ADVERTISEMENT

ದೊಡ್ಡಬಳ್ಳಾಪುರ: ಧಾರ್ಮಿಕ ಆಚರಣೆ ಮೇಲೆ ಕರಿನೆರಳು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 4:35 IST
Last Updated 19 ಏಪ್ರಿಲ್ 2021, 4:35 IST

ದೊಡ್ಡಬಳ್ಳಾಪುರ: ಧಾರ್ಮಿಕ ಆಚರಣೆಗಳಿಗೆ ಗುಂಪು ಸೇರುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ರಾಮನವಮಿ ಆಚರಣೆ ಹಾಗೂ ವಿವಿಧ ಧಾರ್ಮಿಕ ಉತ್ಸವಗಳ ಮೇಲೆ ಪರಿಣಾಮ ಬೀರಿದೆ.

ಪ್ರತಿ ವರ್ಷ ರಾಮನವಮಿ ಹಬ್ಬದ ದಿನ ನಡೆಯುತ್ತಿದ್ದ ತಾಲ್ಲೂಕಿನ ರಾಜಘಟ್ಟ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಕೋವಿಡ್ -19 ಮುಂಜಾಗ್ರತಾ ಕ್ರಮವಾಗಿ ರದ್ದು ಮಾಡಲಾಗಿದೆ. ಗ್ರಾಮ ದೇವತೆ ದೊಡ್ಡಮ್ಮದೇವಿ ದೇವಾಲಯದ ಆವರಣದಲ್ಲಿ ನಡೆದ ಸಭೆಯಲ್ಲಿ ಊರಿನ ಹಿರಿಯರು ಜಾತ್ರೆ ರದ್ದು ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಹಬ್ಬದ ಹಿನ್ನೆಲೆ ದೇವಾಲಯದಲ್ಲಿ ಮೂರು ದಿನಗಳ ಕಾಲ ದೇವರ ದರ್ಶನ ಹಾಗೂ ವಿಶೇಷ ಪೂಜೆಗೆ ಮಾತ್ರ ಅವಕಾಶ ನೀಡಲಾಗಿದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ. ಇದೇ ವೇಳೆ ರಾಮನವಮಿ ಹಬ್ಬದ ಪ್ರಯುಕ್ತ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಕೋವಿಡ್‌-19 ತಡೆಗಟ್ಟಲು ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಮನವಿ ಮಾಡಲಾಗಿದೆ.

ನಗರದ ಪ್ರಸಿದ್ದ ನೆಲದಾಂಜನೇಯಸ್ವಾಮಿ ದೇವಾಲಯದಲ್ಲಿ ಏ.18 ರಿಂದ ಮುಂದಿನ ಸೂಚನೆವರೆಗೆ ಭಕ್ತಾದಿಗಳಿಗೆ ಗರ್ಭಗುಡಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ದೇವಾಲಯದಲ್ಲಿ ಭಕ್ತಾದಿಗಳೇ ನೇರವಾಗಿ ಗರ್ಭಗುಡಿಗೆ ತೆರಳಿ ಪೂಜೆ ಸಲ್ಲಿಸುವ ಪರಿಪಾಠ ಈ ದೇವಾಲಯದಲ್ಲಿದೆ.

ADVERTISEMENT

ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿ ಭಕ್ತಾದಿಗಳು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ದೇವಾಲಯದ ಆಡಳಿತ ಮಂಡಲಿ ಸೂಚಿಸಿದೆ. ಈ ನಡುವೆ ಏ.29 ರಂದು ಘಾಟಿ ಕ್ಷೇತ್ರದ ದೇವಾಲಯದ ವತಿಯಿಂದ ನಡೆಸಲಿರುವ ಉಚಿತ ಸಾಮೂಹಿಕ ವಿವಾಹ ನೋಂದಣಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ವಿವಾಹ ಕಾರ್ಯಕ್ರಮವನ್ನು ಯಾವ ರೀತಿ ನಡೆಸಬೇಕು ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ.

ಏ.21ರಂದು ರಾಮನವಮಿ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಅರವಟಿಗೆ ಕಾರ್ಯಕ್ರಮಗಳು ನಡೆಯುತ್ತಿದ್ದವು. ಈ ಬಾರಿ ಹೆಚ್ಚಿನ ಜನರು ಸೇರಲು ನಿರ್ಬಂಧವಿರುವುದರಿಂದ ಸಾಂಕೇತಿಕವಾಗಿ ಆಚರಣೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.