ಅಭಿಯಾನದ ಉದ್ದೇಶ ಎಂದು ಬಿಜೆಪಿಯ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಹ ಪ್ರಭಾರಿಯಾದ ಸಚ್ಚಿದಾನಂದ ಮೂರ್ತಿ ತಿಳಿಸಿದರು.

ಮೂರು ವರ್ಷಕೊಮ್ಮೆ ಪಕ್ಷದ ಸಂಘಟನೆಗಾಗಿ ಸದಸ್ಯರನ್ನು ಮಾಡಿ ಸಾಂವಿಧಾನಿಕವಾಗಿ ಚುನಾವಣೆ ಮಾಡುವುದು ಪಕ್ಷದ ಸಿದ್ಧಾಂತ, ಇದು ಸಂಘಟನಾ ಪರ್ವ ಎಂದರು.

‘ನಮ್ಮ ಬಗ್ಗೆ ವಿಶ್ವಾಸವಿಟ್ಟು ನಮಗೆ ಮತಹಾಕಿರುವ ಮತದಾರರೆಲ್ಲರನ್ನು ಭೇಟಿ ಮಾಡಿ ಅವರೆಲ್ಲರನ್ನು ಸದಸ್ಯರನ್ನಾಗಿ ಮಾಡಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಸೋಲಿಗೆ ನಾವೇ ಕಾರಣ. ನಾವು ಸ್ವಲ್ಪ ಪ್ರಯತ್ನ ಮಾಡಿದ್ದರೆ ನಮ್ಮ ಪಕ್ಷ ಅದಿಕಾರದಲ್ಲಿರುತ್ತಿತ್ತು. ನಮ್ಮ ತಪ್ಪಿನಿಂದಾಗಿ ರಾಜ್ಯವನ್ನು ಅತಂತ್ರ ಸ್ಥಿತಿಗೆ ಬಂದಿದ್ದೇವೆ’ ಎಂದು ವಿವರಿಸಿದರು.

ADVERTISEMENT

‘ಮುಂದಿನ ದಿನಗಳಲ್ಲಿ ಮಧ್ಯಂತರ ಚುನಾವಣೆ ಬಂದರೆ ಯಡಿಯೂರಪ್ಪನವರ ನಾಯಕತ್ವದಲ್ಲಿ ನಾವು ಅಧಿಕಾರ ಪಡೆಯುತ್ತೇವೆ’ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣಪ್ಪ ಅವರು ಮಾತನಾಡಿ, ‘ನಮ್ಮದು ಪ್ರಪಂಚದಲ್ಲಿಯೇ ಅತಿಹಚ್ಚು ಸದಸ್ಯರನ್ನು ಹೊಂದಿರುವ ಪಕ್ಷ. ನಮ್ಮ ಪಕ್ಷದಲ್ಲಿ ಮಾತ್ರ ಚಹಾ ಮಾರುವವರು ಪ್ರಧಾನಿಯಾಗುತ್ತಾರೆ, ಸಾಮಾನ್ಯ ವ್ಯಕ್ತಿ ಇಂದು ಹಣಕಾಸು ಸಚಿವೆಯಾಗಿರುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ ಮಾತನಾಡಿ, ‘ಲೋಕಸಭಾ ಚುನಾವಣೆಯಲ್ಲಿ ಬಚ್ಚೇಗೌಡರು ಗೆದ್ದಮೇಲೆ ನಮಗೆ ಆನೆಯ ಬಲ ಬಂದಿದ್ದು ಜಿಲ್ಲೆಯಲ್ಲಿ ನಮಗೆ ಕೆಲಸ ಮಾಡಲು ಹುರುಪು ಬಂದಿದೆ. ನಾವು ಚೆನ್ನಾಗಿ ಕೆಲಸ ಮಾಡಿ ಅತಿ ಹೆಚ್ಚು ಸದಸ್ಯರನ್ನು ಪಕ್ಷಕ್ಕೆ ಸೇರಿಸಬೇಕು’ ಎಂದರು.

ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್ ಬಚ್ಚೇಗೌಡ ಮಾತನಾಡಿ, ‘ನಮ್ಮ ತಂದೆಯವರ ಗೆಲುವಿಗೆ ಕಾರಣಕರ್ತರಾದ ಎಲ್ಲ ಪದಾಧಿಕಾರಿಗಳಿಗೆ ಧನ್ಯವಾದಗಳು’ ಎಂದರು. ಕಳೆದ ಬಾರಿ ತಾಲ್ಲೂಕಿನಲ್ಲಿ 44 ಸಾವಿರ ಸದಸ್ಯತ್ವ ಮಾಡಿದ್ದು ಈ ಬಾರಿ ಇನ್ನಷ್ಟು ಹೆಚ್ಚು ಸದಸ್ಯರನ್ನು ಸೇರಿಸಬೇಕು’ ಎಂದರು.

ಸಹ ಸಂಚಾಲಕರಾದ ಅಶ್ವಥ್ಥನಾರಾಯಣ್, ಮುಖಂಡರಾದ ಬಿ.ಎಂ.ನಾರಾಯಣಸ್ವಾಮಿ, ಮುನಿಯಪ್ಪ, ಮನ್ಸೂರ್, ಕೋಡಿಹಳ್ಳಿ ಸೊಣ್ಣಪ್ಪ, ಕೇಶವಮೂರ್ತಿ, ಸುರೇಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.