ADVERTISEMENT

ಪಾರದರ್ಶಕ, ಶಾಂತಿಯುತ ಚುನಾವಣೆಗೆ ಸಿದ್ಧತೆ

ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಎ.ಸಿ ಸಭೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2024, 5:40 IST
Last Updated 19 ಮಾರ್ಚ್ 2024, 5:40 IST
ದೊಡ್ಡಬಳ್ಳಾಪುರದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಉಪವಿಭಾಗಾಧಿಕಾರಿ ಎಂ.ಶ್ರೀನಿವಾಸ್ ಮಾತನಾಡಿದರು. ತಹಶೀಲ್ದಾರ್‌ ವಿಭಾವಿದ್ಯಾರಾಥೋಡ್‌ ಇದ್ದರು
ದೊಡ್ಡಬಳ್ಳಾಪುರದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಉಪವಿಭಾಗಾಧಿಕಾರಿ ಎಂ.ಶ್ರೀನಿವಾಸ್ ಮಾತನಾಡಿದರು. ತಹಶೀಲ್ದಾರ್‌ ವಿಭಾವಿದ್ಯಾರಾಥೋಡ್‌ ಇದ್ದರು   

ದೊಡ್ಡಬಳ್ಳಾಪುರ: ಲೋಕಸಭೆಗೆ ಎರಡನೇ ಹಂತದಲ್ಲಿ ಏ.26ರಂದು ನಡೆಯಲಿರುವ ಚುನಾವಣೆಗೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಕಾರ್ಯಕ್ರಮಗಳಿಗೆ ಪೂರ್ವಾನುಮತಿ ಪಡೆಯುವಂತೆ ಸೂಚಿಸಲಾಗಿದೆ ಎಂದು ಉಪವಿಭಾಗಾಧಿಕಾರಿ, ಸಹಾಯಕ ಚುನಾವಣಾಧಿಕಾರಿಯೂ ಆದ ಎಂ.ಶ್ರೀನಿವಾಸ್ ಹೇಳಿದರು.

ಸೋಮವಾರ ನಡೆದ ವಿವಿಧ ರಾಜಕೀಯ ಮುಖಂಡರ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪಾರದರ್ಶಕ ಹಾಗೂ ಶಾಂತಿಯುತವಾಗಿ ಚುನಾವಣೆ ನಡೆಯಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.

ಚುನಾವಣೆ ಕಾರ್ಯ ನಿರ್ವಹಿಸುವ ಮತಗಟ್ಟೆ ಅಧಿಕಾರಿಗಳು, ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ರಾಜಕೀಯ ಪಕ್ಷಗಳ ಜವಾಬ್ದಾರಿ, ಚುನಾವಣೆ ಪ್ರಚಾರಕ್ಕೆ ಅನುಮತಿ ಸೇರಿದಂತೆ ಚುನಾವಣೆ ಮುಗಿಯುವವರಿಗೂ ನೀತಿ ಸಂಹಿತೆ ಪಾಲಿಸುವ ಕುರಿತು ರಾಜಕೀಯ ಪಕ್ಷಗಳ ಪದಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ADVERTISEMENT

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 276 ಮತಗಟ್ಟೆಗಳಲ್ಲಿ, 25 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಮತಗಟ್ಟೆಗಳಿಗೆ 331 ವಿದ್ಯುನ್ಮಾನ ಮತಯಂತ್ರಗಳು, 359 ವಿವಿ ಪ್ಯಾಟ್‍ಗಳ ಅವಶ್ಯಕತೆ ಇದ್ದು, ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೆಂದ್ರ ಸ್ಥಾಪಿಸಲಾಗಿದೆ. ಯಂತ್ರಗಳನ್ನು ಸೂಕ್ತ ಬಂದೋಬಸ್ತ್‌ನಲ್ಲಿ ತಂದಿರಿಸಲಾಗುವುದು. ದೇವನಹಳ್ಳಿ ಸಮೀಪದ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜೂನ್ 4 ರಂದು ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.

 ಚುನಾವಣೆಗಾಗಿ 1,325 ಸಿಬ್ಬಂದಿ ನಿಯೋಜಿಸಲಾಗಿದೆ. ಕ್ಷೇತ್ರದಲ್ಲಿ ಹೊಸಹುಡ್ಯ, ದೊಡ್ಡಬೆಳವಂಗಲ, ಆರೂಢಿ, ಮಧುರೆಯಲ್ಲಿ 4 ಚೆಕ್ ಪೋಸ್ಟ್‌ ಸ್ಥಾಪಿಸಲಾಗಿದೆ. ಚುನಾವಣಾ ಅಕ್ರಮಗಳು ಕಂಡು ಬಂದರೆ ಸಾರ್ವಜನಿಕರು ಆ ಸ್ಥಳದಿಂದಲೇ ಸಿಟಿಜನ್ ವಿಜಿಲ್ ಆ್ಯಪ್ ಮೂಲಕ ದೂರು ನೀಡಬಹುದು ಎಂದರು.

ನೀತಿ ಸಂಹಿತೆ ದೂರುಗಳಿಗಾಗಿ ಕಂಟ್ರೋಲ್ ರೂಂ ಸಂಖ್ಯೆ 080-27622002ಗೆ ಕರೆ ಮಾಡಬಹುದು.

ತಹಶೀಲ್ದಾರ್ ವಿಭಾವಿದ್ಯಾರಾಥೋಡ್, ಡಿವೈಎಸ್ಪಿ ಪಿ.ರವಿ, ನಗರಸಭೆ ಪೌರಾಯುಕ್ತ ಕೆ.ಪರಮೇಶ್, ಚುನಾವಣಾ ಶಿರಸ್ತೆದಾರ್ ಕೆ.ಕಿರಣ್‌ಕುಮಾರ್ ಇದ್ದರು.

ದೊಡ್ಡಬಳ್ಳಾಪುರ ಬೆಂಗಳೂರು ರಾಜ್ಯ ಹೆದ್ದಾರಿಯ ಹೊಸಹುಡ್ಯ ಸಮೀಪ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಲಾಗಿರುವ ಚಕ್‌ಪೋಸ್ಟ್‌ನಲ್ಲಿ ತಪಾಸಣೆಯಲ್ಲಿ ನಿರತರಾಗಿರುವ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.