ವಿಜಯಪುರ(ದೇವನಹಳ್ಳಿ): ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ರೈತರು ದೇವನಹಳ್ಳಿ ತಾಲ್ಲೂಕಿನಾದ್ಯಂತ ನಡೆಸುತ್ತಿರುವ ಪಾದಯಾತ್ರೆ ಶನಿವಾರ ಚಿಕ್ಕನಹಳ್ಳಿ ಗ್ರಾಮಕ್ಕೆ ಪ್ರವೇಶ ಮಾಡಿತು.
ಆರನೇ ದಿನದ ಪಾದಯಾತ್ರೆಗೆ ಸ್ಥಳೀಯವಾಗಿ ರೈತರು ಬೆಂಬಲ ವ್ಯಕ್ತಪಡಿಸಿ, ಧೈರ್ಯ ತುಂಬಿಸಿದರು.
‘ನಮ್ಮ ಭೂಮಿಯನ್ನು ಉಳಿಸಿಕೊಡಿ, ನಿಮಗೆ ನಾವು ಅನ್ನ ಕೊಡುತ್ತೇವೆ. ಅನ್ನ ಕೊಟ್ಟ ನಮ್ಮ ಬಾಯಿಗೆ ಮಣ್ಣು ಹಾಕಬೇಡಿ. ನಮ್ಮ ಮಕ್ಕಳ ಪ್ರಾಣ, ಮಾನ ಕಾಪಾಡಿ, ನಾವು ನಿಮ್ಮ ಜೀವ ಉಳಿಸುತ್ತೇವೆ. ಫಲವತ್ತಾದ ಭೂಮಿ ಕಿತ್ತುಕೊಂಡು, ಬೀದಿಗೆ ತಳ್ಳಬೇಡಿ’ ಎಂದು ರೈತ ಮಹಿಳೆಯರು ಹಾಗೂ ರೈತರು ಸೆರಗೊಡ್ಡಿ ಸರ್ಕಾರವನ್ನು ಬೇಡಿಕೊಂಡರು.
ರೈತರು ಸುಮಾರು ಒಂದು ವರ್ಷದಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ಹೋರಾಟಕ್ಕೆ ಸರ್ಕಾರ ಕವಡೆಕಾಸಿನ ಕಿಮ್ಮತ್ತು ನೀಡಿಲ್ಲ, ಕೃಷಿ ಭೂಮಿಯನ್ನು ಕೈಗಾರಿಕೆ ಕ್ಷೇತ್ರವನ್ನಾಗಿ ಮಾಡಲು ಹೊರಟಿರುವುದು ಸರಿಯಲ್ಲ. ಇದರಿಂದ ಭವಿಷ್ಯದಲ್ಲಿ ಅನ್ನಕ್ಕೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಲಿದೆ. ಈ ದೇಶದಲ್ಲಿ ಕಾರ್ಪೋರೇಟ್ ವಲಯಕ್ಕೆ ಇರುವ ಮಾನ್ಯತೆ ಕೃಷಿ ಕ್ಷೇತ್ರಕ್ಕೆ ಸಿಗುತ್ತಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡರಾದ ನಂಜಪ್ಪ, ಎಸ್.ಸಿದ್ಧಾರ್ಥ, ಕಾರಹಳ್ಳಿ ಶ್ರೀನಿವಾಸ್, ಮುಕುಂದ್, ವೆಂಕಟರಮಣಪ್ಪ, ಪಿಳ್ಳಪ್ಪ ಗಂಗಯ್ಯ, ನಂಜೇಗೌಡ, ನಾರಾಯಣಮ್ಮ, ಸಾವಿತ್ರಿ ಭಾಪುಲೆ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕಿ ಎಸ್.ರವಿಕಲಾ, ವೆಂಕಟೇಶ್, ರವಿಕುಮಾರ್, ಮೋಹನ್ ಕುಮಾರ್, ಆನಂದ್ ಕುಮಾರ್, ತಿಮ್ಮರಾಯಪ್ಪ ಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.