
ದೊಡ್ಡಬಳ್ಳಾಪುರ: ನಗರದ ಪಶು ಆಸ್ಪತ್ರೆಯಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ರೈತರಿಗೆ ವಿದ್ಯುತ್ ಚಾಲಿತ ಮೇವು ಕಟಾವು ಯಂತ್ರಗಳನ್ನು ಗುರುವಾರ ವಿತರಿಸಲಾಯಿತು.
ಶಾಸಕ ಧೀರಜ್ ಮುನಿರಾಜು ಮಾತನಾಡಿ, ‘ತಾಲ್ಲೂಕಿನಲ್ಲಿ ಕೃಷಿಯೊಂದಿಗೆ ಹೈನುಗಾರಿಕೆಯು ರೈತರ ಪ್ರಮುಖ ಕಸುಬಾಗಿದೆ. ಇದಕ್ಕೆ ಉತ್ತೇಜನ ನೀಡಬೇಕಿದೆ. ಈ ನಿಟ್ಟಿನಲ್ಲಿ ಹೈನುಗಾರಿಕೆಯಲ್ಲಿ ಬಳಸುವ ಮೇವು ಕಟಾವು ಯಂತ್ರಗಳನ್ನು ತಾಲ್ಲೂಕಿಗೆ ಹೆಚ್ಚು ನೀಡುವಂತೆ ಮನವಿ ಸಲ್ಲಿಸಲಾಗಿದೆ’ ಎಂದು ಹೇಳಿದರು.
ಹೈನುಗಾರಿಕೆಯು ರೈತರ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗಿದೆ. ಇಂದು ಹೈನುಗಾರಿಕೆ ಸಂಕಷ್ಟದಲ್ಲಿದ್ದು, ಸರ್ಕಾರವು ರೈತರಿಗೆ ನೆರವು ನೀಡಬೇಕು. ರಾಸುಗಳಿಗೆ ಲಸಿಕೆ ಹಾಕುವುದು ಸೇರಿದಂತೆ ಇನ್ನಿತರ ನೆರವುಗಳನ್ನು ನೀಡಬೇಕು. 8ನೇ ಸುತ್ತಿನ ಕಾಲುಬಾಯಿ ರೋಗ ನಿಯಂತ್ರಣ ಲಸಿಕಾ ಅಭಿಯಾನದಲ್ಲಿ ದೊಡ್ಡಬಳ್ಳಾಪುರ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ಪ್ರಥಮ ಬಹುಮಾನ ದೊರೆತಿರುವುದು ಸಂತಸದ ಸಂಗತಿ ಎಂದರು.
ಪಶು ವೈದ್ಯಕೀಯ ಸೇವಾ ಇಲಾಖೆ ತಾಲ್ಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸದಾಶಿವ ಮೂರ್ತಿ ಮಾತನಾಡಿ, ರೈತರು ತಮ್ಮ ರಾಸುಗಳ ಆರೋಗ್ಯ ಕಾಪಾಡಿಕೊಂಡು ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡಬೇಕು. ಇಂದು ಇಲಾಖೆ ವತಿಯಿಂದ ಶೇ 50ರ ಸಹಾಯಧನದ ಮೂಲಕ ವಿದ್ಯುತ್ ಚಾಲಿತ ಮೇವು ಕಟಾವು ಯಂತ್ರಗಳನ್ನು ವಿತರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪಶು ವೈದ್ಯರಾದ ಡಾ.ಮಂಜುನಾಥ್, ಡಾ.ಕುಮಾರಸ್ವಾಮಿ, ನಾಗೇಶ್, ಕೆ.ಬಿ.ಮುದ್ದಪ್ಪ, ನಟರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.