ADVERTISEMENT

ಬರಪರಿಹಾರಕ್ಕಾಗಿ ಕಾದು ಕುಳಿತ ರೈತರು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 13:20 IST
Last Updated 25 ಏಪ್ರಿಲ್ 2019, 13:20 IST
ಆಗಸ್ಟ್ ತಿಂಗಳಲ್ಲಿ ಮಳೆಯಿಲ್ಲದೆ ಒಣಗಿ ಹೋಗುತ್ತಿದ್ದ ರಾಗಿ ಬೆಳೆ (ಸಂಗ್ರಹ ಚಿತ್ರ) 
ಆಗಸ್ಟ್ ತಿಂಗಳಲ್ಲಿ ಮಳೆಯಿಲ್ಲದೆ ಒಣಗಿ ಹೋಗುತ್ತಿದ್ದ ರಾಗಿ ಬೆಳೆ (ಸಂಗ್ರಹ ಚಿತ್ರ)    

ವಿಜಯಪುರ: ಬರ ಪರಿಹಾರದ ನಿರೀಕ್ಷೆಯಲ್ಲಿದ್ದ ರೈತರು ಹಣ ಬಿಡುಗಡೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಾಲ್ಲೂಕಿನಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಮಂದಿ ರೈತರು ಬೆಳೆದಿದ್ದ ಮಳೆಯಾಶ್ರಿತ ಬೆಳೆಗಳಾದ ರಾಗಿ, ಮುಸುಕಿನ ಜೋಳ, ಅವರೆ, ನೆಲಗಡಲೆ, ತೊಗರಿ ಹುರುಳಿ ಸೇರಿದಂತೆ ಬಹುತೇಕ ಬೆಳೆಗಳು ಕೈಕೊಟ್ಟಿವೆ. ಇದರಿಂದಾಗಿ ಸಂಪೂರ್ಣವಾಗಿ ನಷ್ಟ ಅನುಭವಿಸಿದ್ದಾರೆ ರೈತ ನಂಜುಂಡಪ್ಪ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕನ್ನು ಬರಗಾಲಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ತಂಡಗಳು ಜಂಟಿಯಾಗಿ ಸರ್ವೆ ಮಾಡಿವೆ. ಸುಮಾರು 6127 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ ಕೂಡ ಇದುವರೆಗೂ ಪರಿಹಾರ ವಿತರಣೆಯಾಗಿಲ್ಲ.

ಒಂದು ಗುಂಟೆ ಜಮೀನಿನಲ್ಲಿ ನಷ್ಟವಾಗಿರುವ ಬೆಳೆಗೆ ₹68 ರೂಪಾಯಿಯಂತೆ ಒಂದು ಎಕರೆಗೆ ₹2720 ರೂಪಾಯಿ ಪರಿಹಾರವನ್ನು ವಿತರಣೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಆದರೆ,ಒಂದು ಎಕರೆಗೆ ಖರ್ಚು ಮಾಡಿರುವ ಹಣದಲ್ಲಿ ಕೇವಲ ಶೇ10 ರಷ್ಟು ಪರಿಹಾರವನ್ನು ಸರ್ಕಾರ ಕೊಡುತ್ತಿಲ್ಲ ಎಂದು ಆರೋಪಿಸಿದರು.

ADVERTISEMENT

ರೈತ ರಾಮಣ್ಣ ಮಾತನಾಡಿ, ಸರ್ಕಾರ ಬಿಡುಗಡೆ ಮಾಡುವ ಬಿಡಿಗಾಸು ಮುಂಗಾರು ಆರಂಭಕ್ಕೂ ಮುಂಚೆ ರೈತರಿಗೆ ವಿತರಣೆ ಮಾಡಿದರೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯ ಹೊಸಕೋಟೆ, ನೆಲಮಂಗಲದಲ್ಲಿ ಪರಿಹಾರ ವಿತರಣೆ ಕಾರ್ಯ ನಡೆದಿದೆ. ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕು ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.