
ಆನೇಕಲ್: ತಾಲ್ಲೂಕು ಹಸಿರುಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ತಾಲ್ಲೂಕಿನ ಬ್ಯಾಗಡದೇನಹಳ್ಳಿ ಸಮೀಪ ರೈತರೇ ಪ್ರಾರಂಭಿಸಿರುವ ಗೊಬ್ಬರ ಮತ್ತು ಕ್ರಿಮಿನಾಶಕ ಮಳಿಗೆಯನ್ನು ಸಂಘದ ಅಧ್ಯಕ್ಷ ಕೂನಮಡಿವಾಳ ವೈ.ಸೋಮಣ್ಣ ಅವರು ಸೋಮವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಹಸಿರುಮನೆ ಬೆಳೆಗಾರರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಹಸಿರು ಮನೆಯಲ್ಲಿ ಬೆಳೆದ ಹೂವುಗಳ ಮಾರಾಟಕ್ಕೆ ಮಾರುಕಟ್ಟೆ ಒದಗಿಸುವಂತೆ ಕೋರಲಾಗಿತ್ತು. ಬಜೆಟ್ನಲ್ಲಿ ಬೆಂಗಳೂರು ನಗರ ಜಿಲ್ಲೆಗೆ ವಾಣಿಜ್ಯ ಪುಷ್ಪ ಮಾರುಕಟ್ಟೆ ಸ್ಥಾಪಿಸುವ ವಿಷಯ ಪ್ರಸ್ತಾಪವಾಗಿದೆ. ಆನೇಕಲ್ನಲ್ಲಿಯೇ ಸ್ಥಾಪಿಸಬೇಕು ಎಂಬುದು ಸಂಘದ ಒತ್ತಾಯವಾಗಿದೆ ಎಂದು ತಿಳಿಸಿದರು.
ಹಸಿರುಮನೆ ಬೆಳೆಗಳನ್ನು ವಾಣಿಜ್ಯ ಬೆಲೆ ಎಂದು ಪರಿಗಣಿಸಿ ಬೆಸ್ಕಾಂನಿಂದ ಹೆಚ್ಚು ವಿದ್ಯುತ್ ದರ ವಿಧಿಸಲಾಗುತ್ತಿದೆ. ಇದನ್ನು ಕಡಿಮೆ ಮಾಡಲು ಕೋರಲಾಗಿದೆ. ಕೃತಕ ಹೂವುಗಳನ್ನು ಕಲ್ಯಾಣಮಂಟಪ ಮತ್ತು ಸಭೆ ಸಮಾರಂಭಗಳಲ್ಲಿ ಉಪಯೋಗಿಸುವುದನ್ನು ನಿಷೇಧಿಸುವಂತೆ ಒತ್ತಾಯಿಸಲಾಗಿದೆ. ಈ ಬೇಡಿಕೆಗೆ ಈಡೇರಿಕೆಗಾಗಿ ಸಂಘವು ಪ್ರಯತ್ನ ನಡೆಸಲಿದೆ ಎಂದರು.
ಸಂಘವು ಪ್ರಾರಂಭಿಸಿದ ಈ ಮಳಿಗೆಯಿಂದಾಗಿ ಗುಣಮಟ್ಟದ ಗೊಬ್ಬರ, ಕ್ರಿಮಿನಾಶಕ ದೊರೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ನಿರ್ವಹಣೆಗಾಗಿ ಮಾತ್ರ ಲಾಭ ಪಡೆಯಲಾಗುತ್ತದೆ ಎಂದರು.
ಸಂಘವು ಈ ತೀರ್ಮಾನ ಕೈಗೊಂಡಾಗ ಹಲವಾರು ಮಂದಿ ರೈತರು ಸಂಘಕ್ಕೆ ಕೊಡುಗೆ ನೀಡಿದ್ದು ಸುಮಾರು ₹35 ಲಕ್ಷ ವೆಚ್ಚದಲ್ಲಿ ಲಾಭರಹಿತ ಮಳಿಗೆ ಸ್ಥಾಪಿಸಲಾಗಿದೆ. ಇದರಿಂದ ಮಧ್ಯವರ್ತಿಗಳ ಹಾವಳಿಯಿಲ್ಲದೇ ಕಂಪನಿಗಳಿಂದ ನೇರವಾಗಿ ರೈತರಿಗೆ ಗೊಬ್ಬರು ಮತ್ತು ಕ್ರಿಮಿನಾಶಕ ದೊರೆಯುವಂತೆ ಮಾಡಲಾಗಿದೆ ಎಂದರು.
ದೊಡ್ಡಹಾಗಡೆ ಹರೀಶ್, ಪಾರ್ಥಪ್ಪ, ಸಂಘದ ಉಪಾಧ್ಯಕ್ಷ ಬಿ.ಲೋಕೇಶ್ ರೆಡ್ಡಿ, ಕಾರ್ಯದರ್ಶಿ ಮೋಹನ್, ಸಂಘದ ಪದಾಧಿಕಾರಿಗಳಾದ ಮಂಜುನಾಥ್, ಅಶೋಕ್, ದೊಡ್ಡಹಾಗಡೆ ಮಧು, ರಾಮಕೃಷ್ಣಪ್ಪ, ವೆಂಕಟೇಶ್, ಕೀರ್ತನಾ, ಗೋಪಾಲರೆಡ್ಡಿ, ಮಲ್ಲೇಶ್, ಶಿವಕುಮಾರ್, ವಿಜಯಕುಮಾರ್, ಪ್ರಸಾದ್ ರೆಡ್ಡಿ, ಜಯಶಂಕರರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.