
ದೊಡ್ಡಬಳ್ಳಾಪುರ: ಜಿಲ್ಲೆಯ ಕಲಾವಿದರಿಗಾಗಿ ಕಲಾ ಭವನ ನಿರ್ಮಾಣ ಮಾಡಬೇಕೆಂಬ ಆಶಯ ಕೈಗೂಡಿದ್ದು, ಮಾರ್ಚ್ 1ರಂದು ಜಿಲ್ಲಾ ಕಲಾ ಭವನ ಉದ್ಘಾಟನೆ ನೆರವೇರಲಿದೆ ಎಂದು ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಗೌರವ ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ ತಿಳಿಸಿದರು.
ಕಲಾಭವನವನ್ನು ಸರ್ಕಾರದ ಯಾವುದೇ ನೆರವು ಇಲ್ಲದೆ ದಾನಿಗಳ, ಗಣ್ಯರ ಸಹಕಾರದಿಂದ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಅನುದಾನ ಪಡೆದು ಮೊದಲ ಅಂತಸ್ತಿನ ಕಟ್ಟಡ ಹಾಗೂ ರಂಗ ವೇದಿಕೆ ನಿರ್ಮಿಸುವ ಯೋಜನೆಯಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
2009ರಲ್ಲಿ ಸ್ಥಾಪನೆಯಾದ ಬೆಂಗಳೂರು ಗ್ರಾಮಾಂತರ ಜಿಲ್ಲಾ ರಂಗಭೂಮಿ ಕಲಾವಿದರ ಸಂಘ ಇಲ್ಲಿಯವರೆಗೆ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ವಿವಿಧ ಕಲಾ ಚಟುವಟಿಕೆಗಳನ್ನು ಹಮ್ಮಿಕೊಂಡು, ಕಲಾವಿದರಿಗೆ ಉತ್ತೇಜನ ನೀಡಿಕೊಂಡು ಬರುತ್ತಿದೆ. ಈಗ ಸ್ವಂತ ಕಟ್ಟಡವಾಗಿರುವುದು ಕಲಾವಿದರಾದಿಯಾಗಿ ಎಲ್ಲರಿಗೂ ಸಂತಸ ತಂದಿದೆ ಎಂದು ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ತಿಳಿಸಿದರು.
ಉದ್ಘಾಟನಾ ಸಮಾರಂಭ: ಜಿಲ್ಲಾ ಕಲಾ ಭವನ ಉದ್ಘಾಟನೆ ಸಮಾರಂಭ ಮಾರ್ಚ್1 ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ. ಇದಕ್ಕೂ ಮುನ್ನ ಬೆಳಗ್ಗೆ 9.30ಕ್ಕೆ ಪ್ರವಾಸಿ ಮಂದಿರ ವೃತ್ತದ ಬಳಿಯಿಂದ ಕಲಾಭವನದವರೆಗೆ ಕಲಾತಂಡಗಳೊಡನೆ ಮೆರವಣಿಗೆ ನಡೆಯಲಿದೆ.
ಸಮಾರಂಭದಲ್ಲಿ ಪುಷ್ಪಾಂಡಜ ಆಶ್ರಮದ ಶ್ರೀದಿವ್ಯಜ್ಞಾನಾನಂದಗಿರಿಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಮಾಜಿ ಸಚಿವ ಎಚ್.ಎಂ.ರೇವಣ್ಣ, ಸಂಸದ ಡಾ.ಕೆ.ಸುಧಾಕರ್, ಶಾಸಕ ಧೀರಜ್ ಮುನಿರಾಜು, ಶರತ್ ಕುಮಾರ್ ಬಚ್ಚೇಗೌಡ, ಎನ್.ಶ್ರೀನಿವಾಸ್, ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜಿಲ್ಲೆಯ ಸಾಧಕ ಕಲಾವಿದರ ಸನ್ಮಾನ ನಡೆಲಿದೆ ಎಂದು ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟ ಸಿದ್ದಯ್ಯ, ಖಜಾಂಚಿ ಆರ್.ವಿ.ಮಂಜುನಾಥ, ಸಂಘಟನಾ ಕಾರ್ಯದರ್ಶಿ ಎಂ.ಪಿ.ನಾಗರಾಜು, ನಿರ್ದೇಶಕರಾದ ಆರ್.ಎ.ಸಂಜೀವರಾಯಪ್ಪ, ಮುನಿರಾಜು, ಬಿ.ಆರ್.ಪ್ರದೀಪ್ ಕುಮಾರ್, ಸಲಹಾ ಸಮಿತಿ ಸದಸ್ಯರಾದ ಸಿ.ಎನ್.ಮುನಿರಾಜು, ಎನ್.ಎಸ್.ಜಯರಾಂ, ಕೆ.ರಾಜಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.