ದೇವನಹಳ್ಳಿ: ಪ್ರತಿ ಮಗುವಿನಲ್ಲೂ ಪ್ರತಿಭೆ ಇದೆ. ಅದನ್ನು ಹೊರತರುವ ಜವಾಬ್ದಾರಿ ಶಿಕ್ಷಕರು ಮಾಡಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.
ಇಲ್ಲಿನ ಶಾಂತಿನಿಕೇತನ ಪಬ್ಲಿಕ್ ಶಾಲಾ ಆವರಣದಲ್ಲಿ ನಂದಿ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ನಡೆದ 31ನೇ ವರ್ಷದ ವಾರ್ಷಿಕ ನಂದಿ ಸಡಗರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಗುಣಮಟ್ಟದ ಫಲಿತಾಂಶದ ಜತೆಗೆ ಭವಿಷ್ಯದ ಉನ್ನತ ವ್ಯಾಸಂಗದ ಬಗ್ಗೆಯೂ ಚಿಂತನೆ ನಡೆಸಬೇಕು. ಪೋಷಕರು ತಮ್ಮ ಮಕ್ಕಳು ಯಾವುದು ಕೆಟ್ಟದ್ದು ಯಾವುದು ಒಳ್ಳೆಯದು ಎಂಬುದನ್ನು ಪ್ರಾಥಮಿಕ ಹಂತದ ಶಿಕ್ಷಣದಿಂದಲೇ ಗಟ್ಟಿ ತಳಪಾಯ ಹಾಕಬೇಕೇ ಹೊರತು ಅಂಕ ನಿಗದಿ ಮಾಡಿ ಒತ್ತಡ ತಂದರೆ ಪ್ರಯೋಜನವಿಲ್ಲ ಎಂದು ಹೇಳಿದರು.
ಎರಡು ದಶಕಗಳ ಹಿಂದಿನ ಮಕ್ಕಳಿಗೂ ಪ್ರಸ್ತುತ ಮಕ್ಕಳಿಗೂ ವಿವಿಧ ವ್ಯತ್ಯಾಸಗಳಿವೆ. ಹಠಮಾರಿತನ, ಚುರುಕು ಕಾರ್ಯಕ್ಷಮತೆ ಮಕ್ಕಳಲ್ಲಿ ಹೆಚ್ಚುತ್ತಿದ್ದರೂ ಪ್ರೀತಿ ವಿಶ್ವಾಸದಿಂದ ಮಕ್ಕಳ ಮನಗೆಲ್ಲುವ ಪ್ರಯತ್ನ ಪೋಷಕರು ಹಾಗೂ ಶಿಕ್ಷಕರು ಮಾಡಬೇಕು ಎಂದು ಹೇಳಿದರು.
ಮಕ್ಕಳ ಅಂತರಿಕ ಭಾವನೆ ಅರ್ಥ ಮಾಡಿಕೊಳ್ಳಬೇಕು. ಶಿಕ್ಷಕರ ಬೋಧನೆ ಮಕ್ಕಳ ಗ್ರಹಿಕೆ ಶಕ್ತಿಯಾಗಿ ಸೆಳೆಯಬೇಕು ಎಂದು ಹೇಳಿದರು.
ಕೆನರಾ ಬ್ಯಾಂಕ್ ಬೆಂಗಳೂರು ಕೇಂದ್ರ ಕಚೇರಿ ಮುಖ್ಯವ್ಯವಸ್ಥಾಪಕ ಎನ್.ಲಕ್ಷ್ಮಿನಾರಾಯಣ ಮಾತನಾಡಿ, ಯಾವುದೇ ದೇಶ ಅಭಿವೃದ್ಧಿಯತ್ತ ಸಾಗುತ್ತಿದ್ದರೆ ಅದು ಶಿಕ್ಷಣದಿಂದ ಮಾತ್ರ ಎಂಬುದನ್ನು ಆರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ ಮಾತನಾಡಿ, 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಈ ಶಾಲೆ ನಿರಂತರ ಶೇ100ರಷ್ಟು ಫಲಿತಾಂಶ ಪಡೆಯುತ್ತಿರುವುದು ಉತ್ತಮ ಬೆಳೆವಣಿಗೆ. ವಾರ್ಷಿಕ 10ನೇ ತರಗತಿ ಫಲಿತಾಂಶ ಶೇಕಡವಾರು ಹೆಚ್ಚಾಗಲು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ನಂದಿರೂರಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ವೈ.ಕೆ.ಚಂದ್ರಶೇಖರ್, ಕಾರ್ಯಾಧ್ಯಕ್ಷ ಚೇತನ್ ಯಾದವ್ ಮಾತನಾಡಿದರು, ಶಾಲಾ ಆಡಳಿತ ಮಂಡಳಿ ನಿರ್ದೇಶಕರಾದ ಗಗನ್ ಯಾದವ್, ರಾಧಮ್ಮ ನಾರಾಯಣಸ್ವಾಮಿ, ಖಜಾಂಚಿ ಲಲಿತಮ್ಮ, ಲಯನ್ ಸಂಸ್ಥೆ ಅಧ್ಯಕ್ಷ ಶ್ರೀರಾಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.