ದೊಡ್ಡಬಳ್ಳಾಪುರ: ನೆಲಮಂಗಲ ತಾಲ್ಲೂಕಿನ ಸೋಂಪುರ ಹೋಬಳಿ ಮರಳುಕುಂಟೆ ಗ್ರಾಮದ ಹಂಚಕಲ್ಲುಗುಟ್ಟೆ ಒಳಗೊಂಡಂತೆ ಇರುವ ರೈತರ ಜಮೀನಿನಲ್ಲಿ ಹೈಬ್ರಿಡ್ ತಳಿಯ ಕಾಡು ಬೆಕ್ಕು ಪತ್ತೆಯಾಗಿದೆ.
ಅಳಿವಿನ ಅಂಚಿನಲ್ಲಿ ಇರುವ ಕಾಡು ಬೆಕ್ಕು ತಳಿಗಳ ಪೈಕಿ ಇದು ಸಹ ಒಂದಾಗಿದೆ. ಕಾಡು ಬೆಕ್ಕುಗಳು ವಿಶಿಷ್ಟ ನಡವಳಿಕೆಯ ಗುಣಲಕ್ಷಣ ಪ್ರದರ್ಶಿಸುತ್ತವೆ. ಇವು ಸಂಪೂರ್ಣ ನಿಶಾಚರಿಗಳಾಗಿದ್ದು, ರಾತ್ರಿ ಸಕ್ರಿಯವಾಗಿರುತ್ತವೆ. ಇವುಗಳು ಏಕಾಂತ ಬಯಸುತ್ತವೆ ಮತ್ತು ಸಾಮಾನ್ಯವಾಗಿ ಮಾನವರಿಗೆ ಗೊಚರಿಸುವುದು ತೀರಾ ವಿರಳ.
ಕಾಡು ಬೆಕ್ಕುಗಳಿಗೆ ಸೂಕ್ತ ವಾಸಸ್ಥಾನವಾಗಿರುವ ಹಂಚಕಲ್ಲುಗುಟ್ಟೆ ಪ್ರದೇಶದಲ್ಲಿ ರಾಜ್ಯ ಸರ್ಕಾರ ಗಣಿಗಾರಿಕೆಗೆ ಅನುಮತಿ ಕೊಟ್ಟಿರುವುದು ವಿಪರ್ಯಾಸ. ಈ ಭಾಗದಲ್ಲಿ ಕಾಡು ಬೆಕ್ಕುಗಳು ರಸ್ತೆ ಅಪಘಾತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿವೆ ಎಂದು ಜೀವವೈವಿಧ್ಯ ಸಂಶೋಧಕ ತಂಡದ ಮಂಜುನಾಥ ಎಸ್.ನಾಯಕ,ಎಸ್.ಸುನೀಲ್ಕುಮಾರ್,ಸಿ.ರಘುಕುಮಾರ್, ಸಿ.ಕುಲದೀಪ್ ತಿಳಿಸಿದ್ದಾರೆ.
ಮರಳುಕುಂಟೆ ಸುತ್ತಮುತ್ತ ವನ್ಯಜೀವಿಗಳ ವೈವಿಧ್ಯತೆ ಶ್ರೀಮಂತಿಕೆಯಿಂದ ಕೂಡಿದೆ. ನರಿ, ಜಿಂಕೆ ಸೇರಿದಂತೆ ಹಲವು ಜಾತಿಯ ಪಕ್ಷಿಗಳು ಇಲ್ಲಿ ವಾಸವಾಗಿವೆ.
ಈ ಕಾಡುಬೆಕ್ಕಿನ ಮೈಮೇಲಿನ ಪಟ್ಟೆಗಳು ವಿಭಿನ್ನವಾಗಿವೆ
ಕಾಲುಗಳ ಒಳಭಾಗಮುಖದ ಕೆಳಭಾಗದಲ್ಲಿ ಬಿಳಿ ಪಟ್ಟೆ ಕಾಣಬಹುದು.ಕಾಡಂಚಿನಲ್ಲಿರುವ ಬೀದಿನಾಯಿ ಸಾಕು ಬೆಕ್ಕುಗಳು ಇಲ್ಲಿನ ವನ್ಯಜೀವಿಗಳಿಗೆ ಮಾರಕವಾಗಿವೆ. ಇವುಗಳಿಂದ ಹೈಬ್ರಿಡ್ ತಳಿಗಳು ಜನನವಾಗುವುದಲ್ಲದೆ ವನ್ಯಜೀವಿಗಳಿಗೆ ಅನೇಕ ಮಾರಣಾಂತಿಕ ರೋಗ ಹರಡುವ ರೋಗವಾಹಕಗಳಾಗಿವೆ. ಇವುಗಳಿಂದ ತೋಳನರಿ ಮತ್ತು ಕಾಡು ಬೆಕ್ಕುಗಳ ಮೂಲ ತಳಿಗಳಿಗೆ ಧಕ್ಕೆಯಾಗುತ್ತಿದೆ.
-ಮಂಜುನಾಥ ಎಸ್.ನಾಯಕ, ಜೀವವೈವಿಧ್ಯ ಸಂಶೋಧಕ ಬೆಂಗಳೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.