ದೇವನಹಳ್ಳಿ: ‘ಮಕ್ಕಳಿಗೆ ಕೃಷ್ಣ–ರಾಧೆಯರ ವೇಷಭೂಷಣ ತೊಡಿಸುವುದು ಪೋಷಕರಲ್ಲಿ ಸಂತಸವನ್ನುಂಟು ಮಾಡುತ್ತಿದೆ’ ಎಂದು ವಿಹಾನ್ ಪಬ್ಲಿಕ್ ಶಾಲೆ ಸಂಸ್ಥಾಪಕ ಅಧ್ಯಕ್ಷ ಪ್ರತಾಪ್ ಯಾದವ್ ಅಭಿಪ್ರಾಯಪಟ್ಟರು.
ಇಲ್ಲಿನ ವಿಹಾನ್ ಪಬ್ಲಿಕ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳಿಗೆ ಏರ್ಪಡಿಸಿದ್ದ ಕೃಷ್ಣ ರಾಧೆಯರ ವೇಷಭೂಷಣ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ರಾಮಾಯಣ ಮತ್ತು ಮಹಾಭಾರತ ಹಿಂದೂ ಧರ್ಮದ ಮಹಾಕಾವ್ಯಗಳು. ಅಂದಿನ ಕಾಲಘಟ್ಟದಲ್ಲಿ ನಡೆದ ಘಟನೆಗಳೇ ಕಾವ್ಯದ ಸಾರ. ಕೃಷ್ಣನ ಬಾಲ ಲೀಲೆಗಳು, ತುಂಟಾಟ, ಗೋಪಿಕಾ ಸ್ತ್ರಿಯರೊಂದಿಗೆ ಇದ್ದ ಒಡನಾಟ, ಬಾಲ್ಯದಲ್ಲಿ ಅನೇಕ ಅಸುರರನ್ನು ಕೊಂದು ಹಾಕಿದ್ದು ಪುರಾಣದಿಂದ ತಿಳಿಯುತ್ತವೆ. ಮಕ್ಕಳಿಗೆ ಶ್ರೀಕೃಷ್ಣ ರಾಧೆಯರ ವೇಷಭೂಷಣ, ಐತಿಹಾಸಿಕ ರಾಜರ, ನಾಯಕರ, ರಾಷ್ಟ್ರೀಯ ನಾಯಕರ ವೇಷಭೂಷಣ ತೊಡಿಸುವುದು ಮಕ್ಕಳಲ್ಲಿ ಸ್ಫೂರ್ತಿ, ಆದರ್ಶ ಹಾಗೂ ಉತ್ತಮ ವ್ಯಕ್ತಿತ್ವಕ್ಕೆ ಪ್ರೇರಣೆಯಾಗುತ್ತದೆ’ ಎಂದು ಹೇಳಿದರು.
‘ಅಂತಹ ಅವಕಾಶ ವಾರ್ಷಿಕ ಹಬ್ಬಗಳಲ್ಲಿ ಮಾತ್ರ ಸಿಗಲಿದೆ. ಮಕ್ಕಳಿಗೆ ಯಾವುದೇ ವೇಷಭೂಷಣ ತೊಡಿಸಿದರೂ, ನೃತ್ಯ ಮಾಡಲು ಪುಟ್ಟ ಪುಟ್ಟ ಹೆಜ್ಜೆ ಇಟ್ಟರೂ ಎಲ್ಲರಿಗೂ ಖುಷಿ. ಅಂತೆಯೇ ಮಕ್ಕಳಲ್ಲಿ ಭೇದ ಮೂಡಿಸುವಂತಹ ವಾತಾವರಣ ಸೃಷ್ಟಿಸಬಾರದು. ಶ್ರೀ ಕೃಷ್ಣನ ಜೀವನ ಚರಿತ್ರೆ ಬಗ್ಗೆ ಪ್ರಬಂಧ, ಬೆಣ್ಣೆ ಕದಿಯುವ ಸ್ಪರ್ಧೆ, ಶ್ರೀಕೃಷ್ಣನ ವೇಷಭೂಷಣದ ಬಗ್ಗೆ ಚಿತ್ರಕಲಾ ಸ್ಪರ್ಧೆ ನಡೆಸಲಾಗುತ್ತಿದ್ದು 82 ಮಕ್ಕಳು ಭಾಗವಹಿಸುತ್ತಿದ್ದಾರೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.