ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೆನೈಗೆ ತೆರಳಲು ಬಂದಿದ್ದ ಪ್ರಯಾಣಿಕ ವಿಮಾನ ನಿಲ್ದಾಣದ ಒಳಗಿನ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟ ಕಾರಣ ಆತನ ವಿರುದ್ಧ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಪ್ರಿಲ್ 7ರಂದು ನಿಲ್ದಾಣಕ್ಕೆ ಬಂದಿದ್ದ ವಿಕಾಸ್ ಗೌಡ (23) ಎಂಬುವವರು ಚೆನ್ನೈ ತೆರಳಲು ಟಿಕೆಟ್ ಕಾಯ್ದಿರಿಸಿದ್ದರು. ಭದ್ರತಾ ಪ್ರಕ್ರಿಯೆ ಮುಗಿಸಿಕೊಂಡು ಬೋರ್ಡಿಂಗ್ ಪಾಸ್ ಪಡೆದುಕೊಂಡಿದ್ದರು. ಆದರೆ ಸಾಮಾಜಿಕ ಮಾಧ್ಯಮದ ಗೀಳಿನಿಂದಾಗಿ ವಿಮಾನ ಹತ್ತದೇ ಟರ್ಮಿನಲ್ -2ರಲ್ಲಿಯೇ ಉಳಿದು ವಿಡಿಯೊ ಚಿತ್ರೀಕರಣ ಮಾಡಿದ್ದರು.
ಹೆಚ್ಚು ಲೈಕ್ಗಳಿಸುವ ಉದ್ದೇಶದಿಂದ ವಿಡಿಯೊವನ್ನು ಯೂ ಟೂಬ್ನಲ್ಲಿ ಹರಿಬಿಟ್ಟುದ್ದರು. ಒಂದು ದಿನವಿಡೀ ನಾನು ಕೆಐಎನ ಹೊಸ ಟರ್ಮಿನಲ್ನಲ್ಲಿ ಕಳೆದಿದ್ದೇನೆ ಎಂದು ಪೋಸ್ಟ್ ಮಾಡಿದ್ದರು. ವಿಡಿಯೊವನ್ನು ಏ.12 ರಂದು ಯೂ ಟೂಬ್ನಲ್ಲಿ ಹಂಚಿಕೊಂಡಿದ್ದರು.
‘ವಿಮಾನ ನಿಲ್ದಾಣದ ನಿಷೇಧಿತ ಪ್ರದೇಶದಲ್ಲಿ ಅತಿಕ್ರಮ ಪ್ರವೇಶ ಮಾಡಿ ಕಾನೂನು ಬಾಹಿರವಾಗಿ ಚಿತ್ರೀಕರಿಸಿದ ವಿಡಿಯೊ ಸಾರ್ವಜನಿಕಗೊಳ್ಳಿಸಿದ್ದಾರೆ. ಇದರಿಂದ ನಿಲ್ದಾಣದ ಭದ್ರತೆಗೆ ಧಕ್ಕೆಯಾಗಿದೆ. ಸಾರ್ವಜನಿಕರಲ್ಲಿ ನಿಲ್ದಾಣದ ರಹಸ್ಯ ಹಾಗೂ ಭದ್ರತೆಯ ಕುರಿತು ಸಂಶಯ ಮೂಡವಂತಹ ವಿಷಯ ಪ್ರಸ್ತಾಪ ಮಾಡಿದ್ದಾರೆ’ ಎಂದು ಆರೋಪಿಸಿ ಸಿಐಎಸ್ಎಫ್ನ ಅಧಿಕಾರಿ ಮುರಳಿ ಲಾಲ್ ಮೀನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.