
ಆನೇಕಲ್: ತಾಲ್ಲೂಕಿನ ಮೆಣಸಿಗನಹಳ್ಳಿ ಗ್ರಾಮದ ಬಳಿ 10-12 ಕಾಡಾನೆಗಳು ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದು, ಹೊಸ ವರ್ಷದ ಮೊದಲ ದಿನವೇ ರೈತರು ಆತಂಕಗೊಂಡಿದ್ದಾರೆ. ಕಾಡಾನೆಗಳನ್ನು ಓಡಿಸುವಾಗ ಆಯ ತಪ್ಪಿ ಬಿದ್ದು ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.
ವೆಂಕಟೇಶ್ ಗಾಯಗೊಂಡವರು.
ಮೆಣಸಿಗನಹಳ್ಳಿ ಕೆರೆ ಮತ್ತು ನೀಲಗಿರಿ ತೋಪುಗಳಲ್ಲಿ 10-12 ಕಾಡಾನೆಗಳು ಬೀಡು ಬಿಟ್ಟಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆಗಳು ಕಾಡಿನತ್ತ ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಕಾರ್ಯಾಚರಣೆಯ ವೇಳೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು. ನೀಲಗಿರಿ ತೋಪಿನಲ್ಲಿ ಸಾಗುತ್ತಿದ್ದ ಕಾಡಾನೆಯೊಂದು ಏಕಾಏಕಿ ಹಿಂದಕ್ಕೆ ಬಂದಿದ್ದರಿಂದ ಸ್ಥಳೀಯರಾದ ವೆಂಕಟೇಶ್ ಅವರು ಓಡುವಾಗ ನೀಲಗಿರಿ ಮರದ ಬುಡಕ್ಕೆ ತಗುಲಿ ಗಾಯಗಳಾಗಿವೆ. ಕಾರ್ಯಾಚರಣೆಯಲ್ಲಿನ ಅರಣ್ಯ ಇಲಾಖೆಯ ಸಿಬ್ಬಂದಿಗೂ ತೊಂದರೆಯಾಗಿದೆ.
ಅರಣ್ಯ ಇಲಾಖೆಯ ಸಿಬ್ಬಂದಿ ಪಟಾಕಿ ಹೊಡೆದು ಕಾಡಾನೆಗಳನ್ನು ಕಾಡಿನತ್ತು ಓಡಿಸುತ್ತಿದ್ದಾರೆ. ಆದರೆ ಕಾಡಾನೆಗಳು ಅತ್ತಿಂದಿತ್ತ ಓಡಾಡುತ್ತಿರುವುದರಿಂದ ಪತ್ತೆ ಹಚ್ಚುವುದು ಕಷ್ಟವಾಗಿದೆ. ಗುರುವಾರ ರಾತ್ರಿ 8ರವರೆಗೂ ಕಾರ್ಯಾಚರಣೆ ನಡೆಸಿ ಕಾಡಾನೆಗಳು ಗ್ರಾಮಗಳತ್ತ ಬಾರದಂತೆ ಕ್ರಮ ವಹಿಸಿದ್ದಾರೆ.
ಡಿಸಿಎಫ್ ರವೀಂದ್ರಕುಮಾರ್, ಎಸಿಎಫ್ ಗಣೇಶ್ ಅವರ ಮಾರ್ಗದರ್ಶನದಲ್ಲಿ ಡಿಆರ್ಎಫ್ಓ ಶಿವರಾಜ್, ಪಾರೆಸ್ಟ್ ಗಾರ್ಡ್ಗಳಾದ ಲಿಂಗಯ್ಯ, ಬಸವಲಿಂಗಪ್ಪ, ಚಿನ್ನಸ್ವಾಮಿ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಡ್ರೋನ್ನ ಮೂಲಕ ಕಾಡಾನೆಯನ್ನು ಪತ್ತೆ ಕಾರ್ಯ ಮಾಡಲಾಗುತ್ತಿದೆ.
ಕಳೆದ ಒಂದು ತಿಂಗಳಿನಿಂದ ಕಾಡಾನೆಗಳು ಕಾಡಂಚಿನ ಗ್ರಾಮಗಳಲ್ಲಿ ಸಂಚರಿಸುತ್ತಿವೆ. ಶುಕ್ರವಾರ ಬೆಳಗ್ಗೆ 6 ಗಂಟೆಯಿಂದಲೇ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಲಿದ್ದು, ಶುಕ್ರವಾರ ಕಾಡಾನೆಗಳನ್ನು ಕಾಡಿಗಟ್ಟಲು ಎಲ್ಲಾ ಕ್ರಮ ವಹಿಸಲಾಗುವುದು ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.