ಆನೇಕಲ್:ತಾಲ್ಲೂಕಿನ ಕರ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ಗ್ರಾಮ ಸಭೆ ಮತ್ತು ವಿಕಲಚೇತನರ ಸಮನ್ವಯ ಗ್ರಾಮ ಸಭೆ ಆಯೋಜಿಸಲಾಗಿತ್ತು. ಮಕ್ಕಳ ಗ್ರಾಮ ಸಭೆಯಲ್ಲಿ ಪಂಚಾಯಿತಿ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳುಸಮಸ್ಯೆ ಮಂಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನ್ನೂರು ಪಿ. ರಾಜು ಮಾತನಾಡಿ, ಕುಂದುಕೊರತೆ ನಿವಾರಣೆಗೆ ಗ್ರಾಮ ಸಭೆಗಳು ಉತ್ತಮ ವೇದಿಕೆಯಾವೆ. ಸಭೆಯಲ್ಲಿ ಗ್ರಾಮಸ್ಥರು ಪಾಲ್ಗೊಳ್ಳುವುದರಿಂದ ಸರ್ಕಾರದ ಸೌಲಭ್ಯಗಳ ಬಗ್ಗೆ ತಿಳಿಯಬಹುದಾಗಿದೆ ಎಂದರು.
ಸಾರ್ವಜನಿಕರು ತಮ್ಮ ಕುಂದುಕೊರತೆಯನ್ನು ಗ್ರಾಮ ಸಭೆಯಲ್ಲಿ ತಿಳಿಸುವುದರಿಂದ ಸಮಸ್ಯೆಗಳ ಪರಿಹಾರಕ್ಕೆ ಸಹಕಾರಿಯಾಗಲಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುನಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ ಎಂದು ತಿಳಿಸಿದರು.
ಕರ್ಪೂರು ಸರ್ಕಾರಿ ಶಾಲೆಯಲ್ಲಿ ಭಾನುವಾರ ರಜೆ ದಿನದಂದು ದುಷ್ಕರ್ಮಿಗಳು ಮದ್ಯಪಾನ ಮಾಡಿ ಶಾಲೆಯ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ. ಶಾಲಾ ಗೇಟ್ ಮತ್ತು ಕೊಠಡಿಗಳ ಬೀಗವನ್ನು ಹೊಡೆದು ಹಾಕುತ್ತಿದ್ದಾರೆ. ರಜೆಯ ನಂತರದ ದಿನ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಕೆಲಸ ಮಾಡುವುದೇ ದೊಡ್ಡ ಕೆಲಸವಾಗಿದೆ ಎಂದು ವಿದ್ಯಾರ್ಥಿಗಳು ಸಮಸ್ಯೆ ತೋಡಿಕೊಂಡರು.
ಅರವಂಟಿಕೆಪುರ, ರಾಚಮಾನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಳೆ ಬಂದರೆ ನೀರು ಸೋರುತ್ತಿದೆ. ಹಾಗಾಗಿ, ಶಾಲಾ ಕೊಠಡಿಗಳನ್ನು ದುರಸ್ತಿಪಡಿಸಬೇಕು. ಕರ್ಪೂರು, ರಾಚಮಾನಹಳ್ಳಿ ಶಾಲೆಗಳಲ್ಲಿ 6-10ನೇ ತರಗತಿ ತೆರೆಯಬೇಕು. ಇದರಿಂದ ಇಲ್ಲಿನ ವಿದ್ಯಾರ್ಥಿಗಳು ಆನೇಕಲ್ಗೆ ಹೋಗುವುದು ತಪ್ಪುತ್ತದೆ ಎಂದು ಮನವಿ ಸಲ್ಲಿಸಿದರು.
ವಿಕಲಚೇತನರ ಸಮನ್ವಯ ಗ್ರಾಮ ಸಭೆಯಲ್ಲಿ ಅಂಗವಿಕಲರಿಗೆ ವಿಶಿಷ್ಟ ಗುರುತಿನ ಚೀಟಿ, ಸಾಧನ ಖರೀದಿಸಲು ಪಂಚಾಯಿತಿಯಿಂದ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು. ಕೃಷಿ ಸಹಾಯಕ ನಿರ್ದೇಶಕ ಧನಂಜಯ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಾಧ ಚಿನ್ನಪ್ಪ, ಸದಸ್ಯರಾದ ಮಮತಾ, ರಾಮು, ವೆಂಕಟೇಶ್, ಬಸವರಾಜ್, ಮುನಿಯಮ್ಮ, ತಿಮ್ಮರಾಜು, ಜ್ಯೋತಿ ಲಕ್ಷ್ಮೀ, ಎಚ್.ಎಂ. ತಿಮ್ಮರಾಜು, ಮುನಿರಾಜು, ಭಾಗ್ಯಮ್ಮ, ಕೃಷ್ಣಪ್ಪ, ವೀಣಾ ಆದಿನಾರಾಯಣ, ನಂಜಮ್ಮ, ಬಸವರಾಜ್ ಬೋರೆಬಾಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.