ದೇವನಹಳ್ಳಿ: ಪ್ರವಾಸಿ ಮಂದಿರದಲ್ಲಿನ ಉದ್ಯಾನವನದಲ್ಲಿ ಅಳವಡಿಸಿದ್ದ ಹಸಿರು ಹಾಸು ಹುಲ್ಲು ನೀರಿಲ್ಲದೆ ಒಣಗುತ್ತಿದ್ದು, ತ್ವರಿತವಾಗಿ ಕೊಳವೆ ಬಾವಿ ಕೊರೆಯಿಸಲು ನಾಗರಿಕರು ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಕೇಂದ್ರ ಸ್ಥಾನವಾಗಿರುವ ಪ್ರವಾಸಿ ಮಂದಿರದಲ್ಲಿ ನೂತನ ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡಿ ಕಳೆದ ವರ್ಷ ಉದ್ಘಾಟನೆಯಾಗಿತ್ತು. ಆ ಸಂದರ್ಭದಲ್ಲಿ ಪ್ರವಾಸಿ ಮಂದಿರದಲ್ಲಿ ಕಟ್ಟಡದ ಮುಂಭಾಗ ವಿವಿಧ ಅಲಂಕಾರಿಕ ಸಸ್ಯಗಳು, ಹಾಸು ಹುಲ್ಲು (ಗ್ರಾಸ್) ಹಾಕಿದ್ದರು. ಅದರ ನಿರ್ವಹಣೆಗೆ ಮುಂದಾಗಿದ್ದ ಸಿಬ್ಬಂದಿಗೆ ಈಗ ನೀರಿನ ಸಮಸ್ಯೆ ಎದುರಾಗಿದೆ. ಇರುವ ಕೊಳವೆ ಬಾವಿಯಲ್ಲಿ ನೀರಿಲ್ಲದೆ ಗಿಡಗಳು, ಹುಲ್ಲು ಒಣಗುತ್ತಿದೆ.
ಪ್ರಸ್ತುತ ಜಿಲ್ಲಾಡಳಿತ ಭವನಕ್ಕೆ ಜಿಲ್ಲಾ ಮಟ್ಟದ ಎಲ್ಲ ಇಲಾಖೆಗಳು ಸ್ಥಳಾಂತರಗೊಳ್ಳುತ್ತಿವೆ. ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಸ್ಥಳೀಯ ವಿವಿಧ ಪಕ್ಷಗಳ ಮುಖಂಡರು ಇಲ್ಲಿ ಸಭೆಗಳನ್ನು ನಡೆಸುತ್ತಾರೆ. ಹೊರ ರಾಜ್ಯದ ಅನೇಕ ಮಂದಿ ಪ್ರವಾಸಿ ಮಂದಿರಕ್ಕೆ ಬಂದು ಹೋಗುತ್ತಾರೆ.
ಇಲ್ಲಿ ಶೌಚಾಲಯಕ್ಕೂ ನೀರಿಲ್ಲದೆ ಬಟಲ್ಗಳನ್ನು ಖರೀದಿಸಿ ಉಪಯೋಗಿಸುತ್ತಿದ್ದಾರೆ. ಹಾಗಾಗಿ ಉದ್ಯಾನವನ್ನು ರಕ್ಷಿಸಿ, ನೀರಿನ ಸಮಸ್ಯೆ ಬಗೆಹರಿಸುವ ಜವಬ್ದಾರಿ ಲೋಕೋಪಯೋಗಿ ಇಲಾಖೆಗೆ ಸೇರಿದ್ದು, ಕೂಡಲೇ ಕಾರ್ಯ ಪ್ರವೃತ್ತರಾಗಿ ಕೊಳವೆಬಾವಿ ನಿರ್ಮಾಣ ಮಾಡಬೇಕು ಎಂದು ಮನವಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.