
ದೊಡ್ಡಬಳ್ಳಾಪುರ: ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ನಗರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ವತಿಯಿಂದ ಸಂವಿಧಾನ ದಿನಾಚರಣೆ–2025 ಕಾರ್ಯಕ್ರಮವು ಬುಧವಾರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ನಗರದ ಸಿದ್ದಲಿಂಗಯ್ಯ ವೃತ್ತದ ಬಳಿಯ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಮಾಜಿ ಪ್ರಧಾನಿ ಬಾಬು ಜಗಜೀವನ ರಾಂ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಂವಿಧಾನ ಜಾಗೃತಿ ಜಾಥಾ ನಡೆಸಲಾಯಿತು. ಸಂವಿಧಾನ ಪೀಠಿಕೆಯುಳ್ಳ ಬೆಳ್ಳಿ ರಥದ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು, ಬೃಹತ್ ರಾಷ್ಟ್ರ ಧ್ವಜ ಹಿಡಿದು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ಸಂವಿಧಾನದ ಮಹತ್ವ ಸಾರುವ ಭಿತ್ತಿಪತ್ರಗಳು ಹಾಗೂ ಘೋಷಣೆಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜಾಥಾವು ಭಗತ್ ಸಿಂಗ್ ಕ್ರೀಡಾಂಗಣದ ವೇದಿಕೆ ತಲುಪಿತು.
ಸದೃಢ ಪ್ರಜಾಪ್ರಭುತ್ವದ ಬುನಾದಿ: ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು ಅವರು, ಸಂವಿಧಾನದ ಪೀಠಿಕೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಸಮಾರಂಭದಲ್ಲಿ ಭಾಗವಹಿಸಿದ್ದ ನೂರಾರು ಜನ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಧೀರಜ್ ಮುನಿರಾಜ್, ‘ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ಹಸ್ತಾಂತರದ ಸಂದರ್ಭದಲ್ಲಿ ಕಾನೂನು ತೊಡಕು ಎದುರಾಗಿತ್ತು. ಆದರೆ, ಭಾರತ ಸಂವಿಧಾನವು ಚುನಾವಣಾ ವ್ಯವಸ್ಥೆ ಜಗತ್ತಿಗೇ ಮಾದರಿಯಾಗಿದ್ದು, ಗ್ರಾಮ ಪಂಚಾಯಿತಿಯಿಂದ ಹಿಡಿದು, ಪ್ರಧಾನಮಂತ್ರಿವರೆಗೆ ಚುನಾವಣೆ ಆಯ್ಕೆಯಲ್ಲಿ ಯಾವುದೇ ಗೊಂದಲಗಳಿಲ್ಲ. ಅಧಿಕಾರ ಮುಗಿದ ನಂತರ ಕೆಲ ಕ್ಷಣಗಳಲ್ಲಿಯೇ ಅಧಿಕಾರ ಹಸ್ತಾಂತರವಾಗಲಿದೆ. ದೇಶದ ಪ್ರಜೆಗಳಿಗೆ ಮೂಲಭೂತ ಹಕ್ಕುಗಳನ್ನು ನೀಡುವ ಮೂಲಕ ಸಮಾನತೆ, ಸಮಬಾಳು ಪರಿಕಲ್ಪನೆ ಹೊಂದಿರುವುದು ನಮ್ಮ ಸಂವಿದಾನ. ಇಂತಹ ಸಂವಿಧಾನದ ಆಶಯಗಳಿಗೆ ಧಕ್ಕೆ ಬಾರದಂತೆ ಜನಪ್ರತಿನಿಧಿಯಾಗಿ ನನ್ನ ಕರ್ತವ್ಯ ನಿರ್ವಹಿಸುತ್ತೇನೆ’ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರ.ಕೆ. ಆನಂದ್, ವಿ.ಎಸ್.ರವಿಕುಮಾರ್, ತಹಶೀಲ್ದಾರ್ ಮಲ್ಲಪ್ಪ ಕೆ.ಯರಗೋಳ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಶಂಕರಯ್ಯ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥಹರ್ತಿ, ಡಿವೈಎಸ್ಪಿ ಎಸ್.ಪಾಂಡುರಂಗ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿ.ಎನ್.ಶೇಷಾದ್ರಿ, ಪೌರಾಯುಕ್ತ ಕಾರ್ತಿಕೇಶ್ವರ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಎಸ್. ರಾಜಶೇಖರ್, ಗಾಯಕ ಅಶ್ವಿನ್ ಶರ್ಮಾ, ಪಿ. ಗೋವಿಂದರಾಜು, ಶಾಲಾ, ಕಾಲೇಜುಗಳು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿವಿಧ ದೇಶಗಳ ಸಂವಿಧಾನ ಓದಿದ್ದ ಅಂಬೇಡ್ಕರ್
ಬ್ರಿಟಿಷಕರ ಆಳ್ವಿಕೆ ಕೊನೆಗೊಂಡು ದೇಶ ಸ್ವಾತಂತ್ರ್ಯಗೊಂಡಾಗ ಭಾರತದ ಸುಭದ್ರ ಆಡಳಿತಕ್ಕಾಗಿ ಮಾದರಿ ಸಂವಿಧಾನ ಬೇಕು ಎಂಬ ಒತ್ತಾಸೆಗಳಿದ್ದವು. ಅದರಂತೆ 1949ರ ನವೆಂಬರ್ 26ರಂದು ಸಾಕಾರಕ್ಕೆ ಬಂದು 1950ರ ಜನವರಿ 26ರಂದು ಸಂವಿಧಾನವು ಅನುಷ್ಠಾನಕ್ಕೆ ಬಂದಿತು ಎಂದು ಉಪನ್ಯಾಸಕ ಎನ್. ಮಹೇಶ್ ತಿಳಿಸಿದರು. ಡಾ. ಬಾಬುರಾಜೇಂದ್ರ ಪ್ರಸಾದ್ ಅವರು ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾದರೆ ಅಂಬೇಡ್ಕರ್ ಅವರು ಕರಡು ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಅಂಬೇಡ್ಕರ್ ಅವರು ಫ್ರಾನ್ಸ್ ಸೋವಿಯತ್ ಒಕ್ಕೂಟ ಐರ್ಲೆಂಡ್ ಜಪಾನ್ ಸೇರಿದಂತೆ ಮೊದಲಾದ ದೇಶಗಳ ಸಂವಿಧಾನವನ್ನು ಅಭ್ಯಾಸ ಮಾಡಿ ಅಲ್ಲಿನ ಉತ್ತಮ ಅಂಶಗಳನ್ನು ಹೆಕ್ಕಿ ತೆಗೆದು ನಮ್ಮ ಸಂವಿಧಾನದಲ್ಲಿ ಅಳವಡಿಸಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.