ADVERTISEMENT

ಚಂದಾಪುರ ಕೆರೆ ಪ್ರದೇಶಕ್ಕೆ ಡಿ.ಸಿ ಭೇಟಿ

ನೈಸರ್ಗಿಕವಾಗಿ ಕಲುಷಿತ ನೀರು ಸಂಸ್ಕರಣೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2022, 22:15 IST
Last Updated 24 ಡಿಸೆಂಬರ್ 2022, 22:15 IST
ಆನೇಕಲ್ ತಾಲ್ಲೂಕಿನ ಚಂದಾಪುರ ಕೆರೆ ಪ್ರದೇಶಕ್ಕೆ ಶನಿವಾರ ಜಿಲ್ಲಾಧಿಕಾರಿ ಕೆ.ಎಸ್. ದಯಾನಂದ್ ಭೇಟಿ ನೀಡಿ ಪರಿಶೀಲಿಸಿದರು
ಆನೇಕಲ್ ತಾಲ್ಲೂಕಿನ ಚಂದಾಪುರ ಕೆರೆ ಪ್ರದೇಶಕ್ಕೆ ಶನಿವಾರ ಜಿಲ್ಲಾಧಿಕಾರಿ ಕೆ.ಎಸ್. ದಯಾನಂದ್ ಭೇಟಿ ನೀಡಿ ಪರಿಶೀಲಿಸಿದರು   

ಆನೇಕಲ್:ತಾಲ್ಲೂಕಿನ ಚಂದಾಪುರ ಕೆರೆಯ ಕಲುಷಿತ ನೀರನ್ನು ನೈಸರ್ಗಿಕವಾಗಿ ಸಂಸ್ಕರಿಸುವ ಹಿನ್ನೆಲೆಯಲ್ಲಿ ಕೆರೆಯಲ್ಲಿನ ನೀರನ್ನು ಖಾಲಿ ಮಾಡಲು ಅನುಮತಿ ನೀಡಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

ಕೆರೆ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ‍ಪರಿಶೀಲಿಸಿದ ಜಿಲ್ಲಾಧಿಕಾರಿ ಕೆ.ಎಸ್‌. ದಯಾನಂದ್‌ ಮಾತನಾಡಿ, ಚಂದಾಪುರ ಕೆರೆ ಮತ್ತು ಮುತ್ತಾನಲ್ಲೂರು ಕೆರೆಯ ಕೋಡಿಯನ್ನು ಭಾಗಶಃ ಒಡೆದು ಚಂದಾಪುರ ಕೆರೆಯ ಪೂರ್ಣ ನೀರು ಮತ್ತು ಮುತ್ತಾನಲ್ಲೂರು ಕೆರೆಯ ಭಾಗಶಃ ನೀರನ್ನು ಖಾಲಿ ಮಾಡಿ ಯಥಾಸ್ಥಿತಿಯಲ್ಲಿ ಮರು ನಿರ್ಮಾಣ ಮಾಡಲಾಗುವುದು ಎಂದರು.

ಮಾರ್ಚ್‌ ಅಂತ್ಯದೊಳಗೆ ಕೈಗೊಂಡ ಪ್ರಗತಿಯ ವರದಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ನೀಡಬೇಕಾಗಿದೆ. ಹಾಗಾಗಿ ಸಣ್ಣ ನೀರಾವರಿ, ಕಂದಾಯ ಇಲಾಖೆ ಮತ್ತು ಚಂದಾಪುರ ಪುರಸಭೆಯ ಮುಖ್ಯಾಧಿಕಾರಿ ಒಗ್ಗೂಡಿ ಈ ಕಾರ್ಯವನ್ನು ತ್ವರಿತವಾಗಿ ಮಾಡುವಂತೆ ಸೂಚಿಸಲಾಗಿದೆ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ತ್ವರಿತವಾಗಿ ಕಾಮಗಾರಿ ನಿರ್ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ವಿದೇಶಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ದೇಶದಲ್ಲಿ ಹೊಸ ಮಾರ್ಗಸೂಚಿ ಹೊರಡಿಸಿದೆ. ಇದರ ಅನ್ವಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಅತ್ತಿಬೆಲೆ ಗಡಿ ಭಾಗದಲ್ಲಿ ಅಂತರ್‌ ರಾಜ್ಯ ವಾಹನ ಸಂಚಾರ ಇರುವುದರಿಂದ ಗಡಿಯಲ್ಲಿ ತಪಾಸಣೆ ಕೈಗೊಳ್ಳುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು. ಮುನ್ನೆಚ್ಚರಿಕೆ ಕ್ರಮ ಪಾಲಿಸುವ ಮೂಲಕ ಕೊರೊನಾ ವಿರುದ್ಧ ಹೋರಾಟ ನಡೆಸಬೇಕಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.