ADVERTISEMENT

ಚನ್ನರಾಯಪಟ್ಟಣ ರೈತರಲ್ಲಿ ಗೊಂದಲ ತಂದ ಕೆಐಎಡಿಬಿ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 2:10 IST
Last Updated 3 ಸೆಪ್ಟೆಂಬರ್ 2025, 2:10 IST
ಚನ್ನರಾಯಪಟ್ಟಣ ಹೋಬಳಿಯ ಹ್ಯಾಡಾಳ ಮತ್ತು ಗೋಕರೆ ಬಚ್ಚೇನಹಳ್ಳಿ ರೈತರಿಗೆ ಕೆಐಎಡಿಬಿ ದರ ನಿಗದಿ ನೋಟಿಸ್ ಜಾರಿಗೊಳಿಸಿರುವುದನ್ನು ವಿರೋಧಿಸಿ ದೇವನಹಳ್ಳಿಯ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಕಾರರು ತಹಶೀಲ್ದಾರ್ ಅನಿಲ್‌ ಅವರಿಗೆ ಪ್ರತಿಭಟನಾ ಪತ್ರ ಸಲ್ಲಿಸಿದರು.
ಚನ್ನರಾಯಪಟ್ಟಣ ಹೋಬಳಿಯ ಹ್ಯಾಡಾಳ ಮತ್ತು ಗೋಕರೆ ಬಚ್ಚೇನಹಳ್ಳಿ ರೈತರಿಗೆ ಕೆಐಎಡಿಬಿ ದರ ನಿಗದಿ ನೋಟಿಸ್ ಜಾರಿಗೊಳಿಸಿರುವುದನ್ನು ವಿರೋಧಿಸಿ ದೇವನಹಳ್ಳಿಯ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಕಾರರು ತಹಶೀಲ್ದಾರ್ ಅನಿಲ್‌ ಅವರಿಗೆ ಪ್ರತಿಭಟನಾ ಪತ್ರ ಸಲ್ಲಿಸಿದರು.   

ದೇವನಹಳ್ಳಿ: ಸಾವಿರಕ್ಕೂ ಹೆಚ್ಚು ದಿನ ರೈತರು ನಡೆಸಿದ ಹೋರಾಟಕ್ಕೆ ಮಣಿದ ಸರ್ಕಾರವು ಭೂಸ್ವಾಧೀನದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ ಬಳಿಕವೂ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ), ಚನ್ನರಾಯಪಟ್ಟಣ ರೈತರಿಗೆ ಜಮೀನು ದರ ನಿಗದಿ ನೋಟಿಸ್‌ ಜಾರಿಗೊಳಿಸಿದೆ.

ಕೆಐಎಡಿಬಿ ಕೇಂದ್ರ ಕಚೇರಿಯ ವಿಶೇಷ ಭೂಸ್ವಾಧೀನ ಅಧಿಕಾರಿ ಆ.29 ರಂದು ಚನ್ನರಾಯಪಟ್ಟಣ ಹೋಬಳಿಯ ಹ್ಯಾಡಾಳ ಮತ್ತು ಗೋಕರೆ ಬಚ್ಚೇನಹಳ್ಳಿ ರೈತರಿಗೆ ಜಮೀನು ದರ ನಿಗದಿ ನೋಟಿಸ್ ಜಾರಿಗೊಳಿಸಿದ್ದಾರೆ. ಇದು ರೈತರಿಗೆ ಆತಂಕ ಮೂಡಿಸುವ ಜೊತೆಗೆ ಗೊಂದಲಕ್ಕೂ ಕಾರಣವಾಗಿದೆ.

ಕೆಐಎಡಿಬಿ ಜಾರಿ ಮಾಡಿರುವ ನೋಟಿಸ್‌ ಹಿಂಪಡೆಯುವಂತೆ ಒತ್ತಾಯಿಸಿ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಸದಸ್ಯರು ಹಾಗೂ ರೈತರು ಸೋಮವಾರ ದೇವನಹಳ್ಳಿ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟಿಸಿದರು. ದೇವನಹಳ್ಳಿ ತಹಶೀಲ್ದಾರ್‌ ಅನಿಲ್‌ ಅವರಿಗೆ ಪ್ರತಿಭಟನಾ ಪತ್ರ ಸಲ್ಲಿಸಿದರು.

ADVERTISEMENT

ರೈತರ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 15ರಂದು ರೈತರೊಂದಿಗೆ ನಡೆಸಿದ ಸಭೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಟ್ಟಿರುವುದಾಗಿ ಘೋಷಿಸಿದ್ದರು. ಈ ಬಗ್ಗೆ ಆ.15ರಂದು ಪತ್ರಿಕೆಗಳಿಗೆ ಜಾಹೀರಾತು ಕೂಡ ನೀಡಿದ್ದರು. ಆದರೆ, ಕೆಐಎಡಿಬಿ ಅಧಿಕಾರಿಗಳು ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಕಾರರು ಆಕ್ರೋಶ ಹೊರಹಾಕಿದರು.

‘ರೈತರ ಭೂಮಿಯನ್ನು ರೈತರಿಗೆ ಉಳಿಸಿದ್ದೇವೆ’ ಎಂದು ಸರ್ಕಾರ ಜಾಹೀರಾತು ನೀಡಿ 15 ದಿನ ಕಳೆಯುವುದರ ಒಳಗೆ ಹ್ಯಾಡಾಳ ಮತ್ತು ಗೋಕರೆ ಬಚ್ಚೇನಹಳ್ಳಿ ರೈತರಿಗೆ ದರ ನಿಗದಿಗಾಗಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ ಜಾರಿಗೊಳಿಸಿರುವುದು ರೈತರಲ್ಲಿ ಆತಂಕದ ಜೊತೆಗೆ ಗೊಂದಲಕ್ಕೂ ಕಾರಣವಾಗಿದೆ ಎಂದು ಹೋರಾಟಗಾರರು ಹರಿಹಾಯ್ದರು.

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 1,777 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕೆಐಎಇಡಿಬಿ ಭೂಸ್ವಾಧೀನ ಪ್ರಕ್ರಿಯೆಯಿಂದ ಬಿಡಿಸಿಕೊಳ್ಳಲು 13 ಹಳ್ಳಿಗಳು ರೈತರು ನಿರಂತರವಾಗಿ ಮೂರೂವರೆ ವರ್ಷ ಹೋರಾಟ ಮಾಡಿದ್ದೇವೆ ಎಂದರು.

ಭೂಸ್ವಾಧೀನ ಕೈಬಿಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಘೋಷಿಸಿದ ಬಳಿಕವೂ ನೀವು ನೋಟಿಸ್ ಕೊಟ್ಟಿರುವುದು ಸರಿಯಲ್ಲ. ಈ ಕೂಡಲೇ ಆದೇಶ ವಾಪಸ್ ಪಡೆಯಬೇಕು. ನಕಲಿ ಸಹಿ ಮಾಡಿ, ಭೂಮಿ ಕೊಡಲು ರೈತರ ಒಪ್ಪಿಗೆ ಇದೆ ಎಂದು ಪತ್ರ ಕೊಟ್ಟಿರುವವ ವಿರುದ್ಧ ಎಫ್ಐಆರ್ ದಾಖಲಿಸಿ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಟಿ.ಯಶವಂತ್ ಆಗ್ರಹಿಸಿದರು.

ಸಚಿವರ ಜೊತೆ ಚರ್ಚೆ: ಕೆಐಎಡಿಬಿ ಸಿಇಒ

'ಸೆ.6 ರಂದು ದರ ನಿಗದಿ ಸಭೆಗೆ ಆಗಮಿಸುವಂತೆ ಹ್ಯಾಡಾಳ ಮತ್ತು ಗೋಕರೆ ಬಚ್ಚೇನಹಳ್ಳಿ ಗ್ರಾಮಗಳ ರೈತರಿಗೆ ಕೆಐಎಡಿಬಿ ನೋಟಿಸ್‌ ಜಾರಿಗೊಳಿಸಿದೆ. ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ದರ ನಿಗದಿ ಸಭೆ ರದ್ದುಗೊಳಿಸುವ ಬೇಡಿಕೆ ಮುಂದಿಟ್ಟಿದ್ದಾರೆ. ಇದನ್ನು ಸಚಿವರ ಗಮನಕ್ಕೆ ತರುತ್ತೇನೆ' ಎಂದು ಕೆಐಎಡಿಬಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಹೇಶ್ ರೈತರಿಗೆ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.