ದೊಡ್ಡಬಳ್ಳಾಪುರ: ವಿವಿಧ ಖಾಸಗಿ ಕಂಪನಿಗಳು ಹಾಗೂ ಹಲವಾರು ಜನ ವೈಯಕ್ತಿವಾಗಿ ನೀಡಿದ್ದ ಆಹಾರ ಧಾನ್ಯ, ರಾಜ್ಯ ರೈತ ಸಂಘದ ಮುಖಂಡ ವಸಂತ್ಕುಮಾರ್ ಅವರು ನೀಡಿದ್ದ ಬಾಳೆ ಹಣ್ಣುಗಳನ್ನು ನಗರದ ಮುತ್ಸಂದ್ರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರು, ಬಡವರಿಗೆ ಡಿವೈಎಸ್ಪಿ ಟಿ.ರಂಗಪ್ಪ ಅವರ ನೇತೃತ್ವದಲ್ಲಿ ಹಂಚಿಕೆ ಮಾಡಲಾಯಿತು.
ಈ ಬಗ್ಗೆ ಮಾಹಿತಿ ನೀಡಿದ ಡಿವೈಎಸ್ಪಿ ಟಿ.ರಂಗಪ್ಪ, ‘ನಗರದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸಹ ಆಹಾರ ಪೊಟ್ಟಣಗಳನ್ನು ಒಂದೆಡೆ ಸಿದ್ದಪಡಿಸಿ ಅನಾಥರು, ಬಡವರು ವಾಸವಾಗಿರುವ ಪ್ರದೇಶಗಳಲ್ಲಿ ದಿನಕ್ಕೆ ಎರಡು ಬಾರಿ ಹಂಚಿಕೆ ಮಾಡುತ್ತಿದ್ದಾರೆ. ಇದಲ್ಲದೆ ಕೆಲ ವ್ಯಕ್ತಿಗಳು, ಕೈಗಾರಿಕಾ ಪ್ರದೇಶದಲ್ಲಿನ ಖಾಸಗಿ ಕಂಪನಿಗಳವರು ಆಹಾರ ಧಾನ್ಯಗಳನ್ನು ಉಚಿತವಾಗಿ ಕಳುಹಿಸಿಕೊಟ್ಟಿದ್ದಾರೆ. ಇವುಗಳನ್ನು ಸಮರ್ಪಕವಾಗಿ ಹಾಗೂ ಅರ್ಹರಿಗೆ ಹಂಚಿಕೆ ಮಾಡಲಾಗುತ್ತಿದೆ’ ಎಂದರು.
‘ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಜಾರಿಗೆ ತರಲಾಗಿರುವ ಲಾಕ್ಡೌನ್ ನಿಂದಾಗಿ ಯಾರೂ ಸಹ ಊಟ ಇಲ್ಲದೆ ಮಲಗುವ ಸ್ಥಿತಿ ಉಂಟಾಗಬಾರದು. ಬಡವರು ಆಹಾರ ಧಾನ್ಯ ಅಥವಾ ಊಟದ ಅವಶ್ಯಕತೆ ಇದ್ದರೆ ನೇರವಾಗಿ ಪೊಲೀಸ್ ಠಾಣೆ, ತಾಲ್ಲೂಕು ಕಚೇರಿಯಲ್ಲಿನ ಅಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಬಹುದಾಗಿದೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ರಾಘವ ಎಸ್.ಗೌಡ, ಸಬ್ಇನ್ಸ್ಪೆಕ್ಟರ್ ವಿ.ಗಜೇಂದ್ರ, ಸೋಮಶೇಖರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.