ವಿಜಯಪುರ(ಬೆಂ.ಗ್ರಾಮಾಂತರ):ನವೆಂಬರ್ ಆರಂಭವಾಗುತ್ತಿದ್ದಂತೆ ಎಲ್ಲೆಡೆ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿ ಸಂಭ್ರಮಿಸುವುದು ವಾಡಿಕೆಯಾಗಿದೆ.
ಭಾಷಾಭಿಮಾನ ಹೆಸರಿನಲ್ಲಿ ಕೆಲವು ಖಾಸಗಿ ಬಸ್ಗಳಿಗೆ ಹೂವಿನ ಅಲಂಕಾರ ಮಾಡಿಕೊಂಡು ಸಂಚರಿಸುತ್ತಿರುವುದು ವಾಡಿಕೆಯಾಗಿ ಬಿಟ್ಟಿದ್ದು, ಅಲಂಕಾರದ ಹೆಸರಿನಲ್ಲಿ ಚಾಲಕನ ಮುಂಭಾಗದ ಗಾಜನ್ನು ಹೂವಿನಿಂದ ಮುಚ್ಚಿಕೊಂಡು ಚಾಲನೆ ಮಾಡಲಾಗುತ್ತಿದೆ. ಪ್ರಯಾಣಿಕರ ಸುರಕ್ಷತೆ ಕಡೆಗೆ ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಡ್ಲಘಟ್ಟದಿಂದ ವಿಜಯಪುರದ ಮೂಲಕ ಬೆಂಗಳೂರಿನ ಕಡೆಗೆ ಸಂಚರಿಸುತ್ತಿರುವ ಖಾಸಗಿ ಬಸ್ವೊಂದಕ್ಕೆ ರಾಜ್ಯೋತ್ಸವ ಆಚರಣೆ ಮಾಡಲು ಬಸ್ ಅನ್ನು ಹೂವಿನಿಂದ ಅಲಂಕಾರ ಮಾಡಿಕೊಂಡು ಪ್ರಯಾಣಿಕರನ್ನು ಹತ್ತಿಸಿಕೊಂಡು ಸಂಚರಿಸುತ್ತಿದೆ. ಆದರೆ, ಚಾಲಕನ ಮುಂಭಾಗದ ಗಾಜನ್ನು ಸಂಪೂರ್ಣವಾಗಿ ಹೂಗಳಿಂದ ಅಲಂಕಾರ ಮಾಡಲಾಗಿದೆ.
ಮುಖ್ಯ ಹೆದ್ದಾರಿಗಳಲ್ಲಿ ಸಂಚರಿಸುವ ಬಸ್ನಲ್ಲಿ ಹಲವಾರು ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಅವರ ಜೀವಕ್ಕೆ ಭದ್ರತೆ ಇಲ್ಲದಂತಾಗಿದೆ. ಬಸ್ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದರೂ ಪೊಲೀಸರಾಗಲಿ, ಸಾರಿಗೆ ಇಲಾಖೆ ಅಧಿಕಾರಿಗಳಾಗಲಿ ಇದನ್ನು ಗಮನಿಸದೆ ಇರುವುದು ವಿಪರ್ಯಾಸ ಎಂದು ಸ್ಥಳೀಯ ನಿವಾಸಿ ಮನೋಹರ್ ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.