ಆನೇಕಲ್: ಪೇಟಾ ಸಂಸ್ಥೆಯ ಮಾರ್ಗದರ್ಶನದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ಸುಂದರ್ಗೆ ಬಗೆಬಗೆಯ ಹಣ್ಣುಗಳನ್ನು ನೀಡಿ ದೀಪಾವಳಿಯ ಸಂದರ್ಭದಲ್ಲಿ ಆನೆಯ ಪುಷ್ಟೀಕರಣ ಮಾಡಲಾಯಿತು.
ಮಹಾರಾಷ್ಟ್ರದ ಕೊಲ್ಹಾಪುರದ ದೇವಾಲಯದಲ್ಲಿದ್ದ ಆನೆ ಸುಂದರ್ನನ್ನು ಪೇಟಾ ಸಂಸ್ಥೆಯು ಕಾನೂನು ಹೋರಾಟದ ಮೂಲಕ ಸಂರಕ್ಷಿಸಿ 2014ರಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹಸ್ತಾಂತರಿಸಲಾಗಿತ್ತು.
20 ವರ್ಷದ ಸುಂದರ್ 14 ವರ್ಷಗಳ ಕಾಲ ಯಾವುದೇ ಆನೆಗಳ ಸಂಪರ್ಕವಿಲ್ಲದೇ ಏಕಾಂಗಿಯಾಗಿ ಜನರೊಂದಿಗೆ ಬೆರೆತಿತ್ತು. 2014ರಲ್ಲಿ ಬನ್ನೇರುಘಟ್ಟ ಉದ್ಯಾನಕ್ಕೆ ಬಂದ ನಂತರ ಉದ್ಯಾನದ ಆನೆಗಳೊಂದಿಗೆ ಹೊಂದಿಕೊಳ್ಳಲು ಅತ್ಯಂತ ಪ್ರಯಾಸಪಡುತ್ತಿತ್ತು. ಆನೆಯನ್ನು ಪಳಗಿಸುವ ಮತ್ತು ಇತರ ಆನೆಗಳೊಂದಿಗೆ ಬೆರೆಯುವ ನಿಟ್ಟಿನಲ್ಲಿ ಮಾವುತರು ಹಲವು ಪ್ರಯತ್ನಗಳನ್ನು ನಡೆಸಿದ ಪರಿಣಾಮವಾಗಿ ನಿಧಾನವಾಗಿ ಆನೆ ಸುಂದರ್ ಉದ್ಯಾನಕ್ಕೆ ಹೊಂದಿಕೊಳ್ಳುತ್ತಿದ್ದು ಉದ್ಯಾನದ ಸಿಬ್ಬಂದಿಯಲ್ಲಿ ಸಂತಸ ತಂದಿದೆ.
ದೀಪಾವಳಿ ಅಂಗವಾಗಿ ಪೇಟಾ ಸಂಸ್ಥೆಯ ಮಾರ್ಗದರ್ಶನದಲ್ಲಿ ಸುಂದರ್ಗೆ ಹಲವು ಬಗೆಯ ಹಣ್ಣುಗಳಾದ ಕಲ್ಲಂಗಡಿ, ಆಪಲ್, ಬಾಳೆಹಣ್ಣು, ಅನಾನಸ್, ಕ್ಯಾರೆಟ್ ಸೇರಿದಂತೆ ವಿವಿಧ ಬಗೆಯ ಹಣ್ಣು ಮತ್ತು ತರಕಾರಿಗಳಿಂದ ದೀಪದ ಮಾದರಿಯಲ್ಲಿ ಸಿದ್ದಗೊಳಿಸಿ ಸುಂದರ್ನಿಗೆ ನೀಡಿ ಪುಷ್ಟೀಕರಣ ಮಾಡಲಾಯಿತು ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.