ADVERTISEMENT

ಬನ್ನೇರುಘಟ್ಟ: ಚಂಪಕಧಾಮಸ್ವಾಮಿ ರಥೋತ್ಸವ

ಜಾತ್ರೆಯಲ್ಲಿ ನೂರಾರು ಮಂಗಳಮುಖಿಯರು ಭಾಗಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 14:29 IST
Last Updated 30 ಮಾರ್ಚ್ 2024, 14:29 IST
ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಚಂಪಕಧಾಮಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು
ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಚಂಪಕಧಾಮಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು   

ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಚಂಪಕಧಾಮಸ್ವಾಮಿ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.

ಸುತ್ತಮುತ್ತಲ ಗ್ರಾಮಗಳು ಹಾಗೂ ತಮಿಳುನಾಡಿನ ಭಕ್ತರು ಸೇರಿದಂತೆ ನೂರಾರು ಮಂದಿ ಜನ ವೈಭವದ ಉತ್ಸವಕ್ಕೆ ಸಾಕ್ಷಿಯಾದರು.

ರಥೋತ್ಸವ ಅಂಗವಾಗಿ ದೇವಾಲಯದ ಪ್ರಾಂಗಣದಲ್ಲಿ ಶ್ರೀದೇವಿ ಭೂದೇವಿ ಸಮೇತ ಚಂಪಕಧಾಮಸ್ವಾಮಿ ಅಲಂಕೃತ ಉತ್ಸವ ಮೂರ್ತಿಗೆ ಧಾರ್ಮಿಕ ಕೈಂಕರ್ಯ ನೆರವೇರಿಸಲಾಯಿತು.

ADVERTISEMENT

ಮಧ್ಯಾಹ್ನ ವೇಳೆಗೆ ದೇವಾಲಯದ ಪ್ರಧಾನ ಅರ್ಚಕರು ಸಾಂಪ್ರದಾಯಿಕ ಪೂಜೆ ನೆರವೇರಿಸಿದ ಬಳಿಕ ಶ್ರೀದೇವಿ ಭೂದೇವಿ ಸಮೇತ ಚಂಪಕಧಾಮ ಸ್ವಾಮಿಯ ಅಲಂಕೃತ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳರಿಸುತ್ತಿದ್ದಂತೆಯೇ ನೆರೆದಿದ್ದ ಭಕ್ತರು ಗೋವಿಂದ... ಗೋವಿಂದ... ಎಂದು ಜಯಘೋಷ ಮೊಳಗಿಸಿದರು.

ದೇವಾಲಯ ಮುಂಭಾಗದ ರಸ್ತೆಯಲ್ಲಿ ರಥ ಸಾಗುತ್ತಿದ್ದಂತೆಯೇ ದವನ ಚುಚ್ಚಿದ ಬಾಳೆಹಣ್ಣನ್ನು ರಥಕ್ಕೆ ಎಸೆಯುವ ಮೂಲಕ ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು. ರಥೋತ್ಸವ ಕಣ್ತುಂಬಿಕೊಳ್ಳಲು ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ಸೇರಿತು. ತೇರು ಚಂಪಕವಲ್ಲಿ ಮಾರಮ್ಮನ ದೇವಾಲಯದ ಮೂಲಕ ಸಾಗಿ ಬನ್ನೇರುಘಟ್ಟದ ಆಂಜನೇಯ ದೇವಾಲಯದವರೆಗೆ ಸಾಗಿತು.

ಉರಿ ಬಿಸಿಲಿನಲ್ಲೂ ಭಕ್ತರು ಬನ್ನೇರುಘಟ್ಟದ ಅಧಿದೈವ ಚಂಪಕಧಾಮನನ್ನು ನೆನೆಯುತ್ತಾ ಸಾಗುತ್ತಿದ್ದ ದೃಶ್ಯ ಕಂಡುಬಂದಿತು.

ಜನರ ಬಿಸಿಲಿನ ಬೇಗೆ ತಣಿಸಲು ರಸ್ತೆ ಉದ್ದಕ್ಕೂ ಅರವಂಟಿಕೆಗಳು ಕಂಡುಬಂದವು. ನೀರು ಮಜ್ಜಿಗೆ, ಪಾನಕ, ಕೋಸಂಬರಿ ಅನ್ನು ಭಕ್ತರಿಗೆ ವಿತರಿಸಲಾಯಿತು.

ಹಲವೆಡೆ ಅನ್ನದಾನದ ಛತ್ರ ತೆರೆದು ಭಕ್ತರಿಗೆ ಬೆಳಗಿನಿಂದ ಸಂಜೆವರೆಗೂ ಹಲವೆಡೆ ದಾಸೋಹ ನೀಡಲಾಯಿತು.

ರಥೋತ್ಸವದ ಅಂಗವಾಗಿ ಗರಡವಾಹನೋತ್ಸವ, ಹನುಮಂತೋತ್ಸವ, ಸೂರ್ಯಮಂಡಲೋತ್ಸವ, ಶೇಷ ವಾಹನೋತ್ಸವ, ಮೋಹಿನಿ ತಿರುಕುಳೋತ್ಸವ, ವೈರಮುಡಿ ಉತ್ಸವ, ಗಜೇಂದ್ರ ಮೋಕ್ಷ, ಗರಡೋತ್ಸವ, ಉಂಜಲಿಸೇವೆ, ಧೂಳೋತ್ಸವ, ರಾಜಮುಡಿ ಉತ್ಸವಗಳು ನಡೆದವು.

ಸುಗಮ ರಸ್ತೆ ಸಂಚಾರ: ಜಾತ್ರೆ ಸಮಯದಲ್ಲಿ ಬನ್ನೇರುಘಟ್ಟದಿಂದ ಆನೇಕಲ್, ಬೆಂಗಳೂರಿಗೆ ವಾಹನಗಳು ಸಂಚರಿಸಬೇಕಾದರೆ ಗಂಟೆಗಟ್ಟಲೇ ಸಮಯ ಹಿಡಿಯುತ್ತಿತ್ತು. ಈ ವರ್ಷ ವಾಹನಗಳನ್ನು ಕೊಪ್ಪ ಗೇಟ್ ಬಳಿಯೇ ಬೆಂಗಳೂರು ಸಂಪರ್ಕಕ್ಕೆ ತಿರುವು ನೀಡಿದ್ದರಿಂದ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಬನ್ನೇರುಘಟ್ಟಕ್ಕೆ ಬರಲಿಲ್ಲ. ಜಾತ್ರೆಯು ಸುಗಮವಾಗಿ ನಡೆಯಲು ಪೊಲೀಸರು ವ್ಯವಸ್ಥೆ ಮಾಡಿದ್ದರು. ಜಾತ್ರೆಯ ಅಂಗವಾಗಿ ಬನ್ನೇರುಘಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಚಂಪಕಧಾಮಸ್ವಾಮಿ ರಥೋತ್ಸವದಲ್ಲಿ ಭಾಗಿಯಾಗಿದ್ದ ಭಾರಿ ಜನಸ್ತೋಮ
ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಮಂಗಳಮುಖಿಯರು

ಲಿಂಗತ್ವ ಅಲ್ಪಸಂಖ್ಯಾತರ ಮೆರವಣಿಗೆ ಪ್ರಮುಖ ಆಕರ್ಷಣೆ

 ಬನ್ನೇರುಘಟ್ಟ ಚಂಪಕಧಾಮಸ್ವಾಮಿ ಜಾತ್ರೆಯ ಮತ್ತೊಂದು ವಿಶೇಷತೆಯೆಂದರೆ ಜಾತ್ರೆಯಲ್ಲಿ ನೂರಾರು ಮಂದಿ ಜಮಾವಣೆಗೊಳ್ಳುವ ಲಿಂಗತ್ವ ಅಲ್ಪಸಂಖ್ಯಾತರು. ಬೆಂಗಳೂರು ಹೊಸೂರು ಸೇರಿದಂತೆ ವಿವಿಧ ಭಾಗಗಳಿಂದ ನೂರಾರು ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಆಗಮಿಸಿದ್ದರು. ಲಿಂಗತ್ವ ಅಲ್ಪಸಂಖ್ಯಾತರು ಬನ್ನೇರುಘಟ್ಟದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಸುಡುವ ಬಿಸಿಲಿನಲ್ಲಿ ಬರಿಗಾಲಿನಲ್ಲಿ ಚಂಡೆ ತಮಟೆಯ ತಾಳಕ್ಕೆ ಕುಣಿಯುತ್ತಾ ಎರಡು ಕಿ.ಮೀ. ದೂರದ ಬೇಗಿಹಳ್ಳಿಯ ಬೇಗಳಮ್ಮ ದೇವಾಸ್ಥಾನಕ್ಕೆ ಗುಂಪುಗುಂಪಾಗಿ ತೆರಳುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು. ಮಂಗಳಮುಖಿಯರ ಆರಾಧ್ಯದೈವವಾದ ಬೇಗಳಮ್ಮನಿಗೆ ಪೂಜೆ ಸಲ್ಲಿಸಲು ವಿಶೇಷವಾಗಿ ಅಲಂಕಾರ ಮಾಡಿಕೊಂಡು ಭಕ್ತಿಯಿಂದ ಭಾವುಕರಾಗಿ ಕುಣಿಯುತ್ತಾ ಸಾಗಿ ಬರುತ್ತಿದ್ದ ದೃಶ್ಯ ರಸ್ತೆಯುದ್ದಕ್ಕೂ ಕಂಡುಬಂದಿತು. ತಮಿಳುನಾಡಿನ ಕೆಲವು ಲಿಂಗತ್ವ ಅಲ್ಪಸಂಖ್ಯಾತರು ಕರಗ ಹೊರುತ್ತಾ ಸಾಗಿದರೇ ಕೆಲವರು ಮರದ ಬುಟ್ಟಿಗಳಲ್ಲಿ ಮಲ್ಲಿಗೆ ದಿಂಡುಗಳನ್ನು ಅಲಂಕರಿಸಿಕೊಂಡು ಸಾಗುತ್ತಿದ್ದರು. ಶನಿವಾರ ರಾತ್ರಿ ಬೇಗಿಹಳ್ಳಿಯಲ್ಲಿ ಉಳಿದು ಮಾಂಸದ ಅಡುಗೆ ಮಾಡಿ ಬೇಗಳಮ್ಮ ದೇವಿಗೆ ಅರ್ಪಿಸಿ ಭಾನುವಾರ ತಮ್ಮ ತಮ್ಮ ಗ್ರಾಮಗಳಿಗೆ ತೆರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.