
ಚಂದಾಪುರ ಸೂರ್ಯಸಿಟಿಯಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು
ಚಂದಾಪುರ (ಆನೇಕಲ್): ಇಲ್ಲಿಯ ಸೂರ್ಯಸಿಟಿಯಲ್ಲಿ ಭಾನುವಾರ ಆಯೋಜಿಸಲಾಗಿರುವ ಗುರುವಂದನಾ ಕಾರ್ಯಕ್ರಮದಲ್ಲಿ 1,500 ಶಿಕ್ಷಕರಿಗೆ ಸತ್ಕಾರ ಮತ್ತು 120 ಶಿಕ್ಷಕರಿಗೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಬಿ.ಶಿವಣ್ಣ ಹಿತೈಷಿ ಬಳಗ, ಬಿ.ಎಸ್.ಫೌಂಡೇಶನ್, ಬಿ.ಶಿವಣ್ಣ ಅಭಿಮಾನಿಗಳ ಬಳಗ ಮತ್ತು ಆಪ್ತ ಬಳಗದಿಂದ ಗುರು ವಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹಿತೈಷಿ ಬಳಗದ ಅಧ್ಯಕ್ಷ ಡಾ.ವೈ.ರಮೇಶ್ ಶನಿವಾರ ತಿಳಿಸಿದರು.
ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಾಹಿತಿ ಬಂಜೆಗೆರೆ ಜಯಪ್ರಕಾಶ್ ಆಶಯ ಭಾಷಣ ಮಾಡಲಿದ್ದಾರೆ. ಶಾಸಕ ಬಿ.ಶಿವಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ನೆಲಮಂಗಲ ಶಾಸಕ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ರಾಮೋಜಿ ಗೌಡ, ಪುಟ್ಟಣ್ಣ, ರವಿ, ತಮಿಳುನಾಡಿನ ಹೊಸೂರು ಕ್ಷೇತ್ರದ ಶಾಸಕ ವೈ.ಪ್ರಕಾಶ್, ಥಳಿ ಶಾಸಕ ಟಿ.ರಾಮಚಂದ್ರ, ಮುಖಂಡರಾದ ಸಿ.ಆರ್.ಮನೋಹರ್, ಆರ್.ಕೆ.ರಮೇಶ್, ಪ್ರಭಾಕರ್ ರೆಡ್ಡಿ, ಬಾಬುರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು ವಿವಿಧ ತಜ್ಞ ವೈದ್ಯರು ತಪಾಸಣೆ ನಡೆಸಲಿದ್ದಾರೆ.
ಶಾಸಕ ಬಿ.ಶಿವಣ್ಣ ಜನ್ಮದಿನದ ಪ್ರಯುಕ್ತ ಭಾನುವಾರ ರಾತ್ರಿ 8.30ಕ್ಕೆ ಅಭಿಮಾನಿಗಳ ಬಳಗದಿಂದ ಗಯ ಚರಿತ್ರೆ (ಕೃಷ್ಣಾರ್ಜುನರ ಯುದ್ಧ) ನಾಟಕ ಪ್ರದರ್ಶನ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಸಿಂಗೇನಅಗ್ರಹಾರ ಗೌರೀಶ್ ತಿಳಿಸಿದರು.
ಪಟ್ಟಣದ ಹೊಸ ಮಾಧ್ಯಮಿಕ ಶಾಲೆಯಲ್ಲಿ ಭಾನುವಾರ ಸಂಜೆ ಹಿನ್ನೆಲೆ ಗಾಯಕ ಸಾಧು ಕೋಕಿಲ ಮತ್ತು ತಂಡದಿಂದ ಸಂಗೀತ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಗಾಯಕರಾದ ಹೇಮಂತ್, ಅನುರಾಧ ಭಟ್ ಸೇರಿದಂತೆ ವಿವಿಧ ಗಾಯಕರು ಜನರನ್ನು ರಂಜಿಸಲಿದ್ದಾರೆ ಎಂದು ಬೆಸ್ತಮಾನಹಳ್ಳಿ ಯಲ್ಲಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.