ADVERTISEMENT

ಲಸಿಕೆ ವಿಚಾರ ನಿರ್ಲಕ್ಷ್ಯ ಬೇಡ

ಅರಳುಮಲ್ಲಿಗೆ ಬಾಗಿಲು ಶಾಲೆಯಲ್ಲಿ ವಿಶೇಷ ಶಾಲಾ ಅಭಿಯಾನ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 13:59 IST
Last Updated 11 ಡಿಸೆಂಬರ್ 2019, 13:59 IST
ವಿಶೇಷ ಶಾಲಾ ಲಸಿಕಾ ಅಭಿಯಾನದಲ್ಲಿ ಮಕ್ಕಳಿಗೆ ಲಸಿಕೆ ಹಾಕಲಾಯಿತು
ವಿಶೇಷ ಶಾಲಾ ಲಸಿಕಾ ಅಭಿಯಾನದಲ್ಲಿ ಮಕ್ಕಳಿಗೆ ಲಸಿಕೆ ಹಾಕಲಾಯಿತು   

ದೊಡ್ಡಬಳ್ಳಾಪುರ: ಸರ್ಕಾರದ ವತಿಯಿಂದ ನೀಡಲಾಗುವ ಲಸಿಕಾ ಕಾರ್ಯಕ್ರಮಗಳ ಕುರಿತಂತೆ ನಗರವಾಸಿಗಳಲ್ಲಿ ನಿರ್ಲಕ್ಷ್ಯ ಭಾವನೆ ಮೂಡುತ್ತಿರುವುದು ಆತಂಕಕಾರಿ ಬೆಳವಣಿಯಾಗಿದೆ. ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಪೋಷಕರ ಹಾಗೂ ಖಾಸಗಿ ಶಾಲೆಗಳ ಸಹಕಾರ ಅಗತ್ಯ ಎಂದು ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪರಮೇಶ್ವರ ಹೇಳಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಅರಳುಮಲ್ಲಿಗೆ ಬಾಗಿಲು ಸರ್ಕಾರಿ ಹಿರಿಯ ಪಾಠ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ವಿಶೇಷ ಶಾಲಾ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರೋಗ್ಯ ಇಲಾಖೆಯಿಂದ ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಕಾಳಜಿಯಿಂದ ವಿವಿಧ ರೀತಿಯ ಗುಣಮಟ್ಟದ ಹಾಗೂ ನುರಿತ ತಜ್ಞರು ಪರೀಕ್ಷೆಗೆ ಒಳಪಡಿಸಿ ಯಶಸ್ವಿಯಾದ ಲಸಿಕೆಗಳನ್ನು ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಲಸಿಕಾ ಕಾರ್ಯಕ್ರಮಗಳು ಶೇ 100ರಷ್ಟು ಯಶಸ್ವಿಯಾಗುತ್ತಿವೆ. ನಗರವಾಸಿಗಳು ಖಾಸಗಿ ಆಸ್ಪತ್ರೆಗಳ ವ್ಯಾಮೋಹಕ್ಕೆ ಒಳಗಾಗಿ ಸರ್ಕಾರಿ ಲಸಿಕಾ ಯೋಜನೆಗಳನ್ನು ತಾತ್ಸಾರ ಮನೋಭಾವನೆ ತೋರುತ್ತಿದ್ದಾರೆ. ಈ ಮನಸ್ಥಿತಿಯನ್ನು ಪೋಷಕರು ಬದಲಿಸಿಕೊಂಡು ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಕಾರ್ಯಕ್ಕೆ ಬೆಂಬಲ ನೀಡಬೇಕು ಎಂದರು.

ADVERTISEMENT

ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ (ಆರ್.ಸಿ.ಹೆಚ್.ಒ) ಡಾ.ಶರ್ಮಿಳಾ ಹೆಡೆ ಮಾತನಾಡಿ. 5 ರಿಂದ 6, 10 ಹಾಗೂ 16 ವರ್ಷದ ಮಕ್ಕಳಿಗೆ ಗಂಟಲು ಮಾರಿ, ಧನುರ್ ವಾಯು ಹಾಗೂ ನಾಯಿ ಕೆಮ್ಮು ರೋಗಗಳನ್ನು ತಡೆಗಟ್ಟಲು ಈ ವಿಶೇಷ ಶಾಲಾ ಲಸಿಕಾ ಅಭಿಯಾನವನ್ನು ಡಿ.11ರಿಂದ 31ರ ಒಳಗೆ ನಡೆಸಲಾಗುತ್ತಿದೆ ಎಂದರು.

ಜಿಲ್ಲೆಯ ಸರ್ಕಾರಿ, ಖಾಸಗಿ, ವಸತಿ, ಮದರಸಾಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಅಂಗನವಾಡಿ ಕೇಂದ್ರ ಹಾಗೂ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಸುಮಾರು ಜಿಲ್ಲೆಯ 36 ಸಾವಿರ ಮಕ್ಕಳಿಗೆ ಲಸಿಕೆಯನ್ನು ಹಾಕಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೆ.ಸರಸ್ವತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಆರ್.ರಾಜೇಶ್ವರಿ, ಆರೋಗ್ಯ ಇಲಾಖೆಯ ಮುಖ್ಯ ನಿರೀಕ್ಷಕ ಕರಿಯಪ್ಪ, ಮಹಿಳಾ ಹಿರಿಯ ಆರೋಗ್ಯ ಸಹಾಯಕರಾದ ವೀಣಾ, ವನಜಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.