ADVERTISEMENT

ಮಳೆ, ಮಾವಿನ ಹೊಡೆತಕ್ಕೆ ದ್ರಾಕ್ಷಿ ಬೆಲೆ ಕುಸಿತ

ದ್ರಾಕ್ಷಿ ಕೊಯ್ಲು ಆರಂಭ * ಬೆಳೆಗಾರರು ಕಂಗಾಲು

ಕೆಂಪೇಗೌಡ ಎನ್.ವೆಂಕಟೇನಹಳ್ಳಿ
Published 4 ಜೂನ್ 2025, 7:10 IST
Last Updated 4 ಜೂನ್ 2025, 7:10 IST
ವಿಜಯಪುರ ಸಮೀಪ ರೈತರೊಬ್ಬರ ತೋಟದಲ್ಲಿ ದ್ರಾಕ್ಷಿ ಹಣ್ಣಾಗಿರುವುದು
ವಿಜಯಪುರ ಸಮೀಪ ರೈತರೊಬ್ಬರ ತೋಟದಲ್ಲಿ ದ್ರಾಕ್ಷಿ ಹಣ್ಣಾಗಿರುವುದು   

ವಿಜಯಪುರ: ದ್ರಾಕ್ಷಿ ಕೊಯ್ಲು ಆರಂಭಗೊಂಡಿದೆ. ಆದರೆ, ಇತ್ತೀಚೆಗೆ ಸುರಿದ ಮಳೆ ಹಾಗೂ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಹಣ್ಣುಗಳ ರಾಜ ಮಾವಿನ ಹೊಡೆತಕ್ಕೆ ದ್ರಾಕ್ಷಿ ಬೆಲೆ ಕುಸಿತಗೊಂಡಿರುವುದು ಬೆಳೆಗಾರರನ್ನು ಕಂಗಾಲಾಗಿಸಿದೆ.

ಜಿಲ್ಲೆಯ ಪೈಕಿ ದೇವನಹಳ್ಳಿ ತಾಲ್ಲೂಕಿನಲ್ಲಿ ಅಧಿಕವಾಗಿ ದ್ರಾಕ್ಷಿ ಬೆಳೆಯಲಾಗುತ್ತದೆ. ಪ್ರಮುಖವಾಗಿ ದಿಲ್‍ಖುಷ್, ರೆಡ್ ಗ್ಲೋಬ್, ಕೃಷ್ಣಾ ಶರತ್, ಕಾಬೂಲ್, ಕಪ್ಪು ದ್ರಾಕ್ಷಿ (ಬೆಂಗಳೂರು ಬ್ಲೂ) ಸೇರಿದಂತೆ ವಿವಿಧ ತಳಿ ದ್ರಾಕ್ಷಿಯನ್ನು ರೈತರು ಬೆಳೆಯುತ್ತಾರೆ. ಅಧಿಕವಾಗಿ ಜ್ಯೂಸ್ ತಯಾರಿಕೆಗೆ ದ್ರಾಕ್ಷಿ ಬಳಸಲಾಗುತ್ತಿದೆ. ಇಲ್ಲಿ ಬೆಳೆದ ದ್ರಾಕ್ಷಿ ಉತ್ತರ ಪ್ರದೇಶ, ಅಸ್ಸಾಂ, ದೆಹಲಿ, ಒಡಿಶಾ, ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯಗಳಿಗೆ ರಫ್ತಾಗುತ್ತಿದೆ. ಆದರೆ, ಈಗ ಕಟಾವಿಗೆ ಬಂದಿರುವ ದ್ರಾಕ್ಷಿಗೆ ಹೆಚ್ಚು ಬೇಡಿಕೆ ಇಲ್ಲವಾಗಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ.

ಬೆಲೆ ಕುಸಿತಕ್ಕೆ ಕಾರಣವೇನು?: ಇತ್ತೀಚೆಗೆ ಸತತ ಏಳೆಂಟು ದಿನ ಮಳೆ ಸುರಿಯಿತು. ಮಳೆ ಸುರಿದ ಪರಿಣಾಮವಾಗಿ ದ್ರಾಕ್ಷಿ ಹಣ್ಣಿನಲ್ಲಿ ಬಿರುಕು ಬಿಟ್ಟು ಹಾಳಾಗುತ್ತಿದೆ. ಇದರಿಂದ ಹೊರ ರಾಜ್ಯಗಳಿಗೆ ದ್ರಾಕ್ಷಿ ಹಣ್ಣು ಸರಬರಾಜು ಮಾಡಲು ಮೂರ್ನಾಲ್ಕು ದಿನಗಳ ಕಾಲ ಬೇಕಾಗಿರುವುದರಿಂದ ದ್ರಾಕ್ಷಿ ಕಟಾವು ಮಾಡಿ ಅಲ್ಲಿಗೆ ತಲುಪುವಷ್ಟರಲ್ಲಿ ಕೊಳೆತು ಹೋಗಲಿದೆ.

ADVERTISEMENT

ಇದೊಂದೆ ಕಾರಣವಲ್ಲದೇ ಈಗ ಮಾವಿನ ಸೀಸನ್ ಶುರುವಾಗಿದೆ. ಸೀಸನ್‍ಗೆ ತಕ್ಕಂತೆ ಗ್ರಾಹಕರು ಹಣ್ಣು ಖರೀದಿಯಲ್ಲೂ ಆಯ್ಕೆ ಮಾಡುತ್ತಾರೆ. ಈ ಕಾರಣಕ್ಕೆ ದ್ರಾಕ್ಷಿ ಬೆಲೆ ಕುಸಿತಕ್ಕೆ ಕಾರಣವಾಗಿದೆ ಎನ್ನುತ್ತಾರೆ ದ್ರಾಕ್ಷಿ ಬೆಳೆಗಾರರು.

ಪ್ರಸ್ತುತ ವರ್ಷ ದ್ರಾಕ್ಷಿ ಉತ್ತಮ ಇಳುವರಿ ಬಂದಿದೆ. ದ್ರಾಕ್ಷಿ ಹಣ್ಣಿಗೆ ಉತ್ತಮ ಬೆಲೆ ಬರುವುದೆಂಬ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದರಿಂದ ನಿರೀಕ್ಷೆ ಹುಸಿಗೊಳಿಸಿದೆ. ಇದರಿಂದ ವಿವಿಧ ತಳಿಯ ದ್ರಾಕ್ಷಿ ಬೆಳೆಗಳು ತೋಟಗಳಲ್ಲಿಯೇ ಉಳಿಯುವಂತಾಗಿದ್ದು, ತೋಟದಲ್ಲಿಯೇ ಕೊಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸೌಲಭ್ಯದ ಕೊರತೆ: ರೈತರು ಸ್ಥಳೀಯವಾಗಿ ದ್ರಾಕ್ಷಿ ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಸೌಲಭ್ಯವಿಲ್ಲದಿರುವುದು ದ್ರಾಕ್ಷಿ ಬೆಳೆಯುವ ರೈತರಿಗೆ ಹೆಚ್ಚು ತೊಂದರೆಯಾಗಿದೆ. ಅಲ್ಲದೆ, ದ್ರಾಕ್ಷಾರಸ ಘಟಕ ಮತ್ತು ವೈನ್ ತಯಾರಿಕಾ ಘಟಕ ಸ್ಥಾಪಿಸುವಂತೆ ಹಲವು ವರ್ಷದಿಂದ ದ್ರಾಕ್ಷಿ ಬೆಳೆಗಾರರು ಹಲವು ವರ್ಷದಿಂದ ಸರ್ಕಾರವನ್ನು ಒತ್ತಾಯಿಸಿದರೂ ಈವರೆಗೆ ಈಡೇರಿಲ್ಲ. ‌

ಮಳೆ ಬರುವ ಮುನ್ನ ಉತ್ತಮ ಬೆಲೆಗೆ ದ್ರಾಕ್ಷಿಯನ್ನು ಮಾರಾಟ ಮಾಡಿದ್ದ ರೈತರು ಮಳೆ ಬಂದ ನಂತರ ಕಟಾವಿಗೆ ಬಂದಿರುವ ದ್ರಾಕ್ಷಿಯನ್ನು ಖರೀದಿಸುವವರಿಲ್ಲದೆ ತೋಟದಲ್ಲಿಯೇ ಉಳಿಯುವಂತಾಗಿದೆ. ದ್ರಾಕ್ಷಿ ಬೆಳೆಯನ್ನು ನಂಬಿ ಲಕ್ಷಗಟ್ಟಲೇ ಬಂಡವಾಳ ಹಾಕಿದ್ದ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈಚೆಗೆ ಸುರಿದ ಮಳೆಯಿಂದ ದ್ರಾಕ್ಷಿ ಹಣ್ಣಿನ ಬೆಲೆ ಕುಸಿತಕ್ಕೆ ಕಾರಣವಾಗಿದೆ. 1 ಎಕರೆಯಲ್ಲಿ ಒಂದು ಬೆಳೆ ತೆಗೆಯಲೂ ಗೊಬ್ಬರ ಬೇಸಾಯ ಔಷಧಗಾಗಿ ಕನಿಷ್ಟ ಒಂದೂವರೆ ಲಕ್ಷ ಹಣ ಖರ್ಚಾಗುತ್ತದೆ. ಈಗಿನ ಬೆಲೆಗೆ ದ್ರಾಕ್ಷಿ ಮಾರಾಟ ಮಾಡಿದರೆ ಬೆಳೆಗೆ ಹಾಕಿದ ಬಂಡವಾಳ ರೈತರಿಗೆ ಸಿಗುವುದಿಲ್ಲ.
ರಮೇಶ್ ರಂಗನಾಥಪುರ ದ್ರಾಕ್ಷಿ ಬೆಳೆಗಾರ

ರೈತರಿಗೆ ಸವಾಲಿನ ಕೆಲಸ

ದ್ರಾಕ್ಷಿಗೆ ಬೆಲೆ ಇದ್ದಾಗ ವ್ಯಾಪಾರಸ್ಥರು ರೈತರ ತೋಟದ ಬಳಿಯೇ ಬಂದು ಖರೀದಿಸುತ್ತಾರೆ. ಬೆಲೆ ಕುಸಿತ ಕಂಡಾಗ ಇತ್ತ ಕಡೆ ಸುಳಿಯುವುದಿಲ್ಲ. ಇಂತಹ ಸಂದರ್ಭದಲ್ಲಿ ರೈತರೇ ವ್ಯಾಪಾರಸ್ಥರನ್ನು ಹುಡುಕಿ ಮಾರಾಟ ಮಾಡಿ ಬೆಳೆಗೆ ಹಾಕಿದ ಬಂಡವಾಳ ಮಾಡಿಕೊಳ್ಳುವುದು ರೈತನಿಗೆ ಸವಾಲಿನ ಕೆಲಸವಾಗಿದೆ.

Graphic text / Statistics - ದ್ರಾಕ್ಷಿ ಹಣ್ಣಿನ ದರ ದ್ರಾಕ್ಷಿ (ತಳಿ);₹ದರ ದಿಲ್ ಕುಷ್; 30-35 ರೆಡ್ ಗ್ಲೋಬ್;100 ಕೃಷ್ಣಾ ಶರತ್ ; 50ರಿಂದ60 ಕಪ್ಪು ದ್ರಾಕ್ಷಿ; 20 ಕಾಬೂಲ್; 30ರಿಂದ35

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.