ADVERTISEMENT

ಜನಪದ ಆಟ ಕಣ್ಮರೆಗೆ ಬೇಸರ

ಜಿಲ್ಲಾ ಮಟ್ಟದ 7ನೇ ವರ್ಷದ ಗಾಳಿಪಟ ಹಾರಿಸುವ ಸ್ಪರ್ಧೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 13:44 IST
Last Updated 14 ಜುಲೈ 2019, 13:44 IST
ಚನ್ನಪಟ್ಟಣ ತಾಲ್ಲೂಕಿನ ಯಲಚಿಪಾಳ್ಯ ಗ್ರಾಮದಲ್ಲಿ ಏರ್ಪಡಿಸಿದ್ದ ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ಹಲವಾರು ಸ್ಪರ್ಧಿಗಳು ಭಾಗವಹಿಸಿದ್ದರು
ಚನ್ನಪಟ್ಟಣ ತಾಲ್ಲೂಕಿನ ಯಲಚಿಪಾಳ್ಯ ಗ್ರಾಮದಲ್ಲಿ ಏರ್ಪಡಿಸಿದ್ದ ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ಹಲವಾರು ಸ್ಪರ್ಧಿಗಳು ಭಾಗವಹಿಸಿದ್ದರು   

ಚನ್ನಪಟ್ಟಣ: ಮನರಂಜನೆ ನೀಡುವಂತಹ ಜಾನಪದ ಆಟಗಳು ಕಣ್ಮರೆಯಾಗುತ್ತಿರುವುದು ನೋವಿನ ಸಂಗತಿ ಎಂದು ಚನ್ನಾಂಬಿಕ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪೂರ್ಣಿಮ ನಿಂಗೇಗೌಡ ವಿಷಾದಿಸಿದರು.

ತಾಲ್ಲೂಕಿನ ಯಲಚಿಪಾಳ್ಯ ಗ್ರಾಮದ ಆಕ್ಸ್‌ಫರ್ಡ್‌ ಪಬ್ಲಿಕ್ ಶಾಲೆ ಆವರಣದಲ್ಲಿ ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ದೇವರ ಹೊಸಹಳ್ಳಿ ಶ್ರೀಸಂಜೀವರಾಯ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ‘ಜಿಲ್ಲಾ ಮಟ್ಟದ 7ನೇ ವರ್ಷದ ಗಾಳಿಪಟ ಹಾರಿಸುವ ಸ್ಪರ್ಧೆ’ಗೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳಲ್ಲಿ ಜನಪದ ಸಂಸ್ಕೃತಿಯನ್ನು ಬಿತ್ತುವ ಮೂಲಕ ನಮ್ಮ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಕಾರ್ಯವಾಗಬೇಕು. ಇಂತಹ ಸ್ಪರ್ಧೆಗಳು ಹೆಚ್ಚು ನಡೆಯವ ಅವಶ್ಯಕತೆ ಇದೆ. ಇದರಿಂದ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಹೆಚ್ಚುತ್ತದೆ. ಜೊತೆಗೆ ಮನಸ್ಸಿಗೆ ಮನರಂಜನೆಯೂ ಸಿಗುತ್ತದೆ ಎಂದರು.

ADVERTISEMENT

ಟ್ರಸ್ಟ್ ಕಾರ್ಯದರ್ಶಿ ವಿಜಯ್ ರಾಂಪುರ ಮಾತನಾಡಿ, ‘ಜನಪದರ ಆಟೋಟಗಳಲ್ಲಿ ಗಾಳಿಪಟ ಉತ್ಸವಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಆಷಾಡಮಾಸದಲ್ಲಿ ನವವಿವಾಹಿತ ದಂಪತಿಗೆ ಗಾಳಿಪಟ ಹಾರಿಸುವ ಸ್ಪರ್ಧೆ ಏರ್ಪಡಿಸಲಾಗುತ್ತಿತ್ತು. ಈಗ ಅವು ಮರೆಯಾಗಿವೆ. ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹಾಗೂ ಮನರಂಜನೆಯನ್ನು ಏಕಕಾಲಕ್ಕೆ ನೀಡುವ ಗಾಳಿಪಟ ಕ್ರೀಡೆ ನಮ್ಮ ರಾಜ್ಯದಲ್ಲಿ ಹೆಚ್ಚು ಮನ್ನಣೆ ಗಳಿಸಿದೆ’ ಎಂದರು.

‘ಆಧುನಿಕತೆಯ ಭರಾಟೆಗೆ ಸಿಲುಕಿ ನಲುಗುತ್ತಿರುವ ಜಾನಪದ ಸೊಗಡನ್ನು ಸಂರಕ್ಷಿಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ’ ಎಂದರು.

ಮುಖ್ಯಶಿಕ್ಷಕ ಆರ್.ವಿ.ವೆಂಕಟಸ್ವಾಮಿ, ಆಡಳಿತಾಧಿಕಾರಿಯಾದ ಅ.ಮಾ.ರುದ್ರಮಾದಪ್ಪ, ಶಿಕ್ಷಕಿ ನಸೀಹಾ ಭಾಗವಹಿಸಿದ್ದರು. ಹಿರಿಯ ಜನಪದ ಗಾಯಕ ಚೌ.ಪು.ಸ್ವಾಮಿ ಹಾಗೂ ದೈಹಿಕ ಶಿಕ್ಷಕ ಸಿ.ವೆಂಕಟಾಚಲ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ 64 ಮಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.