ಆನೇಕಲ್ : ತಾಲ್ಲೂಕಿನ ಬನ್ನೇರುಘಟ್ಟ-ಕಗ್ಗಲಿಪುರ ರಸ್ತೆಯ ತರಳು ಗ್ರಾಮದಲ್ಲಿ ಸೋಮವಾರ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ತರಬೇತಿ ಕೇಂದ್ರದ ಹೆಡ್ ಕಾನ್ಸ್ಟೆಬಲ್ ಆನೆ ತುಳಿತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶ ಮೂಲದ ಹೃದಯ ನಾರಾಯಣ್ ಸಿಂಗ್(34) ಮೃತರು.
ಹೃದಯ ನಾರಾಯಣ್ ಸಿಂಗ್ ಇಬ್ಬರು ಸ್ನೇಹಿತರೊಂದಿಗೆ ಸೋಮವಾರ ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಒಂಟಿ ಆನೆಯೊಂದು ರಸ್ತೆಯಲ್ಲಿ ಎದುರು ಬಂದಿದ್ದು ನೋಡುತ್ತಿದ್ದಂತೆಯೇ ಮೂರು ಮಂದಿ ಓಡಲು ಯತ್ನಿಸಿದರು. ಆದರೆ ಹೃದಯ ನಾರಾಯಣ್ ಸಿಂಗ್ ಅವರು ಆನೆ ದಾಳಿಗೆ ಸಿಲುಕಿದ್ದಾರೆ. ಆನೆಯು ಮುಖ, ತಲೆಯ ಭಾಗವನ್ನು ತುಳಿದು ಹಾಕಿದೆ. ಇದರಿಂದಾಗಿ ಹೃದಯ ನಾರಾಯಣ ಸಿಂಗ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೃದಯ ನಾರಾಯಣ ಸಿಂಗ್ 2009ರಲ್ಲಿ ಸಿಆರ್ಪಿಎಫ್ ಸೇರಿದ್ದು ತರಳು ಬಳಿಯಿರುವ ತರಬೇತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕೇಂದ್ರವು ಕಾಡಿನಂಚಿನಲ್ಲಿದ್ದು ಆನೆಗಳ ಓಡಾಟ ಇಲ್ಲಿ ಸಾಮಾನ್ಯವಾಗಿದೆ. ಈ ಹಿಂದೆ 2017ರಲ್ಲಿಯ ದಕ್ಷಿಣ ಮೂರ್ತಿ ಎಂಬ ಸಿಆರ್ಪಿಎಫ್ ಸಿಬ್ಬಂದಿ ಆನೆ ದಾಳಿಯಿಂದ ಮೃತಪಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.