ADVERTISEMENT

ಪ್ರತಿಯೊಬ್ಬರ ಮೇಲೆ ಸ್ವಚ್ಛ ಹಳ್ಳಿಯ ಹೊಣೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 16:01 IST
Last Updated 23 ಜೂನ್ 2019, 16:01 IST
ವಿಜಯಪುರ ಬಳಿಯ ಬೂದಿಗೆರೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಕಸ ಸಂಗ್ರಹಣೆಗಾಗಿ ಟಬ್‌ಗಳನ್ನು ವಿತರಿಸಲಾಯಿತು
ವಿಜಯಪುರ ಬಳಿಯ ಬೂದಿಗೆರೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಕಸ ಸಂಗ್ರಹಣೆಗಾಗಿ ಟಬ್‌ಗಳನ್ನು ವಿತರಿಸಲಾಯಿತು   

ವಿಜಯಪುರ: ಮಹಾತ್ಮ ಗಾಂಧಿ ಅವರ ಕನಸಿನ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಸ್ವಚ್ಛವಾದ ಹಳ್ಳಿಗಳನ್ನು ಸ್ಥಾಪನೆ ಮಾಡಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಶ್ರೀನಿವಾಸಗೌಡ ಹೇಳಿದರು.

ಸಮೀಪದ ಬೂದಿಗೆರೆ ಗ್ರಾಮದಲ್ಲಿ ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ನೀಡಲು ಜನರಿಗೆ ಟಬ್‌ಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.

‘ನಾವು ವಾಸ ಮಾಡುವಂತಹ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಎಲ್ಲೆಂದರಲ್ಲಿ ಹಾಕುವುದರಿಂದ ಅನೇಕ ರೋಗರುಜಿನಗಳು ಹರಡಲು ಅವಕಾಶವಾಗುತ್ತದೆ. ಆದ್ದರಿಂದ ಪಂಚಾಯಿತಿಯಿಂದ ಕಸ ವಿಂಗಡಣೆ ಮಾಡಲು ಟಬ್‌ಗಳನ್ನು ವಿತರಿಸಲಾಗುತ್ತಿದೆ. ಇದರಿಂದ ಪರಿಸರದ ಸ್ವಚ್ಛತೆಯ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಜನರು ನಿರ್ಲಕ್ಷ್ಯ ತೋರದೆ ಕಸವನ್ನು ವಿಂಗಡಣೆ ಮಾಡಿ ಕೊಡಬೇಕು’ ಎಂದರು.

ADVERTISEMENT

ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಾಥ್‌ ಗೌಡ ಮಾತನಾಡಿ, ಜನರು ಸ್ವಚ್ಛತೆಯ ಜೊತೆಗೆ ಗ್ರಾಮ ಪಂಚಾಯಿತಿಗೆ ಕಟ್ಟಬೇಕಾಗಿರುವ ತೆರಿಗೆಯನ್ನೂ ಕಟ್ಟುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಬೇಕು. ಕುಡಿಯುವ ನೀರು, ಚರಂಡಿ, ಬೀದಿದೀಪಗಳ ನಿರ್ವಹಣೆ ಸೇರಿದಂತೆ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿ ಜನರ ಸಹಕಾರದ ಮೇಲೆ ಇದೆ ಎಂದರು. ಸದಸ್ಯ ನಟರಾಜ್, ಕಾರ್ಯದರ್ಶಿ ಲಕ್ಷ್ಮಿಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.