ADVERTISEMENT

ದೇವನಹಳ್ಳಿ: ವೈಕುಂಠ ಏಕಾದಶಿ ದರ್ಶನ ಸಂಭ್ರಮ

ಕೋಟೆ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ವಿಶೇಷ ಅಲಂಕಾರ, ಅಭಿಷೇಕ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 12:59 IST
Last Updated 18 ಡಿಸೆಂಬರ್ 2018, 12:59 IST
ದೇವನಹಳ್ಳಿಯ ವೇಣುಗೋಪಾಲ ಸ್ವಾಮಿಗೆ ಪಲ್ಲಕ್ಕಿ ಉತ್ಸವ ನಡೆಯಿತು
ದೇವನಹಳ್ಳಿಯ ವೇಣುಗೋಪಾಲ ಸ್ವಾಮಿಗೆ ಪಲ್ಲಕ್ಕಿ ಉತ್ಸವ ನಡೆಯಿತು   

ದೇವನಹಳ್ಳಿ: ತಾಲ್ಲೂಕಿನ ವಿವಿಧೆಡೆ ವೆಂಕಟೇಶ್ವರ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಭಕ್ತರ ಸಮೂಹ ವೈಕುಂಠ ದ್ವಾರದರ್ಶನ ಮಾಡಿ ದೇವರ ದರ್ಶನ ಪಡೆದರು.

ನಗರದ ಐತಿಹಾಸಿಕ ಕೋಟೆ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಬೆಳಗಿನ ಜಾವದಿಂದಲೇ ರುಕ್ಮಿಣಿ ಸತ್ಯಭಾಮ ಸಮೇತ ಸ್ವಾಮಿಗೆ ಅಭಿಷೇಕ, ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ನಂತರ ಉತ್ಸವ ದೇವರನ್ನು ವಿಮಾನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ವಿವಿಧ ಗಂಧ ಪುಷ್ಪಗಳಿಂದ ಅಲಂಕರಿಸಿ ಪೂಜೆ ನಡೆಸಲಾಯಿತು.

ಅರ್ಚಕರ ಸಮೂಹ ಒಂದು ತಾಸಿಗೂ ಹೆಚ್ಚಿನಕಾಲ ವೇದ ಘೋಷ ಮತ್ತು ಮಂತ್ರ ಪಠಣದ ನಂತರ ಸಾರ್ವಜನಿಕವಾಗಿ ಭಕ್ತರಿಗೆ ದ್ವಾರಬಾಗಿಲು ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ದರ್ಶನ ಪಡೆದ ಭಕ್ತರು ಮತ್ತೆ ಸರತಿಯ ಸಾಲಿನಲ್ಲಿ ನಿಂತು ಅಲಂಕೃತ ಮೂಲ ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಪಡೆದರು.

ADVERTISEMENT

ಮಧ್ಯಾಹ್ನ 12.30 ರವರೆಗೆ ನಡೆದ ದರ್ಶನದ ನಂತರ ಉತ್ಸವ ಮೂರ್ತಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮಂಗಳವಾದ್ಯದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಜ್ಯೋತಿ ನಗರ ವೈಶ್ಯ (ಗಾಣಿಗ ಶೆಟ್ಟರು) ಸಮುದಾಯದ ಮುಖಂಡರು ಹಾಗೂ ವೈಕುಂಠ ದ್ವಾರ ದರ್ಶನ ಮತ್ತು ಪೂಜಾ ಸಮಿತಿ ಗೌರವಾಧ್ಯಕ್ಷ ಜಿ.ಎನ್. ವೇಣುಗೊಪಾಲ್, ಅಧ್ಯಕ್ಷ ನಾರಾಯಣಪ್ಪ, ಉಪಾಧ್ಯಕ್ಷ ಎಲೆ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಸ್. ಗೋಪಾಲ್, ಖಜಾಂಚಿ ದಾಸಪ್ಪ, ಸಹಕಾರ್ಯದರ್ಶಿ ಚಿಕ್ಕಣ್ಣ, ತಹಶೀಲ್ದಾರ್ ಎಂ. ರಾಜಣ್ಣ ದರ್ಶನ ಪಡೆದರು.

ನಗರದ ರಾಷ್ಟ್ರೀಯ ಹೆದ್ದಾರಿ 207ರ ರಸ್ತೆ ಕನಕದಾಸರ ವೃತ್ತದ ಬಳಿ ಇರುವ ವೆಂಕಟೇಶ್ವರ ದೇವಾಲಯದಲ್ಲಿ ಬೆಳಿಗ್ಗೆ 9.30ಕ್ಕೆ ವೈಕುಂಠ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಭಕ್ತರು ವೈಕುಂಠ ದ್ವಾರ ದರ್ಶನಕ್ಕೆ ಮೊದಲು ದೇವಾಲಯದ ಸುತ್ತು ಪ್ರದಕ್ಷಿಣೆ ಹಾಕಿದರು.

ನೂರಾರು ಭಕ್ತರು ಸರತಿಯ ಸಾಲಿನಲ್ಲಿ ಸಾಗಿ ಅಲಂಕೃತ ಮೂಲ ದೇವರು ದೇವರ ದರ್ಶನ ಪಡೆದು ಸರತಿಯಲ್ಲಿ ತೀರ್ಥ ಪ್ರಸಾದ ಸ್ವಿಕರಿಸಿದರು.

ನಂದಿ ಬೆಟ್ಟದ ರಸ್ತೆಯಲ್ಲಿರುವ ಸ್ವಾಮಿಗೆ ವೈಕುಂಠ ಏಕಾದಶಿ ಅಂಗವಾಗಿ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಭಕ್ತರು ಫಲತಾಂಬೂಲ ನೀಡಿ ದೇವರ ಸೇವೆಯಲ್ಲಿ ಪಾಲ್ಗೊಂಡು ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.