ಆನೇಕಲ್: ಕನ್ನಡ ಮಾತನಾಡುವ ವಿಚಾರಕ್ಕೆ ಚಂದಾಪುರ ಸೂರ್ಯಸಿಟಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಶಾಖೆಯ ಮಹಿಳಾ ಮ್ಯಾನೇಜರ್ ಮತ್ತು ಕೆಆರ್ಎಸ್ ಪಕ್ಷದ ಮಹೇಶ್ ನಡುವೆ ಮಂಗಳವಾರ ಮಾತಿನ ಚಕಮಕಿ ನಡೆದಿದೆ.
ಸೂರ್ಯಸಿಟಿ ಎಸ್ಬಿಐ ಬ್ಯಾಂಕ್ಗೆ ಹೋಗಿದ್ದ ಕೆಆರ್ಎಸ್ ಪಕ್ಷದ ಮಹೇಶ್ ಬೆಳಗ್ಗೆ 10.30 ಆದರೂ ಸಿಬ್ಬಂದಿ ಏಕೆ ಕೆಲಸ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ವಿಷಯಕ್ಕೆ ಆರಂಭವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ.
ಮಾತುಕತೆ ವೇಳೆ ಬ್ಯಾಂಕ್ ಮ್ಯಾನೇಜರ್ ಹಿಂದಿಯಲ್ಲಿ ಮಾತನಾಡಲು ಆರಂಭಿಸಿದ್ದಾರೆ. ಆಗ ಮಹೇಶ್, ಕನ್ನಡದಲ್ಲಿ ಮಾತನಾಡುವಂತೆ ಒತ್ತಾಯಿಸಿದ್ದಾರೆ. ‘ಕಡ್ಡಾಯವಾಗಿ ಕನ್ನಡದಲ್ಲಿ ಮಾತನಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ’ ಎಂದ ಮ್ಯಾನೇಜರ್, ‘ಕನ್ನಡ ಮಾತನಾಡುವುದಿಲ್ಲ’ ಎಂದು ವಾದ ಮಾಡಿದ್ದಾರೆ.
‘ಇದು ಕರ್ನಾಟಕ. ಹಾಗಾಗಿ ಕನ್ನಡ ಮಾತನಾಡಿ’ ಎಂದು ಮಹೇಶ್ ಹೇಳಿದ್ದಾರೆ. ಆಗ ಮ್ಯಾನೇಜರ್, ‘ಇದು ಭಾರತ, ಹಾಗಾಗಿ ಕನ್ನಡ ಮಾತನಾಡುವುದಿಲ್ಲ’ ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಹಿಳಾ ಸಿಬ್ಬಂದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಆಯಾ ರಾಜ್ಯಗಳಲ್ಲಿ ಸ್ಥಳೀಯ ಭಾಷೆ ಮಾತನಾಡುವಂತೆ ಆರ್ಬಿಐ ತಿಳಿಸಿದೆ. ಹಾಗಾಗಿ ಬ್ಯಾಂಕ್ ಸಿಬ್ಬಂದಿ ಕಡ್ಡಾಯವಾಗಿ ಕನ್ನಡ ಮಾತನಾಡಬೇಕು. ಆದರೆ ಚಂದಾಪುರ ಎಸ್ಬಿಐ ಶಾಖೆಯ ಮ್ಯಾನೇಜರ್ ಕನ್ನಡ ಮಾತನಾಡುವುದಿಲ್ಲ ಎಂದು ಹೇಳಿರುವುದು ಖಂಡನೀಯ ಮಹೇಶ್ ಆಕ್ಷೇಪ ಎತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.