ADVERTISEMENT

ದೇವನಹಳ್ಳಿ: ವಿಮಾನ ನಿಲ್ದಾಣದ ವಾಯುವಜ್ರ ನಿಲುಗಡೆ ಸ್ಥಳ ಕಡಿತ

ವಿಮಾನ ನಿಲ್ದಾಣದ ಟಿ1ರಲ್ಲಿ ಟ್ಯಾಕ್ಸಿ ಜಾಲದ ಹುನ್ನಾರ ಆರೋಪ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 21:08 IST
Last Updated 9 ಜನವರಿ 2026, 21:08 IST
ದೇವನಹಳ್ಳಿ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಟಿ-1ನಲ್ಲಿರುವ ವಾಯುವಜ್ರ ಬಸ್‌ ನಿಲ್ದಾಣ
ದೇವನಹಳ್ಳಿ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಟಿ-1ನಲ್ಲಿರುವ ವಾಯುವಜ್ರ ಬಸ್‌ ನಿಲ್ದಾಣ   

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–1ರಲ್ಲಿ ವಾಯು ವಜ್ರ ಬಸ್‌ಗಳ ನಿಲುಗಡೆ ಸ್ಥಳವನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಬಿಐಎಎಲ್) ಕಡಿಮೆ ಮಾಡಿದೆ. ಅಗ್ಗದ ಸಾರ್ವಜನಿಕ ಸಾರಿಗೆಯನ್ನೇ ಬಳಸುತ್ತಿದ್ದ ಪ್ರಯಾಣಿಕರಿಗೆ ದೊಡ್ಡ ಹೊಡೆತ ಬಿದ್ದಿದೆ. 

ಅನಿವಾರ್ಯವಾಗಿ ಪ್ರಯಾಣಿಕರು ದುಬಾರಿ ಖಾಸಗಿ ಟ್ಯಾಕ್ಸಿಯತ್ತ ಮುಖ ಮಾಡುವ ವ್ಯವಸ್ಥಿತವಾದ ಜಾಲ ಇದಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಟರ್ಮಿನಲ್‌–1ರಲ್ಲಿ ವಾಯು ವಜ್ರ ಬಸ್‌ಗಳಿಗೆ ಈ ಹಿಂದೆ 14 ನಿಲುಗಡೆ ಸ್ಥಳಗಳಿದ್ದವು. ಆಗ ಬಸ್‌ಗಳು 20–30 ನಿಮಿಷ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಂಡು ಸುಗಮವಾಗಿ ಹೊರಡುತ್ತಿದ್ದವು. ಈಗ ನಿಲುಗಡೆ ಸ್ಥಳಗಳ ಸಂಖ್ಯೆ ಕೇವಲ 6ಕ್ಕೆ ಇಳಿಸಲಾಗಿದೆ. ಪರಿಣಾಮ ಬಸ್‌ಗಳಿಗೆ 10 ನಿಮಿಷಕ್ಕೂ ಕಡಿಮೆ ಸಮಯ ಮಾತ್ರ ನಿಲ್ಲಲು ಅವಕಾಶ ಸಿಗುತ್ತಿದೆ. ಅನೇಕ ಪ್ರಯಾಣಿಕರಿಗೆ ನಿಗದಿತ ಮಾರ್ಗದ ಬಸ್‌ಗಳು ತಪ್ಪಿ ಹೋಗುತ್ತಿವೆ.

ADVERTISEMENT

ಚಾಲಕರಿಗೂ ಕಷ್ಟ: ‘ಟರ್ಮಿನಲ್‌–1ರಲ್ಲಿ ನಿಲ್ಲಲು ಬಿಡುವುದಿಲ್ಲ. 2–3 ಕಿ.ಮೀ ದೂರದ ಪಿ7 ಪಾರ್ಕಿಂಗ್‌ಗೆ ಹೋಗಿ ಬರಬೇಕು. ಇಡೀ ದಿನ ಓಡಾಟದಲ್ಲೇ ಹೋಗುತ್ತದೆ. ಊಟಕ್ಕೂ ಸಮಯ ಸಿಗಲ್ಲ ಎಂದು’ ಚಾಲಕರು ಅಳಲು ತೋಡಿಕೊಂಡರು.

ವಾಯು ವಜ್ರ ಬಸ್‌ಗಳ ನಿಲುಗಡೆ ಸ್ಥಳ ಕಡಿತ ಮಾಡಿರುವುದು ಗಮನಕ್ಕೆ ಬಂದಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಯೊಂದಿಗೆ ಮಾತನಾಡಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.